SUDDIKSHANA KANNADA NEWS/ DAVANAGERE/ DATE:16-08-2023
ದಾವಣಗೆರೆ: ಭದ್ರಾ ಡ್ಯಾಂ (Bhadra Dam)ನಿಂದ ನೀರು ಹೊರ ಬಿಡುತ್ತಿರುವ ಕುರಿತಂತೆ ಪುನರ್ ಪರಿಶೀಲಿಸುವಂತೆ ಮನವಿ ಮಾಡಿರುವ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಹೆಚ್. ಆರ್. ಬಸವರಾಜಪ್ಪ ಅವರು, ನೀರಾವರಿ ಸಲಹಾ ಸಮಿತಿ ಸಭೆ ಕರೆದು ಚರ್ಚೆ ನಡೆಸಿದ ಬಳಿಕ ನೀರು ಹರಿಸುವಂತೆ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರನ್ನು ಒತ್ತಾಯಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಅವರ ನಿವಾಸದಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದ ಹೆಚ್. ಆರ್. ಬಸವರಾಜಪ್ಪ ಅವರು, ಭದ್ರಾ ಡ್ಯಾಂ (Bhadra Dam)ನಿಂದ ನೀರು ಹರಿಸುವ ಕುರಿತಂತೆ ಕೂಡಲೇ ನೀರಾವರಿ ಸಲಹಾ ಸಮಿತಿ ಸಭೆ ಕರೆದು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸುದ್ದಿಯನ್ನೂ ಓದಿ:
Minister: ಸಚಿವ ಮಲ್ಲಿಕಾರ್ಜುನ್ ತೇಜೋವಧೆ ಆಗುವಂತೆ ವಿಡಿಯೋ ಅಪ್ಲೋಡ್: ವಿಜಯ್ ಕುಮಾರ್ ಹಿರೇಮಠ್ ವಿರುದ್ಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ಕೇಸ್
ಭದ್ರಾ ಎಡದಂಡೆ ನಾಲೆಹೆ 2,650 ಕ್ಯೂಸೆಕ್ ಹಾಗೂ ಎಡದಂಡೆ ನಾಲೆಯಲ್ಲಿ 390 ಕ್ಯೂಸೆಕ್ ನೀರನ್ನು ಭದ್ರಾ ಜಲಾಶಯದಿಂದ ಹರಿಸಿದರೆ ನೂರು ದಿನಗಳಿಗೆ ಮಾತ್ರ ಆಗುತ್ತದೆ. ಆದ್ರೆ, ಈ ಪ್ರಮಾಣದಲ್ಲಿ ನೀರು ಹರಿಸಿದ್ದೇ ಆದಲ್ಲಿ ನಾಲೆಯ ಕೊನೆ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು ಸಿಗುವುದಿಲ್ಲ. ಈ ಹಿನ್ನೆಲೆಯಲ್ಲಿ ಹಿಂದಿನ ವರ್ಷಗಳಲ್ಲಿ ಭದ್ರಾ ಡ್ಯಾಂ (Bhadra Dam) ಭರ್ತಿಯಾದ ಬಳಿಕ ಬಲದಂಡೆಯಲ್ಲಿ 3,200 ಕ್ಯೂಸೆಕ್ ಹಾಗೂ ಎಡದಂಡೆಯಲ್ಲಿ 480 ಕ್ಯೂಸೆಕ್ ನೀರು ಬಿಡಲಾಗುತಿತ್ತು. ಇದರಿಂದ ಕೊನೆ ಭಾಗದ ರೈತರಿಗೆ ನೀರು ಸಿಗುತಿತ್ತು. ಆದ್ರೆ, ಈ ಪ್ರಮಾಣದಲ್ಲಿ ನೀರು ಹರಿಸಿದರೆ ಈಗ ಡ್ಯಾಂನಲ್ಲಿ ಇರುವ ನೀರು ಕೇವಲ 80 ದಿನಗಳಿಗೆ ಮಾತ್ರ ಸಾಕಾಗುತ್ತದೆ ಎಂದು ಬಸವರಾಜಪ್ಪ ವಿವರಿಸಿದರು.
ಮುಂದಿನ ದಿನಗಳಲ್ಲಿ ಮಳೆಯಾಗಿ ಭದ್ರಾ ಜಲಾಶಯ (Bhadra Dam) ಭರ್ತಿಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯು ಹೇಳಿದೆ. ಆದ್ರೆ, ಮಳೆ ಬಂದರೆ ಡ್ಯಾಂ ತುಂಬುತ್ತದೆ. ಒಂದು ವೇಳೆ ಮಳೆಯಾಗದಿದ್ದರೆ ಭದ್ರಾ ಜಲಾಶಯ ಭರ್ತಿಯಾಗುವುದು ಅನುಮಾನ. ಮಳೆ ಉತ್ತಮವಾಗಿ ಸುರಿಯುವುದು ಅನುಮಾನ ಎಂಬ ಸ್ಥಿತಿ ಈಗ ಇದೆ ಎಂದು ತಿಳಿಸಿದರು.
ಆಗಸ್ಟ್ ಕೊನೆ ಅಥವಾ ಸೆಪ್ಟಂಬರ್ ಮೊದಲ ವಾರದಲ್ಲಿ ಭಾರೀ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಆದ್ರೆ, ಈ ಹಿಂದೆಯೂ ಮಳೆ ಕೈಕೊಟ್ಟು ಜಲಾಶಯ ಭರ್ತಿಯಾಗದಿರುವ ಉದಾಹರಣೆ ಕಣ್ಮುಂದೆ ಇದೆ. ಈ ಕಾರಣಕ್ಕಾಗಿ ಕೃಷಿ, ತೋಟಗಾರಿಕೆ, ಹವಾಮಾನ ಇಲಾಖೆ ತಜ್ಞರು, ಶಾಸಕರು, ಸಚಿವರನ್ನೊಳಗೊಂಡಂತೆ ಸಭೆಯನ್ನು ಕರೆಯಬೇಕು. ಈ ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ನಡೆಸಬೇಕು. ಆ ಬಳಿಕವಷ್ಟೇ ನೀರು ಹರಿಸಲು ಕ್ರಮ ಕೈಗೊಳ್ಳಬೇಕು. ಈಗ ನೀರು ಬಿಡಲಾಗುತ್ತಿರುವ ಕುರಿತಂತೆ ಮತ್ತೊಮ್ಮೆ ಪುನರ್ ಪರಿಶೀಲಿಸಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು, ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆಯನ್ನು ಆದಷ್ಟು ಬೇಗ ಕರೆಯಲಾಗುವುದು. ಈ ಬಗ್ಗೆ ಸಭೆಯಲ್ಲಿ ಚರ್ಚಿಸೋಣ. ಯಾವ ಅಭಿಪ್ರಾಯ ಬರುತ್ತದೆ
ಎಂಬುದನ್ನು ನೋಡೋಣ. ಆ ಬಳಿಕ ನಿರ್ಧಾರ ತೆಗೆದುಕೊಳ್ಳೋಣ ಎಂದು ಹೇಳಿದಜರು. ಈ ವೇಳೆ ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಇಟ್ನಾಳ್, ರಾಜ್ಯ ರೈತ ಸಂಘದ ಹಾಗೂ ಹಸಿರು ಸೇನೆಯ ಉಪಾಧ್ಯಕ್ಷ ಹೊನ್ನೂರು ಮುನಿಯಪ್ಪ ಹಾಗೂ ಮುಖಂಡ ಗಿರೀಶ್ ಉಪಸ್ಥಿತರಿದ್ದರು.