SUDDIKSHANA KANNADA NEWS/ DAVANAGERE/ DATE:30-05-2024
ದಾವಣಗೆರೆ: ಕಾನೂನು ಬಾಹಿರವಾಗಿ ಅನಧಿಕೃತವಾಗಿ ಸುಮಾರು ನಾಲ್ಕು ತಿಂಗಳ ಮಗುವನ್ನು ಮನೆಯಲ್ಲಿ ಇಟ್ಟುಕೊಂಡು ಸಾಕುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದತ್ತು ಪಡೆದವರ ವಿರುದ್ಧ ಕೇಸ್ ದಾಖಿಲಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಿಕಿ ಶ್ರೀಮತಿ ವಾಸಂತಿ ಉಪ್ಪಾರ್ ಸೂಚಿಸಿದ್ದಾರೆ.
ದಾವಣಗೆರೆ ತಾಲ್ಲೂಕು ದೊಡ್ಡಬಾತಿ ಗ್ರಾಮದ ದಾಸಪ್ಪರ ರಾಜಪ್ಪ ಇವರ ಪತ್ನಿ ಮಂಜುಳ ದಾಸಪ್ಪರ ರಾಜಪ್ಪ ಇವರು ಅನಧಿಕೃತವಾಗಿ ಸುಮಾರು 4 ತಿಂಗಳ ಹೆಣ್ಣು ಮಗುವನ್ನು ತಮ್ಮ ಮನೆಯಲ್ಲಿ ಇಟ್ಟುಕೊಂಡು ಸಾಕುತ್ತಿರುವ ಬಗ್ಗೆ ಮಕ್ಕಳ ಸಹಾಯವಾಣಿ-1098 ಕ್ಕೆ ದೂರವಾಣಿ ಕರೆ ಬಂದಿದೆ. ಈ ಯನ್ವಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳಾದ ಮಕ್ಕಳ ರಕ್ಷಣಾಧಿಕಾರಿ (ಸಾಂಸ್ಥಿಕ) ಪ್ರತಿಭಾ ಎಂ.ಹೆಚ್, ಚಂದ್ರಶೇಖರ್ ಎನ್.ಕೆ (ಸಾಂಸ್ಥಿಕೇತರ) ಹಾಗೂ ಆಪ್ತ ಸಮಾಲೋಚಕರಾದ ಶ್ವೇತಾ ಐ.ಎಂ ಅವರ ಸ್ಥಳಕ್ಕೆ ಭೇಟಿ ನೀಡಿದಾಗ ಮಂಜುಳಾ ದಾಸಪ್ಪರ ರಾಜಪ್ಪ ಅವರು ಇದ್ದರು.
ಅವರ ಜೊತೆ ಸುಮಾರು 4 ತಿಂಗಳ ಹೆಣ್ಣು ನವಜಾತ ಶಿಶು ಇದ್ದು, ಮಗುವಿನ ಬಗ್ಗೆ ಮಾಹಿತಿ ಕೇಳಿದಾಗ ಈ ಮಗು ನನಗೆ ಪರಿಚಯ ಇರುವ ಕುಸುಮಾ ವಯಸ್ಸು ಸುಮಾರು-30 ವರ್ಷ, ತಳವಾರ ಓಣಿ, ಬಾಲೇ ಹೊಸೂರು ಗ್ರಾಮ, ಲಕ್ಷ್ಮೀಶ್ವರ ತಾಲೂಕು ಗದಗ ಜಿಲ್ಲೆ ಇವರಿಗೆ ಹಾವೇರಿ ಜಿಲ್ಲೆ ಬ್ಯಾಡಗಿಯ ವೈದ್ಯರಾದ ಚೈತುನ ಬಿ ಎಂ. ಸೌದಾಗರ (ಪಾರಂಪರಿಕ ಹಾಗೂ ತರಬೇತಿ ಹೊಂದಿದ ದಾಯಿ) ಇವರ ಮನೆಯಲ್ಲಿ ಹೆರಿಗೆ ಆಗಿದ್ದು, ಇವರಿಂದ ನಾವು ಪಡೆದುಕೊಂಡು ನಾವೇ ತಂದೆ- ತಾಯಿ ಎಂದು ಪುರಸಭೆ ಕಾರ್ಯಾಲಯ, ಬ್ಯಾಡಗಿ, ಹಾವೇರಿ ಜಿಲ್ಲಿ ಇವರಲ್ಲಿ ಜನನ ಪ್ರಮಾಣ ಪತ್ರವನ್ನು ಸಹ ಪಡೆದಿರುತ್ತೇವೆಂದು ತಿಳಿಸಿದ್ದಾರೆ.
ಈ ಖಚಿತ ಮಾಹಿತಿ ಮೇರೆಗೆ ಬಾಲನ್ಯಾಯ ಕಾಯ್ದೆ-2015 ರಡಿಯಲ್ಲಿ ಈ ಮಗುವನ್ನು ಅನಧಿಕೃತವಾಗಿ ಪಡೆದುಕೊಂಡು ಜನನ ಪ್ರಮಾಣ ಪತ್ರವನ್ನು ಸಹ ಸುಳ್ಳು ದಾಖಲಾತಿ ಮುಖಾಂತರ ಸೃಷ್ಟಿಸಿಕೊಂಡಿರುವುದು ಕಾನೂನು ಉಲ್ಲಂಘನೆ. ಆದ್ದರಿಂದ ಮಗುವನ್ನು ನೀಡಿದವರು, ಪಡೆದವರು ಮತ್ತು ಜನನ ಪ್ರಮಾಣ ಪತ್ರ ಸೃಷ್ಟಿಸಲು ಸಹಕಾರ ನೀಡಿದ ಎಲ್ಲಾರ ವಿರುದ್ಧ ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಿಸಿ ಕ್ರಮ ಕೈಗೊಳ್ಳಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಿಕಿ ವಾಸಂತಿ ಉಪ್ಪಾರ್ ತಿಳಿಸಿದ್ದಾರೆ.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕವಿತಾ ಟಿ.ಎನ್, ಇವರು ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಿಸಿ ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದಾರೆ.