SUDDIKSHANA KANNADA NEWS/DAVANAGERE/DATE:01_11_2025
ದಾವಣಗೆರೆ: ನಮ್ಮ ಭಾಷೆಯನ್ನು ಉಳಿಸಿಕೊಳ್ಳುವುದಲ್ಲದೆ, ತಂತ್ರಜ್ಞಾನ, ನವೋದ್ಯಮ ಮತ್ತು ಪರಿಸರ ಸಂರಕ್ಷಣೆಯ ಮೂಲಕ ಕರ್ನಾಟಕವನ್ನು ಇನ್ನಷ್ಟು ಅಭಿವೃದ್ಧಿಪಥದತ್ತ ಕೊಂಡೊಯ್ಯಬೇಕಾಗಿದೆ. ದಾವಣಗೆರೆ ನಗರಕ್ಕೆ ವಿವಿಧ ಐಟಿ, ಬಿಟಿ ಕಂಪನಿಗಳನ್ನು ಆಹ್ವಾನಿಸಲಾಗಿದೆ. ಇದರಿಂದ ಸ್ಥಳೀಯವಾಗಿ ಉದ್ಯೋಗ ಸೃಷ್ಟಿ ಮಾಡುವ ಪ್ರಯತ್ನ ಭರದಿಂದ ಸಾಗಿದ್ದು, ಮುಂದಿನ ದಿನಗಳಲ್ಲಿ ಸಾಕಾರಗೊಳ್ಳುವ ವಿಶ್ವಾಸವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
READ ALSO THIS STORY: 18000ಕ್ಕೂ ಹೆಚ್ಚು ಶಿಕ್ಷಕರ ನೇಮಕಾತಿಗೆ ಅಧಿಸೂಚನೆ: ಉದ್ಯೋಗದ ಬಗ್ಗೆ ಮಹತ್ವದ ಮಾಹಿತಿ ಘೋಷಿಸಿದ ಸಿಎಂ ಸಿದ್ದರಾಮಯ್ಯ
ನಗರದ ಜಿಲ್ಲಾಡಳಿತ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಕರ್ನಾಟಕ ನಿರ್ಮಾಣದ ಹಿಂದೆ ಶತಮಾನದ ಹೋರಾಟವಿದೆ. ಭಾರತ ಸ್ವಾತಂತ್ರ್ಯ ಪಡೆದ ಬಳಿಕ ಭಾಷೆ ಆಧಾರದ ಮೇಲೆ 1956 ನವೆಂಬರ್ 1 ರಂದು ರಾಜ್ಯಪುನರ್ ರಚನೆ ಆಯೋಗದ ಶಿಫಾರಸಿನ ಮೇರೆಗೆ ಮೈಸೂರು (ಕರ್ನಾಟಕ) ರಾಜ್ಯ ಹುಟ್ಟಿಕೊಂಡಿತು. ಈ ದಿನವು ಕನ್ನಡಿಗರ ಆತ್ಮಸಮ್ಮಾನ, ಏಕತೆ ಹಾಗೂ ಗೌರವದ ದಿನವಾಗಿದೆ ಎಂದು ಹೇಳಿದರು.
ಕನ್ನಡ ಭಾಷೆ ಮಾತನಾಡುವ ಪ್ರದೇಶಗಳಾದ ಮುಂಬೈ, ಮದ್ರಾಸ್, ಹೈದರಾಬಾದ್ ಮತ್ತು ಮೈಸೂರು ಸಂಸ್ಥಾನಗಳಲ್ಲಿ ಹರಡಿಕೊಂಡಿದ್ದ ನಾಡನ್ನು ಒಂದುಗೂಡಿಸಲು ಅಲೂರು ವೆಂಕಟರಾಯರು. ಕೆಂಗಲ್ ಹನುಮಂತಯ್ಯ, ಎಸ್.ನಿಜಲಿಂಗಪ್ಪ ಹಾಗೂ ಸಾವಿರಾರು ಕನ್ನಡಾಭಿಮಾನಿಗಳು “ಒಂದು ನಾಡು, ಒಂದು ಭಾಷೆ, ಒಂದು ಕರ್ನಾಟಕ” ಎಂಬ ಘೋಷಣೆಯನ್ನು ಮೊಳಗಿಸಿ ಏಕೀಕರಣದ ಫಲವಾಗಿ ರಾಜ್ಯ ಉದಯಿಸಿತು. ಇದರ ಫಲವಾಗಿ ಇಂದು ನಾವು 70ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ ಎಂದರು.
ರಾಜ್ಯಕ್ಕೆ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಪರಂಪರೆ ಇದ್ದು 1200 ವರ್ಷಗಳಷ್ಟು ಪ್ರಾಚೀನ ಇತಿಹಾಸ ಹೊಂದಿದೆ. ಪಂಪ, ರನ್ನ, ಜನ್ನರಿಂದ ಹಿಡಿದು ಕುವೆಂಪು, ಬೇಂದ್ರೆ, ಗೋವಿಂದ ಪೈ, ಟಿ.ಪಿ. ಕೈಲಾಸಂ, ಕಾರಂತರಿಂದ ಚಂದ್ರಶೇಖರ ಕಂಬಾರ್ ತನಕ. ಬಸವಣ್ಣನ ಅನುಭವ ಮಂಟಪದಿಂದ ಹಿಡಿದು, ಕುವೆಂಪುವಿನ ವಿಶ್ವಮಾನವತೆಯ ಸಂದೇಶದವರೆಗೆ ನಮ್ಮ ನಾಡಿಗೆ ಹೆಮ್ಮೆ ತಂದಿವೆ. ಜೊತೆಗೆ ಸಂಗೀತದ ನಾಡು ಕೂಡ ಹೌದು. ತ್ಯಾಗರಾಜ, ಪುರಂದರ ದಾಸ, ಕನಕದಾಸರಿಂದ ಪ್ರಾರಂಭವಾದ ಸಂಪ್ರದಾಯದಿಂದ ಇಂದಿನ ಶಾಸ್ತ್ರೀಯ ಮತ್ತು ಜನಪದ ಸಂಗೀತದವರೆಗೆ ಎಲ್ಲೆಡೆ ಕನ್ನಡದ ಶಬ್ದ, ತಾಳ ಮತ್ತು ಭಾವ ಹರಿದಾಡುತ್ತಿದೆ ಎಂದರು.
ಹೊಯ್ಸಳರ ಕಲೆ, ವಿಜಯನಗರ ಸಾಮ್ರಾಜ್ಯದ ವೈಭವ, ಶರಣರ ತತ್ವ, ಕಾವ್ಯ ಸಂಪ್ರದಾಯ, ಐಟಿ ತಂತ್ರಜ್ಞಾನ, ಎಲ್ಲವೂ ಒಂದೇ ನಾಡಿನಲ್ಲಿ ಒಂದಾಗಿವೆ. ಅಷ್ಟೇ ಅಲ್ಲದೇ ಕರ್ನಾಟಕ ವೈಭವ ಮತ್ತು ವೈವಿಧ್ಯತೆಯಲ್ಲಿಯು ಮುಂದಿದೆ. ಪ್ರಾಕೃತಿಕ ಸಂಪತ್ತು, ಸಾಂಸ್ಕೃತಿಕ ಪರಂಪರೆ ಮತ್ತು ಮಾನವ ಸಂಪನ್ಮೂಲದಿಂದ ಕೂಡಿದ ಶ್ರೀಮಂತ ರಾಜ್ಯ, ಬೆಂಗಳೂರು ಇಂದು ಭಾರತದ “ಸಿಲಿಕಾನ್ ವ್ಯಾಲಿ” ಎಂದು ಖ್ಯಾತಿ ಪಡೆದಿದೆ. ಐಟಿ, ಬಯೋಟೆಕ್, ಶಿಕ್ಷಣ, ಕೃಷಿ, ಕಲೆ, ಎಲ್ಲ ಕ್ಷೇತ್ರಗಳಲ್ಲಿಯೂ ಕರ್ನಾಟಕ ತನ್ನ ಸ್ಥಾನವನ್ನು ಗಟ್ಟಿಯಾಗಿಸಿಕೊಂಡಿದೆ ಎಂದು ಹೇಳಿದರು.
ಕರ್ನಾಟಕ ಅಭಿವೃದ್ಧಿಯ ಮಾರ್ಗದಲ್ಲಿ ಮುಂದಡಿಯಿಟ್ಟಿದೆ. ಆದರೆ ಇನ್ನೂ ಅಭಿವೃದ್ಧಿ ಆಗಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಗುಣಮಟ್ಟದ ಶಿಕ್ಷಣ, ಆರೋಗ್ಯ, ಕೃಷಿ, ಕುಡಿಯುವ ನೀರು, ಯುವಕರಿಗೆ ಉದ್ಯೋಗ ದೊರೆಯುವಂತಾಗಬೇಕು. ಸರ್ವರಿಗೂ ಸಮಪಾಲು, ಸಮಬಾಳು ನೀಡಲು ಪಂಚ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತರುವ ಮೂಲಕ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿಯೂ ಶಕ್ತಿ ತುಂಬಲಾಗಿದೆ ಎಂದು ತಿಳಿಸಿದರು.






