SUDDIKSHANA KANNADA NEWS/ DAVANAGERE/ DATE:10-02-2025
ದಾವಣಗೆರೆ: ಹರಿಹರ ತಾಲೂಕಿನ ರಸ್ತೆಗಳು ಹಾಳಾಗಿದ್ದು, ದೇವರು ರಸ್ತೆ ದುರಸ್ತಿಪಡಿಸುವ ಒಳ್ಳೆಯ ಬುದ್ದಿ ನೀಡಲಿ. ಚುನಾವಣೆ ವೇಳೆ ಧಾರ್ಮಿಕ ವಿಚಾರದಲ್ಲಿ ಜನರನ್ನು ಬಳಸಿಕೊಂಡು ಮತ ಪಡೆದು ಆನಂತರ ಗಮನ ಹರಿಸದಿರುವುದು ವಿಷಾದನೀಯ ಎಂದು ಇನ್ ಸೈಟ್ಸ್ ಐಎಎಸ್ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷರೂ ಆದ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಹೇಳಿದರು.
ಜಿಲ್ಲೆಯ ಹರಿಹರ ತಾಲೂಕಿನ ಉಕ್ಕಡಗಾತ್ರಿ ಗ್ರಾಮದಲ್ಲಿ ನಡೆದ ಕೋಟಿಹಾಳ ಬೀರಲಿಂಗೇಶ್ವರ ಪ್ರಾಣ ಪ್ರತಿಷ್ಠಾಪನೆ, ದೇವಸ್ಥಾನದ ಉದ್ಘಾಟನೆ, ವಾಸ್ತುಶಾಂತಿ ಹಾಗೂ ಸರಳ ಸಾಮೂಹಿಕ ವಿವಾಹ ಮಹೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ನಿಮ್ಮಿಂದ ಮತ ಪಡೆದು ಆಯ್ಕೆಯಾಗಿ ಹೋದ ಜನಪ್ರತಿನಿಧಿಗಳು ಜನರ ಸೇವೆ ಮಾಡಲು ಹಾಗೂ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಉಳಿವಿಗೆ ಶ್ರಮಿಸುವಂತೆ ಹಾಗೂ ಜನರನ್ನು ಬೆಳೆಸುವಂತೆ ದೇವರು ಅನುಗ್ರಹ ನೀಡಲಿ ಎಂದು ಪ್ರಾರ್ಥಿಸಿದರು.
ಹರಿಹರ ತಾಲೂಕಿನ ಕೊನೆ ಭಾಗದ ಜನರಿಗೆ ಭದ್ರಾ ನೀರು ಸಿಗುತ್ತಿಲ್ಲ. ಇದರಿಂದ ಕಷ್ಟದಲ್ಲಿದ್ದಾರೆ. ಇವರಿಗೂ ನೀರು ಸಿಕ್ಕು ಬದುಕು ಹಸನಾಗಲಿ. ರೈತರ ಬದುಕು ಚೆನ್ನಾಗಿರಬೇಕು. ಆ ದೇವರ ಆಶೀರ್ವಾದವೂ ಇರಲಿ ಎಂದು ಪ್ರಾರ್ಥಿಸುತ್ತೇನೆ. ಧಾರ್ಮಿಕ ವಿಚಾರ ಬಂದಾಗ ಎಲ್ಲರೂ ಒಟ್ಟಾಗಿ ದೇವರ ಕಾರ್ಯ ನೆರವೇರಿಸುತ್ತಾರೆ. ಇದೇ ರೀತಿಯಲ್ಲಿ ಸರ್ಕಾರಿ ಶಾಲೆಗಳ ಉಳಿವಿಗೆ ಒಗ್ಗಟ್ಟಾಗಿ ಎಲ್ಲರೂ ಶ್ರಮಿಸಬೇಕು. ಹಳ್ಳಿ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು. ಈ ಮೂಲಕ ಶೈಕ್ಷಣಿಕ ಕ್ರಾಂತಿ ಆಗಬೇಕು. ಐಎಎಸ್, ಐಪಿಎಸ್, ಕೆಎಎಸ್ ಆಗಬೇಕು. ಈ ನಿಟ್ಟಿನಲ್ಲಿ ಹೆಚ್ಚು ಕೆಲಸಗಳು ಆಗಬೇಕಿದೆ. ಗ್ರಾಮೀಣ ಪ್ರದೇಶಗಳ ಶಾಲೆಗಳು ಉದ್ಧಾರವಾಗಬೇಕು ಎಂಬ ನಿಟ್ಟಿನಲ್ಲಿ ಅಭಿಯಾನ ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿಯೂ ನಿಮ್ಮ ಆಶೀರ್ವಾದ, ಹಾರೈಕೆ ನನ್ನ ಮೇಲೆ ಇರಲಿ. ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು ಖುಷಿ ಕೊಟ್ಟಿದೆ. ದೇವಸ್ಥಾನಕ್ಕೆ ನನ್ನದೇ ಆದ ಕಿರುಕಾಣಿಕೆ ನೀಡಿದ್ದೇನೆ. ಇಂದು ತುಂಬಾ ಅಚ್ಚುಕಟ್ಟಾಗಿ, ನಯನಮನೋಹರ
ಹಾಗೂ ಸುಂದರವಾಗಿ ದೇವಸ್ಥಾನ ನಿರ್ಮಾಣ ಮಾಡಲಾಗಿದೆ. ದೇವಸ್ಥಾನದ ಒಳಗಡೆ ಹೋದಾಗ ತುಂಬಾ ಸಂತೋಷ ಆಯಿತು ಎಂದು ಹೇಳಿದರು.
ನಾನು ಹರಿಹರದ ಅಳಿಯ. ಮದುವೆಯಾಗಿರುವುದು ಹರಿಹರದ ಮಗಳನ್ನು. ಹಾಗಾಗಿ ಹರಿಹರ ಪ್ರತಿಯೊಂದು ಗ್ರಾಮದವರೂ ಚಿರಪರಿಚಿತರು. ಈಗ ಆತ್ಮೀಯರಾಗಿದ್ದಾರೆ. ಬೀರಲಿಂಗೇಶ್ವರ ಸ್ವಾಮಿ ದರ್ಶನ ಹಾಗೂ ಸುತ್ತಮುತ್ತಲಿನ ಬೆಳ್ಳೂಡಿ, ಜಿಗಳಿ, ಮುಗಳುಗೆರೆ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದೆ. ಧಾರ್ಮಿಕ ವೇದಿಕೆ ಹಾಗೂ ಆಧ್ಯಾತ್ಮಿಕ ವೇದಿಕೆ ಇದು. ನವ ವಧುವರರು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದು, ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸಿದ ಅವರು, ಹರಿಹರ ಜನತೆಗೆ ಬೀರಲಿಂಗೇಶ್ವರ ಸ್ವಾಮಿ ಸಕಲ ಐಶ್ವರ್ಯ, ಆರೋಗ್ಯ ಸಮೃದ್ದಿ ನೀಡಲಿ ಎಂದು ಪ್ರಾರ್ಥಿಸಿದರು.
ರಟ್ಟಿಹಳ್ಳಿಯ ಕಬ್ಬಿಣ ಕಂತಿಮಠ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮಿಗಳು ಹಾಗೂ ನಂದಿಗುಡಿಯ ಬೃಹನ್ಮಠ 1108 ಜಗದ್ಗುರು ಶ್ರೀ ಶ್ರೀ ಸಿದ್ಧರಾಮೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಮಾಜಿ ಶಾಸಕ ಎಸ್. ರಾಮಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇನ್ ಸೈಟ್ಸ್ ಐಎಎಸ್ ವ್ಯವಸ್ಥಾಪಕ ನಿರ್ದೇಶಕ ಶರತ್ ಕುಮಾರ್, ಗ್ರಾಮದ ಮುಖಂಡರು ಮತ್ತಿತರರು ಹಾಜರಿದ್ದರು.