ದಾವಣಗೆರೆ: ಅಡುಗೆ ಅನಿಲ ಗ್ರಾಹಕರು ನಿಗದಿತ ಅವಧಿಯೊಳಗೆ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ಅವರ ಅನಿಲ ಸಂಪರ್ಕವನ್ನು ತಾತ್ಕಾಲಿಕವಾಗಿ ಕಡಿತಗೊಳಿಸುವ ಸಾಧ್ಯತೆಯಿದೆ ಎಂದು ತೈಲ ಪೂರೈಕೆ ಸಂಸ್ಥೆಗಳು ಎಚ್ಚರಿಕೆ ನೀಡಿವೆ.
ಈಗಾಗಲೇ ಗ್ರಾಹಕರಿಗೆ ವಿತರಕರ ಮೂಲಕ ಮಾಹಿತಿ ನೀಡಲಾಗಿದ್ದರೂ ಅನೇಕರು ಕೆವೈಸಿ ಪೂರ್ಣಗೊಳಿಸಿಲ್ಲ. ಕೆವೈಸಿ ಮಾಡಿಸಲು ಆಗಸ್ಟ್ 14 ಅಂತಿಮ ದಿನವಾಗಿದೆ ಎಂದು ಸಿದ್ದೇಶ್ವರ ಗ್ಯಾಸ್ ಏಜೆನ್ಸಿ ತಿಳಿಸಿದೆ.
ಈ ಕುರಿತು ಭಾರತೀಯ ಪೆಟ್ರೋಲಿಯಂ ಸಂಸ್ಥೆಯು ರಾಜ್ಯದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಗೆ ಪತ್ರ ಬರೆದಿದ್ದು, ಇಲಾಖೆಯು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದೆ. ಆಗಸ್ಟ್ 14ರೊಳಗೆ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ಕೆವೈಸಿ ಆಗುವವರೆಗೆ ಸಂಪರ್ಕವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ ಹಾಗೂ ಸಹಾಯಧನ ನಿಲ್ಲಿಸಲಾಗುತ್ತದೆ. ಕೆವೈಸಿ ಮಾಡಿಸುವುದರಿಂದ ಅರ್ಹ ಫಲಾನುಭವಿಗಳನ್ನು ಗುರುತಿಸಲು ಮತ್ತು ಸಿಲಿಂಡರ್ಗಳ ಅಕ್ರಮ ಮಾರಾಟ ತಡೆಯಲು ಸಾಧ್ಯವಾಗಲಿದೆ. ಸಹಾಯಧನ ತ್ಯಜಿಸಿದ ಗ್ರಾಹಕರಿಗೂ ಈ ಪ್ರಕ್ರಿಯೆ ಕಡ್ಡಾಯವಾಗಿದೆ ಎಂದು ಏಜೆನ್ಸಿಯ ಪ್ರೊಪ್ರೈಟರ್ ಡಾ. ಜಿ.ಎಸ್ ಶೋಭಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ
ಗ್ರಾಹಕರು ಸಂಸ್ಥೆಯ ಮೊಬೈಲ್ ತಂತ್ರಾಂಶಗಳ ಮೂಲಕವೇ ಈ ಪ್ರಕ್ರಿಯೆ ಪೂರ್ಣಗೊಳಿಸಬಹುದು ಅಥವಾ ಆಧಾರ್ ಕಾರ್ಡ್ ನೀಡಿ ಅನಿಲ ವಿತರಕರ ಕಚೇರಿಯಲ್ಲೂ ಮಾಡಿಸಬಹುದು. ಪ್ರಕ್ರಿಯೆ ಮುಗಿಸದಿದ್ದರೆ ಗೃಹ ಬಳಕೆಯ ಸಿಲಿಂಡರ್ಗಳ ಬೆಲೆಯು ವಾಣಿಜ್ಯ ಸಿಲಿಂಡರ್ ದರಕ್ಕೆ ಏರಿಕೆಯಾಗಲಿದೆ. ಗ್ರಾಹಕರು ತಕ್ಷಣವೇ ದಾವಣಗೆರೆಯ ಬಾಪೂಜಿ ಪ್ರೌಢಶಾಲೆ ರಸ್ತೆಯಲ್ಲಿರುವ ಸಿದ್ದೇಶ್ವರ ಗ್ಯಾಸ್ ಏಜೆನ್ಸಿ ಕಚೇರಿಗೆ ಭೇಟಿ ನೀಡಿ ಪ್ರಕ್ರಿಯೆ ಪೂರ್ಣಗೊಳಿಸಬೇಕೆಂದು ಅವರು ಕೋರಿದ್ದಾರೆ.





Leave a comment