SUDDIKSHANA KANNADA NEWS/ DAVANAGERE/DATE:11_09_2025
ದಾವಣಗೆರೆ: ನಗರದ ಮನೆ ಮಾತಾಗಿದ್ದ ಸಿದ್ಧಗಂಗಾ ವಿದ್ಯಾಸಂಸ್ಥೆಯ ಪರಿಸರ ಸ್ನೇಹಿ ಪೇಪರ್ ಗಣಪತಿ 15 ದಿನಗಳ ಶ್ರದ್ಧಾಭಕ್ತಿಯ ಪೂಜೆ ಸ್ವೀಕರಿಸಿ ಇಂದು ಹರಿಹರದ ತುಂಗಭದ್ರೆಯ ಮಡಿಲು ಸೇರಿದನು.
READ ALSO THIS STORY: BIG BREAKING: ಶಾಮನೂರು ಶಿವಶಂಕರಪ್ಪ, ಎಸ್. ಎಸ್. ಮಲ್ಲಿಕಾರ್ಜುನ್, ಡಾ. ಪ್ರಭಾ ಮಲ್ಲಿಕಾರ್ಜುನ್ ಬಗ್ಗೆ ಅವಹೇಳನ: ಎಫ್ಐಆರ್ ದಾಖಲು!
ಶಾಲಾ ಕಾಲೇಜಿನ ಆರು ಸಾವಿರ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಮುನ್ನೂರಕ್ಕೂ ಹೆಚ್ಚು ಸಿಬ್ಬಂದಿ ವರ್ಗದವರು ಸಂಸ್ಥೆಯ ಮಂಟಪದಲ್ಲಿ ಭವ್ಯವಾಗಿ, ಸುಂದರವಾಗಿ, ಹಸನ್ಮುಖಿಯಾಗಿ ಕಂಗೊಳಿಸುತ್ತಿದ್ದ ಗಣಪನನ್ನು ಭಾರವಾದ ಹೃದಯದಿಂದ ಬೀಳ್ಕೊಟ್ಟರು.
ವಿಧಿವತ್ತಾದ ಪೂಜೆ, ಭಕ್ತಿಗೀತೆಗಳ ಸಿಂಚನ ಜೊತೆಗೆ ಬ್ಯಾಂಡ್ಸೆಟ್ನ ಹಿನ್ನಲೆ ವಿದಾಯಕ್ಕೊಂದು ಅರ್ಥಪೂರ್ಣ ಕಳೆ ನೀಡಿತ್ತು. ಮುನ್ನಾ ದಿನ ಮನೆಮನೆಯಿಂದ ಮಕ್ಕಳು ತಂದ ಪುಳಿಯೋಗರೆ ಪ್ರಸಾದವನ್ನು ದೊಡ್ಡ ದೊಡ್ಡ ಪಾತ್ರೆಗಳಲ್ಲಿ ಮಿಳಿತಗೊಳಿಸಿ ಎಲ್ಲರಿಗೂ ಹಂಚಲಾಯಿತು.
ಮಕ್ಕಳ ಜೊತೆ ಪಾಲಕರೂ ಸಹ ಪ್ರಸಾದ ಸ್ವೀಕರಿಸಿದರು. ಶಾಲೆಯ ಚಿತ್ರಕಲಾ ಶಿಕ್ಷಕರೊಂದಿಗೆ ವಿದ್ಯಾರ್ಥಿಗಳು ತಯಾರಿಸಿದ 12 ಅಡಿ ಎತ್ತರದ ಈ ಭವ್ಯ ಪೇಪರ್ ಗಣಪತಿ ಪರಂಪರೆಗೆ ಇದು 13ನೇ ವರ್ಷ. ಗಣಪತಿ ಹಬ್ಬಕ್ಕೆ ಒಂದು ವಾರವಿದೆ ಎಂದಾಗ ಈ ಬೃಹತ್ ಗಣಪತಿಯು ಹಂತ ಹಂತವಾಗಿ ರೂಪುಗೊಂಡು ಹಬ್ಬದ ಹಿಂದಿನ ದಿನ ಮಂಟಪದಲ್ಲಿ ವಿರಾಜಮಾನನಾಗುತ್ತಾನೆ.
ಸಿದ್ಧಗಂಗಾ ಸಂಸ್ಥೆಯ ಈ ವಿಶಿಷ್ಠ ಸಂಪ್ರದಾಯ ಮಕ್ಕಳಲ್ಲಿ ಭಾವೈಕ್ಯತೆ, ಸಂಘಟನೆ ಮತ್ತು ಸಹಕಾರ ಭಾವನೆ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಸಂಸ್ಥೆಯ ನಿರ್ದೇಶಕರಾದ ಡಾ|| ಜಯಂತ್, ಕಾರ್ಯದರ್ಶಿ ಹೇಮಂತ್ ಅವರ ಮಾರ್ಗದರ್ಶನದಲ್ಲಿ ನಡೆಯುವ ಈ ಉತ್ಸವ ಶಿಕ್ಷಣದ ಒಂದು ಅವಿಭಾಜ್ಯ ಅಂಗವೆನ್ನುತ್ತಾರೆ ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿʼಸೌಜ.