SUDDIKSHANA KANNADA NEWS| DAVANAGERE| DATE:15-04-2023
ದಾವಣಗೆರೆ: ನಾಮಪತ್ರ ಸಲ್ಲಿಕೆಗೆ ಕೆಲವೇ ದಿನಗಳು ಬಾಕಿ ಇರುವಂತೆ ಕಾಂಗ್ರೆಸ್ (CONGRESS) ಪಕ್ಷವು ಎರಡು ಕ್ಷೇತ್ರಗಳಿಗೆ ಟಿಕೆಟ್ ಪ್ರಕಟಿಸಿದೆ.
ಜಗಳೂರು ಕ್ಷೇತ್ರಕ್ಕೆ ದೇವೇಂದ್ರಪ್ಪ ಹಾಗೂ ಹೊನ್ನಾಳಿ ಕ್ಷೇತ್ರಕ್ಕೆ ಶಾಂತನಗೌಡರಿಗೆ ಮಣೆ ಹಾಕಿದೆ. ಜಗಳೂರು ಕಾಂಗ್ರೆಸ್ ನಲ್ಲಿ ಬಂಡಾಯ ಏಳುವ ಸಾಧ್ಯತೆ ಹೆಚ್ಚಿದ್ದು, ಟಿಕೆಟ್ ಆಕಾಂಕ್ಷಿಯಾಗಿದ್ದ ಹೆಚ್. ಪಿ. ರಾಜೇಶ್ ಪಕ್ಷೇತರ ಅಥವಾ ಬೇರೆ ಪಕ್ಷದಿಂದ ಸ್ಪರ್ಧೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಹರಿಹರ ಕ್ಷೇತ್ರಕ್ಕೆ ಟಿಕೆಟ್ ಘೋಷಿಸದೇ ಕೈ ಪಡೆ ಅಚ್ಚರಿ ಮೂಡಿಸಿದೆ.
ದಾವಣಗೆರೆ ಉತ್ತರ, ದಾವಣಗೆರೆ ದಕ್ಷಿಣ, ಜಗಳೂರು, ಮಾಯಕೊಂಡ, ಚನ್ನಗಿರಿ ಹಾಗೂ ಹೊನ್ನಾಳಿಗೆ ತನ್ನ ಹುರಿಯಾಳುಗಳನ್ನು ಕಣಕ್ಕಿಳಿಸಿದ್ದರೆ, ಹರಿಹರ ಸಸ್ಪೆನ್ಸ್ (HARIHARA SUSPENSE) ಮುಂದುವರಿದಿದೆ. ಹಾಲಿ ಶಾಸಕ ರಾಮಪ್ಪ, ನಂದಿಗಾವಿ ಶ್ರೀನಿವಾಸ್, ನಾಗೇಂದ್ರಪ್ಪ ಸೇರಿದಂತೆ ಇನ್ನು ಕೆಲವರು ಟಿಕೆಟ್ ಗೆ ಲಾಬಿ ನಡೆಸಿದ್ದರು. ಹರಿಹರ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ನೀಡಬೇಕೆಂಬ ಗೊಂದಲ ಮುಂದುವರಿದಿದ್ದು, ಅಚ್ಚರಿ ಅಭ್ಯರ್ಥಿ ಕಣಕ್ಕಿಳಿಸಿದರೆ ಅಚ್ಚರಿ ಏನಿಲ್ಲ.
ಮಾಹಿತಿ ಪ್ರಕಾರ ನಾಗೇಂದ್ರಪ್ಪ, ನಂದಿಗಾವಿ ಶ್ರೀನಿವಾಸ್ ಹಾಗೂ ರಾಮಪ್ಪ ಅವರಲ್ಲಿ ಒಬ್ಬರಿಗೆ ಟಿಕೆಟ್ ಸಿಗುವುದು ಖಚಿತ. ಮೂರನೇ ಪಟ್ಟಿಯಲ್ಲಿ ಕಾಂಗ್ರೆಸ್ ಪಕ್ಷವು ನಾಲ್ವರು ಶಾಸಕರಿಗೆ ಟಿಕೆಟ್ ನೀಡದೇ ಹೊಸಬರಿಗೆ ಆದ್ಯತೆ ನೀಡಿದ್ದು, ಹಾಗಾಗಿ, ರಾಮಪ್ಪರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ. ನಂದಿಗಾವಿ ಶ್ರೀನಿವಾಸ್ ಅವರು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ನಾಗೇಂದ್ರಪ್ಪ ಅವರು ಪಕ್ಷಕ್ಕಾಗಿ ದುಡಿದಿದ್ದಾರೆ. ಈ ಮೂವರು ಕುರುಬ ಸಮುದಾಯದ ಮುಖಂಡರಾಗಿದ್ದು, ಈ ಪೈಕಿ ಒಬ್ಬರಿಗೆ ನೀಡಲಾಗುತ್ತದೆ. ಅಚ್ಚರಿ ಬೇರೆ ಏನಾದರೂ ಆಗಬಹುದಾ ಎಂಬ ಮಾತು ಕೇಳಿ ಬರುತ್ತಿವೆ.
ಹೊನ್ನಾಳಿಯಿಂದ ಸ್ಪರ್ಧಿಸಲು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್. ಬಿ. ಮಂಜಪ್ಪ ತೀವ್ರ ಪೈಪೋಟಿ ನಡೆಸಿದ್ದರು. ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಶಾಂತನಗೌಡರಿಗೆ ಟಿಕೆಟ್ ಘೋಷಿಸಿದ್ದು, ಬಿಜೆಪಿ ಅಭ್ಯರ್ಥಿ ಎಂ. ಪಿ. ರೇಣುಕಾಚಾರ್ಯರ ವಿರುದ್ಧ ಕಣಕ್ಕಿಳಿದಿದ್ದಾರೆ. ಜಗಳೂರು ಕೈ ಟಿಕೆಟ್ ಭೀತಿ ಹಿನ್ನೆಲೆಯಲ್ಲಿ ಇಂದು ಸಭೆ ಕರೆದಿದ್ದ ಹೆಚ್. ಪಿ. ರಾಜೇಶ್ ಕಾಂಗ್ರೆಸ್ ಬಂಡಾಯವಾಗಿ ಕಣಕ್ಕಿಳಿಯುವುದು ನಿಶ್ಚಿತ ಎನ್ನಲಾಗುತ್ತಿದೆ. ಪಕ್ಷದ ನಾಯಕರು ಮನವೊಲಿಸಲು ಯತ್ನಿಸುವ ಸಾಧ್ಯತೆ ಇದೆ. ಇದಕ್ಕೆ ಮಣಿಯುತ್ತಾರಾ, ಇಲ್ಲವೋ ಸ್ಪರ್ಧೆ ಮಾಡಿಯೇ ತೀರುತ್ತಾರಾ ಎಂಬ ಘೋಷಣೆ ಹೊರಬರಬೇಕಿದೆ.
ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ ಆರು ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆಯಾಗಿದೆ. ಮಾಯಕೊಂಡ ಬಿಜೆಪಿಯಲ್ಲಿ ಬಂಡಾಯದ ಬೇಗುದಿ ಹೆಚ್ಚಾಗಿದೆ. ಬಸವರಾಜ್ ನಾಯ್ಕ್ ರಿಗೆ ಬಿಜೆಪಿಯು ಮಾಯಕೊಂಡದಲ್ಲಿ ಕಣಕ್ಕಿಳಿಸಿದೆ. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ 11 ಆಕಾಂಕ್ಷಿಗಳು ಜಿಲ್ಲಾ ನಾಯಕರು, ರಾಜ್ಯ ನಾಯಕರ ಮಾತಿಗೆ ಮಣಿಯುತ್ತಿಲ್ಲ. ಸಂಸದ ಜಿ. ಎಂ. ಸಿದ್ದೇಶ್ವರ ಭಿನ್ನಮತ ಶಮನಗೊಳಿಸುವ ಪ್ರಯತ್ನ ಮಾಡಿದ್ದಾರಾದರೂ ಬಂಡಾಯಗಾರರು ಕ್ಯಾರೇ ಎನ್ನುತ್ತಿಲ್ಲ. ಇದು ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ.
ಬಿಜೆಪಿ (BJP) ಯುವ ಘಟಕದ ಜಿಲ್ಲಾಧ್ಯಕ್ಷ ಆರ್. ಎಲ್. ಶಿವಪ್ರಕಾಶ್ ಅವರನ್ನು ಆಕಾಂಕ್ಷಿಗಳೆಲ್ಲರೂ ಸೇರಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಸಿ, ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ ಕುರಡಿ ಗ್ರಾಮದಲ್ಲಿ ಪೂಜಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಜೊತೆಗೆ ಪ್ರಚಾರವನ್ನೂ ಶುರು ಮಾಡಿದ್ದಾರೆ. ಬಸವರಾಜ್ ನಾಯ್ಕ್ ರನ್ನು ಬಿಟ್ಟು ಬೇರೆ ಯಾರಿಗಾದರೂ ನೀಡಲಿ ಎಂಬ ನಿಲುವಿನಲ್ಲಿ ಬದಲಾಗಿಲ್ಲ. ಬಂಡಾಯ ಅಭ್ಯರ್ಥಿ ಕಣಕ್ಕಿಳಿಯುವುದು ನಿಶ್ಛಿತ ಎಂದು ಹೇಳಲಾಗುತ್ತಿದೆಯಾದರೂ ಕೊನೆಕ್ಷಣದಲ್ಲಿ ಏನಾದರೂ ಆಗಬಹುದು ಎಂಬ ಮಾತು ಕೇಳಿ ಬರುತ್ತಿದೆ.
ಬಿಸಿಲಿನ ಝಳ ಏರುತ್ತಿರುವಂತೆ ನಿಧಾನವಾಗಿ ಚುನಾವಣಾ ಕಾವು ದಾವಣಗೆರೆ ಜಿಲ್ಲೆಯಲ್ಲಿ ಏರುತ್ತಿದೆ. ಹರಿಹರ ಒಂದು ಕ್ಷೇತ್ರ ಬಿಟ್ಟರೆ ಎಲ್ಲಾ ಕ್ಷೇತ್ರಗಳಲ್ಲಿ ಅಭ್ಯರ್ಥಿ ಘೋಷಿಸಿರುವ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವಿಗೆ ತಂತ್ರಗಾರಿಕೆ ರೂಪಿಸತೊಡಗಿದ್ದಾರೆ. ಬಿಜೆಪಿಯು ಏಳು ಕ್ಷೇತ್ರಗಳಲ್ಲಿ ಅಭ್ಯರ್ಥಿ ಘೋಷಿಸಿದ್ದು, ರಣತಂತ್ರ ರೂಪಿಸಿದೆ.