SUDDIKSHANA KANNADA NEWS/DAVANAGERE/DATE:31_10_2025
ದಾವಣಗೆರೆ: ಹೆಚ್ಚುತ್ತಿರುವ ಹೊಸ ರೀತಿಯ ಅಪರಾಧ ಕೃತ್ಯಗಳಿಂದ ಭವಿಷ್ಯದಲ್ಲಿ ಪೊಲೀಸ್ ವೃತ್ತಿ ಮತ್ತಷ್ಟು ಕಠಿಣವಾಗಲಿದೆ ಎಂದು ಪೂರ್ವ ವಲಯ ಪೊಲೀಸ್ ಮಹಾ ನಿರೀಕ್ಷಕ ಡಾ.ರವಿಕಾಂತೇಗೌಡ ಅವರು ಆತಂಕ ವ್ಯಕ್ತಪಡಿಸಿದರು.
READ ALSO THIS STORY: ಬಂಗಾರದ ಆಭರಣವಿದ್ದ ಬ್ಯಾಗ್ ಸುಲಿಗೆ: ಕೆಲವೇ ಗಂಟೆಯಲ್ಲೇ ಆರೋಪಿ ಅಂದರ್!
ಜಿಲ್ಲಾ ಪೊಲೀಸ್ ಕಛೇರಿಯ ಸಭಾಂಗಣದಲ್ಲಿ ನಡೆದ 7 ನೇ ವಲಯ ಪೊಲೀಸ್ ಕರ್ತವ್ಯಕೂಟ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು-
ಕರ್ನಾಟಕದಲ್ಲಿ ಪ್ರತಿ ವರ್ಷ 27 ಸಾವಿರ ಸೈಬರ್ ಅಪರಾಧ ಪ್ರಕರಣಗಳು ವರದಿಯಾಗುತ್ತಿವೆ. ವಂಚನೆಯಾಗುತ್ತಿರುವ ಮೊತ್ತ ಹಲವು ನೂರು ಕೋಟಿಗಳಾಗಿವೆ. ಈ ರೀತಿ ಹೊಸ ಅಪರಾಧಗಳು, ಹೊಸ ಶೈಲಿಯ ಅಪರಾಧಗಳು ನಮ್ಮ ಮುಂದೆ ಬರುತ್ತಿದ್ದಾರೆ. ಇದರ ಮಧ್ಯೆ ಪೊಲೀಸ್ ಇಲಾಖೆಯಲ್ಲಿ ಕಟ್ಟಡಗಳು ಮತ್ತು ವಾಹನಗಳು ಉತ್ತಮಗೊಂಡಿರಬಹುದು, ಆದರೆ, ಪೊಲೀಸರಿಗೆ ಎದುರಾಗಿರುವ ಸವಾಲುಗಳ ಆಯಾಮವೇ
ಬದಲಾಗಿದೆ ಎಂದು ತಿಳಿಸಿದರು.
ಸೈಬರ್ ಅಪರಾಧಿಗಳು ಕೃತ್ಯ ಎಸಗಲು ಅನೇಕ ಟೂಲ್ ಗಳನ್ನು ಉಪಯೋಗಿಸುತ್ತಿದ್ದಾರೆ. ಅವುಗಳನ್ನು ಭೇದಿಸಲು ಇಲಾಖೆ ಕೂಡ ಅನೇಕ ಟೂಲ್ ಗಳನ್ನು ಉಪಯೋಗಿಸುತ್ತಿದೆ. ಆದರೆ ಈ ರೀತಿಯ ಕೃತ್ಯಗಳು ನಡೆಯದೇ ಇರಲು ಅಥವಾ ಅವುಗಳನ್ನು ಪರಿಣಾಮಕಾರಿಯಾಗಿ ಪತ್ತೆ ಹಚ್ಚುವ ಟೂಲ್ ಗಳನ್ನು ಉಪಯೋಗಿಸುವ ಚಾಕಚಕ್ಯತೆಯನ್ನು ಗಳಿಸಿಕೊಂಡರೆ ಅಪರಾಧಿಗಳಿಗಿಂತ ನಾವು ಒಂದು ಹೆಜ್ಜೆ ಮುಂದೆ ಹೋಗಬಹುದು. ಇಲ್ಲವಾದರೆ ಅಪರಾಧಿ ಸಾವಿರ ಹೆಜ್ಜೆ ಮುಂದೆ ಇರುತ್ತಾನೆ, ನಾವು ಕುಳಿತಲ್ಲೇ ಕುಳಿತಿರುತ್ತೇವೆ ಎಂದು ಹೇಳಿದರು.
ವೈಯಕ್ತಿಕ ಸಾಕ್ಷಿಗಳು ನ್ಯಾಯಾಲಯದ ಮುಂದೆ ಬಂದು ಪ್ರಮಾಣ ವಚನ ತೆಗೆದುಕೊಂಡ ನಂತರ, ಹಿಂದೆ ಪೊಲೀಸರಿಗೆ ನೀಡಿದ ಹೇಳಿಕೆಗೆ ವಿರುದ್ಧವಾಗಿ ನುಡಿಯುತ್ತಾರೆ. ಇದಕ್ಕೆ ಒತ್ತಡ, ಆಸೆ-ಆಮಿಷ ಅಥವಾ ವೈರಾಗ್ಯ ಸೇರಿದಂತೆ ಬೇರೆ ಬೇರೆ ಕಾರಣಗಳು ಇರಬಹುದು.. ಆದರೆ ವೈಜ್ಞಾನಿಕವಾಗಿ ಸಂಗ್ರಹ ಮಾಡಿದಂತಹ ಸಾಕ್ಷಿಗಳು ಯಾವತ್ತೂ ಬದಲಾವಣೆ ಆಗುವುದಿಲ್ಲ. ಅವುಗಳೇ ಪೊಲೀಸರನ್ನು ಕಾಪಾಡುತ್ತವೆ ಎಂದು ಹೇಳಿದರು.
ತರಬೇತಿಯ ನಂತರ ತಮ್ಮ ಅನಿಸಿಕೆ ವ್ಯಕ್ತಪಡಿಸಿದ ಶಿವಮೊಗ್ಗ ವಿಭಾಗದ ಸಂಚಾರಿ ವಿಭಾಗದ ಸಿಪಿಐ ದೇವರಾಜ್ ಪೊಲೀಸ್ ಕರ್ತವ್ಯದಲ್ಲಿ ವೃತ್ತಿಪರತೆಯನ್ನು ಬೆಳೆಸಿಕೊಳ್ಳಲು ಮತ್ತು ಆಧುನಿಕ ತನಿಖಾ ಕೌಶಲ್ಯಗಳನ್ನು ಕಲಿಯಲು ಪೊಲೀಸ್ ಕರ್ತವ್ಯ ಕೂಟಗಳು ಅತ್ಯಂತ ಸಹಕಾರಿಯಾಗಿವೆ. ಇಂದಿನ ದಿನಗಳಲ್ಲಿ ಸಾರ್ವಜನಿಕರು ಪೊಲೀಸರ ಕಾರ್ಯವೈಖರಿ ಮತ್ತು ವೃತ್ತಿಪರತೆಯನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಾರೆ ಎಂದು ಇತ್ತೀಚೆಗೆ ಮೈಸೂರು ದಸರಾ ಹಾಗೂ
ಧರ್ಮಸ್ಥಳದ ಪ್ರಕರಣಗಳನ್ನು ಉದಾಹರಿಸಿದರು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಪಿಎಸ್ಐ ಅರವಿಂದ ಬಿ. ಎಸ್. ಅವರು ನಮ್ಮ ದೈನಂದಿನ ಕರ್ತವ್ಯಗಳಲ್ಲಿ ತರಬೇತಿಯು ತುಂಬಾ ಪ್ರಮುಖವಾಗಿದೆ.. ಇಂತಹ ಸ್ಪರ್ಧೆಗಳಿಂದ ನಮ್ಮ ಕರ್ತವ್ಯದ ಸಮಯದಲ್ಲಿ ಹೆಚ್ಚಿನ ಪರಿಪಕ್ವತೆ ಕಾಣಬಹುದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ದಾವಣಗೆರೆಯ ಪೊಲೀಸ್ ಅಧೀಕ್ಷಕಿಉಮಾ ಪ್ರಶಾಂತ್, ಹಾವೇರಿ ಜಿಲ್ಲೆಯ ಪೊಲೀಸ್ ಅಧೀಕ್ಷಕಿ ಯಶೋಧಾ ವಂಟಗೋಡಿ, ಶಿವಮೊಗ್ಗ ಜಿಲ್ಲೆಯ ಪೊಲೀಸ್ ಅಧೀಕ್ಷಕ ಮಿಥುನ್ ಕುಮಾರ್, ದಾವಣಗೆರೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ, ವಲಯ ಮಟ್ಟದ ಕ್ರೀಡಾಕೂಟದ ನೋಡಲ್ ಅಧಿಕಾರಿ ಡಿವೈಎಸ್ಪಿ ರುದ್ರೇಶ್ ಎ. ಕೆ., ಡಿವೈಎಸ್ಪಿ ಪಿ. ಬಿ. ಪ್ರಕಾಶ್ ಮತ್ತಿತರರು ಹಾಜರಿದ್ದರು.






