SUDDIKSHANA KANNADA NEWS/DAVANAGERE/DATE:11_10_2025
ದಾವಣಗೆರೆ: ಬಂಜಾರ ಸಮುದಾಯವದರು ಸೇರಿದಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಸ್ವಲ್ಪ ಆಳವಾಗಿ ಅಧ್ಯಯನ ಮಾಡಿದರೆ, ಮನಸ್ಸಿದ್ದರೆ ಮಾರ್ಗ ಎಂಬಂತೆ ಕಷ್ಟಪಟ್ಟರೆ ಐಎಎಸ್, ಐಪಿಎಸ್ ಆಗಲು ಸಾಧ್ಯವಾಗುತ್ತದೆ. ಬೌದ್ಧಿಕವಾಗಿ, ಅಧ್ಯಯನಶೀಲರಾಗಿ, ನಾಯಕತ್ವ ಗುಣ ಹೊಂದಿದ ಸಾಮರ್ಥ್ಯದವರು ಇದ್ದವರಿಗೆ ಸೂಕ್ತ ವೇದಿಕೆ ಕಲ್ಪಿಸಿಕೊಡಬೇಕು ಎಂದು ಇನ್ ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಜಿ. ಬಿ. ವಿನಯ್ ಕುಮಾರ್ ಪ್ರತಿಪಾದಿಸಿದರು.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಹಿರೇಕಲ್ಮಠದ ಜಗದ್ಗುರು ಪಂಚಾಚಾರ್ಯ ಸಮುದಾಯ ಭವನದಲ್ಲಿ ಬಂಜಾರ ಸೇವಾ ಸಂಘ ವತಿಯಿಂದ ಆಯೋಜಿಸಿದ್ದ ಹೊನ್ನಾಳಿ ತಾಲೂಕಿನ ಲಂಬಾಣಿ ಸಮಾಜದ ನಾಯಕರು, ಡಾವ್ಗಳು, ಕಾರಬಾರಿಗಳು ಸಂಘದ ಮಾಜಿ ಅಧ್ಯಕ್ಷರು ಮತ್ತು ಹೊನ್ನಾಳಿ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರಿಗೆ ಸನ್ಮಾನ ಹಾಗೂ ಸಮಾಜದ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಮಾಹಿತಿ ವಿನಿಮಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
READ ALSO THIS STORY: 150 ಕೋಟಿ ರೂ. ವಂಚನೆ, ಖಾತೆಯಲ್ಲಿ 18 ಕೋಟಿ ರೂ. ಹಣ ಹೊಂದಿದ್ದ ವಂಚಕರು: ಸೆರೆ ಸಿಕ್ಕ ಆರೋಪಿ ಹಿಸ್ಟರಿ ಕೇಳಿದ್ರೆ ಬೆಚ್ಚಿ ಬೀಳ್ತೀರಾ!
ಐಎಎಸ್ ಮಾಡುತ್ತೇನೆಂಬ ಅಚಲವಾದ ಬಯಕೆ ಇರಬೇಕು. ಮನೆ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿಯೂ ಉನ್ನತ ಹುದ್ದೆಗೆ ಹೋಗುವಂಥ ವಾತಾವರಣ ಕಲ್ಪಿಸಿಕೊಡಬೇಕು. ಪುಸ್ತಕ ಮತ್ತು ಸಾಹಿತ್ಯ ಓದುವಂಥ ಸಂಸ್ಕೃತಿ ಬೆಳೆಸಿಕೊಳ್ಳಬೇಕು. ನಮ್ಮ ಸುತ್ತಮುತ್ತಲಿನ ವಿಚಾರಗಳು, ದೇಶ,
ಅಂತಾರಾಷ್ಟ್ರೀಯ ಮಟ್ಟದ ವಿಷಯಗಳನ್ನು ತಿಳಿದುಕೊಳ್ಳಬೇಕಾದರೆ ಪ್ರತಿನಿತ್ಯವೂ ಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಆಗ ಜ್ಞಾನವೂ ಬೆಳೆಯುತ್ತದೆ, ಎದುರಿಸುವ ಛಲವೂ ಬರುತ್ತದೆ ಎಂದು ಅಭಿಪ್ರಾಯಪಟ್ಟರು.
ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮಾಂತರ ಪ್ರದೇಶಗಳಲ್ಲಿ ಉತ್ಕೃಷ್ಟ ಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಕನ್ನಡದ ಜೊತೆಗೆ ಇಂಗ್ಲೀಷ್ ಭಾಷೆಯಲ್ಲಿ ಪ್ರೌಢಿಮ್ಯತೆ ಹೊಂದಿದ್ದರೆ ಐಎಎಸ್, ಐಪಿಎಸ್ ಕಷ್ಟವಾಗಲಾರದು. ಪ್ರಾಥಮಿಕ ಹಂತದಲ್ಲೇ ಗುಣಮಟ್ಟದ ಶಿಕ್ಷಣ ಮತ್ತು ಸೂಕ್ತ ವೇದಿಕೆ ಸಿಗುವಂತಾಗಬೇಕು ಎಂದು ಅವರು ಹೇಳಿದರು.
ಇಂದಿನ ದಿನಗಳಲ್ಲಿಯೂ ಶಿಕ್ಷಣ ಕ್ಷೇತ್ರದಲ್ಲಿನ ಅಸಮಾನತೆ ಹೋಗಿಲ್ಲ. ಶೋಷಣೆಗೆ ಒಳಗಾದ, ಹಿಂದುಳಿದ, ದಬ್ಬಾಳಿಕೆಗೆ ತುತ್ತಾದ, ತುಳಿತಕ್ಕೊಳಗಾದವರು ನಿಜವಾದ ಸಂತ್ರಸ್ತರು. ಇಂದು ಎಸ್ಸಿ ಸೇರಿದಂತೆ ಶೋಷಿತ ಸಮುದಾಯವರ ಸಾಮರ್ಥ್ಯ ಹೊರ ಬರುವ ಮುನ್ನವೇ ನಶಿಸಿ ಹೋಗುತ್ತಿದೆ. ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆ ಸಿಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ನಮ್ಮ ಸುತ್ತಮುತ್ತಲು ನೂರಾರು ಪ್ರತಿಭೆಗಳಿರುತ್ತವೆ. ಆದ್ರೆ, ಹೊರ ಬರುತ್ತಿಲ್ಲ. ಅಲ್ಲಿಯೇ ಚಿವುಟಿ ಹೋಗುತ್ತಿವೆ. ನಾವು ಹೊರತಂದಾಗ ಮಾತ್ರ ಸಮುದಾಯದ ಜೊತೆ ನಾವೂ ಯಶಸ್ಸು ಸಾಧಿಸುತ್ತೇವೆ. ಕರ್ನಾಟಕದಲ್ಲಿ ನೂರಾರು ಐಎಎಸ್, ಐಪಿಎಸ್ ಅಧಿಕಾರಿಗಳಿದ್ದಾರೆ. ಅವರೆಲ್ಲರೂ
ಕೇವಲ ಮೂರು ವರ್ಷಗಳಲ್ಲಿ ಈ ಸಾಧನೆ ಮಾಡಿದವರಲ್ಲ. ಕನಿಷ್ಠ ಎಂದರೂ ಆರರಿಂದ ಏಳು ವರ್ಷ ಬೇಕಾಗುತ್ತದೆ. ಸತತ ಪರಿಶ್ರಮ, ಕಠಿಣ ಅಧ್ಯಯನ ಇರಬೇಕು. ಆಸಕ್ತಿ ಇದ್ದರೆ ಕೂಲಿ ಕಾರ್ಮಿಕರು, ತುಂಬಾ ಬಡವರು, ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತವಾಗಿ ಐಎಎಸ್
ಕೋಚಿಂಗ್ ನೀಡಲು ತಯಾರಿದ್ದೇನೆ. ನೀವು ಸನ್ನದ್ಧರಾಗಿ ಬರಬೇಕು ಎಂದು ತಿಳಿಸಿದರು.
ವಿಧಾನಸಭೆ ಉಪಸಭಾಪತಿ ರುದ್ರಪ್ಪ ಲಮಾಣಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು. ಸೂರಗೊಂಡನಕೊಪ್ಪದ ಮಹಾಮಠ ಸಮಿತಿ ಸದಸ್ಯ ಬಿಯ ರವಿನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಚಿತ್ರದುರ್ಗದ ಬಯಲು ಸಮಿತಿ ಅಭಿವೃದ್ಧಿ ನಿಮಗದ ಅಧ್ಯಕ್ಷ ಹೆಚ್. ಬಿ. ಮಂಜಪ್ಪ, ಶಾಸಕ ಡಿ. ಜಿ. ಶಾಂತನಗೌಡ, ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವ ನಾಯ್ಕ, ಕೆಪಿಸಿಸಿ ಸದಸ್ಯ ಡಾ. ಎಲ್. ಈಶ್ವರನಾಯ್ಕ, ಶಿವರಾಂ ನಾಯ್ಕ, ವಕೀಲ ಅನಂತನಾಯ್ಕ, ಜಿಲ್ಲಾ ಬಣಜಾರ ಸಂಘದ ಅಧ್ಯಕ್ಷ ನಂಜನಾಯ್ಕ, ನ್ಯಾಮತಿ ತಾಲೂಕು ಬಣಜಾರ ಸಂಘದ ಅಧ್ಯಕ್ಷ ಪ್ರಕಾಶ್ ನಾಯ್ಕ, ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು, ಪ್ರತಿ ತಾಂಡದ ನಾಯಕ, ಡಾವ್ ಮತ್ತು ಕಾರಬಾರಿಗಳು ಈ ವೇಳೆ ಉಪಸ್ಥಿತರಿದ್ದರು.