SUDDIKSHANA KANNADA NEWS/ DAVANAGERE/ DATE:20-08-2023
ದಾವಣಗೆರೆ(Davanagere): ನಗರದ ರಾಮರೆಡ್ಡಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಗದಗ ಮೂಲದ ವಿದ್ಯಾರ್ಥಿನಿ ಗ್ಯಾಸ್ ಗೀಜರ್ ನಿಂದ ವಿಷಾನಿಲ ಸೋರಿಕೆಯಾದ ಪರಿಣಾಮ ಮೃತಪಟ್ಟ ದಾರುಣ ಘಟನೆ ನಡೆದಿದೆ.
ಗದಗ ಜಿಲ್ಲೆ ಮುಂಡರಗಿಯ 17 ವರ್ಷದ ಅಮೃತಾ ಉಸಿರುಗಟ್ಟಿ ಮೃತಪಟ್ಟ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ಪಿ. ಜಿ.ಯಲ್ಲಿ ಇದ್ದ ಅಮೃತಾ ಬೆಳಿಗ್ಗೆ ಸ್ನಾನಕ್ಕೆ ಹೋಗಿದ್ದಾಳೆ. ಗ್ಯಾಸ್ ಗೀಜರ್ ನಿಂದ ಬಿಸಿನೀರಿಗೆ ಬಟನ್ ಒತ್ತಿದ್ದಾಳೆ. ಆದ್ರೆ, ಗ್ಯಾಸ್ ಗೀಜರ್ ನ ಕಾರ್ಬನ್ ಮೊನಾಕ್ಸೈಡ್ ಸೋರಿಕೆಯಾಗಿದೆ. ಈ ವೇಳೆ ಉಸಿರುಗಟ್ಟಿ ಸ್ನಾನದ ಗೃಹದಲ್ಲಿಯೇ ಉಸಿರು ಬಿಟ್ಟಿದ್ದಾಳೆ.
ಈ ಸುದ್ದಿಯನ್ನೂ ಓದಿ:
Americas: ಅಮೆರಿಕಾದಲ್ಲಿ ಪತ್ನಿ, ಮಗು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಎಂಜಿನಿಯರ್: ದಾವಣಗೆರೆಗೆ ಮೃತದೇಹಗಳ ತರುವ ಪ್ರಕ್ರಿಯೆ ಚುರುಕು
ಸ್ನಾನಕ್ಕೆ ಹೋಗಿದ್ದ ಅಮೃತಾ ತುಂಬಾ ಹೊತ್ತಾದರೂ ಹೊರಗೆ ಬಂದಿಲ್ಲ. ಇದರಿಂದ ಅನುಮಾನಗೊಂಡು ಬಾಗಿಲು ಮುರಿದು ಒಳಗಡೆ ಹೋದಾಗ ಸಾವನ್ನಪ್ಪಿರುವುದು ಗೊತ್ತಾಗಿದೆ. ಕಾರ್ಬನ್ ಮೊನಾಕ್ಸೈಡ್ ನಿಂದ ಉಸಿರುಗಟ್ಟಿ ಮೃತಪಟ್ಟಿರುವುದಾಗಿ ಪ್ರಾಥಮಿಕ ಮಾಹಿತಿ ಲಭಿಸಿದೆ. ವಿದ್ಯಾನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿದ್ಯಾರ್ಥಿನಿ ಮೃತದೇಹದ ಪೋಸ್ಟ್ ಮಾರ್ಟಂ ನಡೆಸಿ ಪೋಷಕರಿಗೆ ಮೃತದೇಹ ಹಸ್ತಾಂತರಿಸಲಾಗಿದೆ. ಐಪಿಸಿ ಸೆಕ್ಷನ್ 174 ಸಿ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸತ್ಯಾಸತ್ಯತೆ ಗೊತ್ತಾಗಲಿದೆ ಎಂದು ವಿದ್ಯಾನಗರ ಪೊಲೀಸರು ತಿಳಿಸಿದ್ದಾರೆ.