ಜಾಮ್ನಗರ: ‘ಪ್ರೀತಿ ಎಂದರೆ ಕೇವಲ ಸುಖ-ಸಂತೋಷ ಹಂಚಿಕೊಳ್ಳುವುದಷ್ಟೇ ಅಲ್ಲ, ಕಷ್ಟದಲ್ಲೂ ಬೆನ್ನೆಲುಬಾಗಿ ನಿಲ್ಲುವುದು’ ಎಂಬುದನ್ನು ಗುಜರಾತ್ನ ಜಾಮ್ನಗರದ ಯುವಕನೊಬ್ಬ ಸಾಬೀತುಪಡಿಸಿ ಇಡೀ ದೇಶದ ಗಮನ ಸೆಳೆದಿದ್ದಾನೆ.
ನಡೆದಿದ್ದೇನು?
ಜಾಮ್ನಗರದ ನಿವಾಸಿಗಳಾದ ಚಿರಾನ್ ಹಾಗೂ ಹಿರಾಲ ಅವರಿಗೆ ಮಾರ್ಚ್ ತಿಂಗಳಲ್ಲಿ ಅತ್ಯಂತ ವಿಜೃಂಭಣೆಯಿಂದ ನಿಶ್ಚಿತಾರ್ಥ ನೆರವೇರಿತ್ತು. ಪ್ರಸ್ತುತ ತಿಂಗಳಿನಲ್ಲಿ ಇಬ್ಬರ ವಿವಾಹ ಮಹೋತ್ಸವ ನೆರವೇರಬೇಕಿತ್ತು. ಮದುವೆಯ ತಯಾರಿಗಳು ಜೋರಾಗಿ ನಡೆಯುತ್ತಿದ್ದವು. ಆದರೆ, ಮನೆಯ ಬಾಲ್ಕನಿಯಲ್ಲಿ ಶುಚಿಗೊಳಿಸುವ ಕಾಯಕದಲ್ಲಿ ತೊಡಗಿದ್ದಾಗ ಅನಿರೀಕ್ಷಿತವಾಗಿ ಹೈವೋಲ್ಟೇಜ್ ವಿದ್ಯುತ್ ತಂತಿಯೊಂದು ತುಂಡಾಗಿ ಹಿರಾಲ ಅವರ ಮೇಲೆ ಬಿದ್ದಿದೆ.
ಈ ಭೀಕರ ಅಪಘಾತದಲ್ಲಿ ಹಿರಾಲ ತೀವ್ರವಾಗಿ ಗಾಯಗೊಂಡಿದ್ದು, ಅವರ ಜೀವ ಉಳಿಸಲು ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಆಕೆಯ ಎರಡೂ ಕಾಲುಗಳು ಹಾಗೂ ಒಂದು ಕೈಯನ್ನು ತೆಗೆದುಹಾಕಬೇಕಾಯಿತು.
ಸವಾಲಾದ ಜೀವನಕ್ಕೆ ಜೊತೆಯಾದ ಒಡನಾಡಿ:
ಮದುವೆಗೆ ಮುನ್ನವೇ ತನ್ನ ಮೂರು ಅಂಗಗಳನ್ನು ಕಳೆದುಕೊಂಡ ಹಿರಾಲ, ತನ್ನ ಜೀವನ ಮುಗಿದುಹೋಯಿತು ಎಂದು ಕಂಗಾಲಾಗಿದ್ದರು. ಆದರೆ ಈ ಹಂತದಲ್ಲಿ ಭಾವಿ ಪತಿ ಚಿರಾನ್ ಕೈಗೊಂಡ ತೀರ್ಮಾನ ಇಡೀ ಸಮಾಜಕ್ಕೇ ಮಾದರಿಯಾಗಿದೆ. “ನನಗೆ ಆಕೆಯ ಬಾಹ್ಯ ಶರೀರಕ್ಕಿಂತ ಮನಸ್ಸಿನ ಪಾವಿತ್ರ್ಯತೆ ಮುಖ್ಯ. ನಾನು ಹಿರಾಲಳನ್ನೇ ಮದುವೆಯಾಗುತ್ತೇನೆ” ಎಂದು ಘೋಷಿಸಿದ ಚಿರಾನ್, ಆಕೆಯ ಇಡೀ ಜೀವನಕ್ಕೆ ಆಸರೆಯಾಗಿ ನಿಲ್ಲುವುದಾಗಿ ಭರವಸೆ ನೀಡಿದ್ದಾರೆ.
ಆಧುನಿಕ ಕಾಲದಲ್ಲಿ ಸಣ್ಣಪುಟ್ಟ ಕಾರಣಗಳಿಗೆ ಸಂಬಂಧಗಳನ್ನು ಕಡಿದುಕೊಳ್ಳುವವರ ನಡುವೆ, ಚಿರಾನ್ ಅವರ ಈ ತ್ಯಾಗ ಮತ್ತು ಪ್ರೀತಿಯ ಪವಿತ್ರತೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.





Leave a comment