Site icon Kannada News-suddikshana

ಪುಣ್ಯತಿಥಿಯ ಸಂಸ್ಮರಣಾ ಕಾರ್ಯಕ್ರಮದಲ್ಲೇ ಅಪಮಾನ: ಇತಿಹಾಸ ತಿರುಚುವ ಕೆಲಸ ನಿಲ್ಲಿಸಿ ಹೆಚ್. ಸಿ. ಮಹಾದೇವಪ್ಪ!

H. C. Mahadevappa

SUDDIKSHANA KANNADA NEWS/ DAVANAGERE/DATE:04_08_2025

ಬೆಂಗಳೂರು: ಮೈಸೂರು ರಾಜ್ಯವನ್ನು ಸರ್ವಾಂಗೀಣ ಪ್ರಗತಿಯತ್ತ ಕೊಂಡೊಯ್ದ ಮಹಾರಾಜ, ಜನತೆಗಾಗಿ ಜೀವನವಿಡೀ ದುಡಿದ ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪುಣ್ಯತಿಥಿಯ ಸಂಸ್ಮರಣಾ ಕಾರ್ಯಕ್ರಮದಲ್ಲಿಯೇ ಒಡೆಯರ್ ಕೊಡುಗೆಯನ್ನು ಅಪಮಾನಿಸುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ಸಚಿವ ಹೆಚ್. ಸಿ. ಮಹಾದೇವಪ್ಪ ಹೇಳಿಕೆ ಸರಿಯಲ್ಲ ಎಂದು ಬಿಜೆಪಿ ಕಿಡಿಕಾರಿದೆ.

READ ALSO THIS STORY: ಕನ್ನಂಬಾಡಿ ಕಟ್ಟೆಗೆ ಅಡಿಪಾಯ ಹಾಕಿದ್ದು ಟಿಪ್ಪು: “ಹೆಚ್. ಸಿ. ಮಹಾದೇವಪ್ಪನವರೇ ರಾಜಮನೆತನದ ಕೊಡುಗೆ ಗೌರವಿಸಿ, ಇಲ್ಲದಿದ್ದರೆ ತೆಪ್ಪಗಿರಿ!”
KRS ಗೆ ಅಡಿಗಲ್ಲು ಹಾಕಿದ್ದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು. ಅದರೆ, ಮೇಧಾವಿ ಇತಿಹಾಸ ತಜ್ಞ ಎಚ್.ಸಿ.ಮಹದೇವಪ್ಪ ಅವರು ಕೆಆರ್ ಎಸ್‌ಗೆ ಅಡಿಗಲ್ಲು ಹಾಕಿದ್ದು ಮತಾಂಧ ಟಿಪ್ಪು ಎನ್ನುವ ಮೂಲಕ ತಮ್ಮ ಅಂಧಕಾರವನ್ನು ತೋರಿಸಿದ್ದಾರೆ ಎಂದು ಕಿಡಿಕಾರಿದೆ.
ಟಿಪ್ಪು ಸತ್ತಿದ್ದು 1799 ರಲ್ಲಿ KRS ಕೆಲಸ ಶುರುವಾಗಿದ್ದು 1911 ರಲ್ಲಿ ಅಂದರೆ, 112 ವರ್ಷಗಳ ಮುಂಚೆಯೇ ಟಿಪ್ಪು ಅಡಿಗಲ್ಲು ಹಾಕಿ ಇಟ್ಟು ಹೋಗಿದ್ದನಾ ಮಿಸ್ಟರ್ ಮಹಾದೇವಪ್ಪ? ಕೆಆರ್ ಎಸ್ ಅಡಿಗಲ್ಲು ಹೋಗಲಿ, ಟಿಪ್ಪು ಜನರಿಗಾಗಿ ಒಂದೇ ಒಂದು ಕೆರೆ ಕಟ್ಟೆ ಕಟ್ಟಿದ ಉದಾಹರಣೆ ಕೊಡಿ ಸಾಕು.
ಸಿದ್ದರಾಮಯ್ಯ ಅವರು, ಅವರ ಪುತ್ರ ಯತೀಂದ್ರ, ಹೆಚ್.ಸಿ. ಮಹಾದೇವಪ್ಪ ಅವರು ಒಡೆಯರ್ ಗೌರವಕ್ಕೆ ಧಕ್ಕೆ ತಂದು ಮತಾಂಧ ಟಿಪ್ಪು ಮತ್ತು ಸಿದ್ದರಾಮಯ್ಯ ಅವರನ್ನು ಅಟ್ಟಕ್ಕೆ ಏರಿಸಿ ಇತಿಹಾಸ ತಿರುಚುವ ಕೆಲಸ‌ ಮಾಡುತ್ತಿದ್ದಾರೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಈ ಹಿಂದಿನ ಅವಧಿಯಲ್ಲಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಡೆಯರ್ ಮನೆತನದ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಾ ಬಂದಿದ್ದರು. ಅಧಿಕಾರಕ್ಕಾಗಿ ಸಂವಿಧಾನ ಮತ್ತು ಇತಿಹಾಸ ತಿರುಚುವಿಕೆಯ ಕೆಲಸವನ್ನು ಕಾಂಗ್ರೆಸ್ ನೆಹರು ಕಾಲದಿಂದಲೂ ಮಾಡುತ್ತಿದೆ‌. ದೇಶವನ್ನು ಲೂಟಿ ಹೊಡೆದ ಆಕ್ರಮಣಕಾರಿಗಳನ್ನು ವಿಜೃಂಭಿಸುವ ಕೆಲಸ ಕಾಂಗ್ರೆಸ್ ಮಾಡಿದೆ. 1799 ರಲ್ಲಿ ಮೃತರಾದ ಟಿಪ್ಪು ಸುಲ್ತಾನ್ ಕಾಲದಲ್ಲಿ ಯಾವುದೇ ಅಣೆಕಟ್ಟು ನಿರ್ಮಾಣವಾಗಿಲ್ಲ. 1911-1931 ರಲ್ಲಿ ಅವಧಿಯಲ್ಲಿ ನಿರ್ಮಾಣವಾದ ಕೃಷ್ಣರಾಜ ಸಾಗರ ಅಣೆಕಟ್ಟಿನ ಪರಿಕಲ್ಪನೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರದ್ದು ಹಾಗೂ ಕನ್ನಂಬಾಡಿ ನಿರ್ಮಾಣದ ನೇತೃತ್ವವನ್ನು ಹೊತ್ತಿದ್ದು ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯನವರು ಎಂದು ತಿಳಿಸಿದೆ.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ನಿರ್ಮಿಸಿದ ಕಾಂಗ್ರೆಸ್ ಸರ್ಕಾರ, ವೋಟ್ ಬ್ಯಾಂಕ್‌‌ಗಾಗಿ ಇತಿಹಾಸವನ್ನು ತಿರುಚುವ ಕೆಲಸವನ್ನು ಇನ್ನಾದರೂ ನಿಲ್ಲಿಸಬೇಕು ಎಂದು ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯಿಸಿದೆ.

Exit mobile version