SUDDIKSHANA KANNADA NEWS/ DAVANAGERE/ DATE:24_07_2025
ದಾವಣಗೆರೆ: ಅಡಿಕೆಯನ್ನು ಕಡಿಮೆ ಮಳೆ ಆಶ್ರಿತ ಪ್ರದೇಶದಲ್ಲಿಯು ಕೊಳವೆಬಾವಿ ಮೂಲಕ ಬೆಳೆಯಲಾಗುತ್ತಿದ್ದು ಇದರಿಂದ ಅಂತರ್ಜಲ ಮಟ್ಟ ಕುಸಿತಕ್ಕೆ ಕಾರಣವಾಗಿದೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
READ ALSO THIS STORY: ಕಡೂರಿನಲ್ಲಿ ಅಪಘಾತ: ದಾವಣಗೆರೆಯ ರಿಯಲ್ ಎಸ್ಟೇಟ್ ಉದ್ಯಮಿ ಪ್ರತಾಪ್ ಪವಾರ್ ದಾರುಣ ಸಾವು
ಅಡಿಕೆ ಪ್ರದೇಶ ವಿಸ್ತೀರ್ಣದ ಬದಲಾಗಿ ಪರ್ಯಾಯ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಯಿಸುವ ಯೋಜನೆ ರೂಪಿಸಲು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಕೃಷಿ ಯೋಜನೆಗಳ ಜಿಲ್ಲಾ ಮಟ್ಟದ ಅನುಷ್ಟಾನ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಡಕೆಯನ್ನು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಹೆಚ್ಚು ಬೆಳೆಯಲಾಗುತ್ತಿದೆ. ಆದರೆ ಕೊಳವೆಬಾವಿ ಆಶ್ರಯಿಸಿ ಬೆಳೆಯಲಾಗುತ್ತಿರುವುದರಿಂದ ಅಂತರ್ಜಲ ಮಟ್ಟ ಕುಸಿದ ಅಪಾಯ ಮಟ್ಟ ತಲುಪಿದೆ. ಬೇಸಿಗೆಯಲ್ಲಿ ಅಂತರ್ಜಲ ಮಟ್ಟದ ಇನ್ನೂ ಕೆಳಮಟ್ಟಕ್ಕೆ ಹೋಗಲಿದೆ. ಇದರಿಂದ ರೈತರಿಗೂ ನಷ್ಟವಾಗಲಿದ್ದು ಪ್ರಾಕೃತಿಕ ಸಂಪತ್ತು ವ್ಯರ್ಥವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಎರಡು ತಾಲ್ಲೂಕುಗಳಲ್ಲಿ ಮಾತ್ರ ಅಂತರ್ಜಲ ಮಟ್ಟ ಉತ್ತಮವಾಗಿದೆ. ಉಳಿದಂತೆ ನಿರ್ಣಾಯಕ ಹಂತ ಮತ್ತು ಬಳಕೆಯ ಮೀರಿದ ಹಂತವನ್ನು ತಲುಪಿದೆ. ಹರಿಹರ, ನ್ಯಾಮತಿ ಹೊರತುಪಡಿಸಿ ದಾವಣಗೆರೆ, ಹೊನ್ನಾಳಿ ನಿರ್ಣಾಯಕ ಹಂತ ತಲುಪಿದ್ದು ಜಗಳೂರು, ಚನ್ನಗಿರಿ ಹೆಚ್ಚು ಬಳಕೆ ಮಾಡಿದ್ದು ಅಂತಿಮ ಹಂತವನ್ನು ಅಂತರ್ಜಲ ಬಳಕೆಯಲ್ಲಿ ತಲುಪಿದೆ. ಆದ್ದರಿಂದ ಅಡಿಕೆಗೆ ಪರ್ಯಾಯವಾಗಿ ಮೆಕೆಡೋನಿಯ, ಸೀತಾಫಲ, ಅಂತರ ಬೆಳೆಯನ್ನಾಗಿ ಕೋಕೋ, ಪೆಪ್ಪರ್ ಬೆಳೆಯಲು ಯೋಜನೆ ರೂಪಿಸಬೇಕೆಂದು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
30 ಹೆಚ್.ಪಿ.ವರೆಗೆ ಟ್ರ್ಯಾಕ್ಟರ್; ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ರೈತರಿಗೆ 30 ಹೆಚ್.ಪಿ.ವರೆಗೆ ಸರ್ಕಾರದ ಸಹಾಯಧನದಡಿ ಟ್ರ್ಯಾಕ್ಟರ್ ನೀಡಲು ಯೋಜನೆ ರೂಪಿಸಲು ತಿಳಿಸಿದ ಅವರು ತೋಟಗಾರಿಕೆ ಇಲಾಖೆಯಿಂದ 30 ಹೆಚ್.ಪಿ.ವರೆಗಿನ 90 ಟ್ರ್ಯಾಕ್ಟರ್ ಗಳನ್ನು ಈ ವರ್ಷ ನೀಡಲಾಗುತ್ತದೆ. ಸಾಮಾನ್ಯ ವರ್ಗದವರಿಗೆ ರೂ.75 ಸಾವಿರ ಮತ್ತು ಎಸ್.ಸಿ. ಎಸ್.ಟಿ ವರ್ಗದವರಿಗೆ ರೂ. 2.50 ಲಕ್ಷ ಸಹಾಯಧನ ನೀಡಲಾಗುತ್ತದೆ ಎಂದು ತೋಟಗಾರಿಕೆ ಉಪನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.