SUDDIKSHANA KANNADA NEWS/ DAVANAGERE/ DATE-28-05-2025
ದಾವಣಗೆರೆ.ಮೇ.28: ನುಜಿವಿಡು ಕಂಪನಿಯ ಭತ್ತದ ತಳಿ ನಾಟಿ ಮಾಡಿದ್ದ ನೂರಾರು ರೈತರು ಮೋಸ ಹೋಗಿರುವ ಘಟನೆ ತಾಲ್ಲೂಕಿನ ಯರವನಾಗತಿಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಮೋಸ ಹೋಗಿರುವ ರೈತರಿಗೆ ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ರಾಜ್ಯ ರೈತ ಸಂಘ ಹಸಿರು ಸೇನೆ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದಿಂದ ನಗರದಲ್ಲಿ ಕಂಪನಿಯ ಬೀಜ ಮಾರಾಟ ಕೇಂದ್ರಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಯರವನಾಗತಿಹಳ್ಳಿ ಗ್ರಾಮದ ನೂರಾರು ರೈತರು ಬೇಸಿಗೆ ಹಂಗಾಮಿನಲ್ಲಿ ನಗರದ ಪಿಬಿ ರಸ್ತೆಯಲ್ಲಿರುವ ಮಲ್ಲಿಕಾರ್ಜುನ ಐಟಿಐ ಕಾಲೇಜು ಬಳಿ ಇರುವ ನುಜಿವಿಡು ಸೀಡ್ಸ್ ಕಂಪನಿಯ ಗೋದಾಮಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್, ನುಜಿವೀಡು ಕಂಪನಿಯ ಅನ್ನಪೂರ್ಣ ಹೆಸರಿನ ತಲಾ 10 ಕೆಜಿ ತೂಕದ 50 ಪಾಕೆಟ್ ಭತ್ತದ ಬೀಜಗಳನ್ನು ಯರನಾಗತಿಹಳ್ಳಿಯ ನೂರಾರು ರೈತರು ಖರೀದಿಸಿ
ಸಸಿ ಮಾಡಿ ನಾಟಿ ಮಾಡಿದ್ದರು. ಹೀಗೆ ನಾಟಿ ಮಾಡಿದ್ದ ಭತ್ತದಲ್ಲೀಗ ವಿವಿಧ ಮೂರು ತಳಿಯ ಭತ್ತ ಬೆಳೆದು ನಿಂತಿದೆ. ಒಂದೇ ಬಾರಿಗೆ ಎಲ್ಲವೂ ತೆನೆ ಬಿಟ್ಟರೆ ಅದು ಒಂದೇ ತಳಿಯ ಬೀಜವಾಗಿರುತ್ತದೆ. ಆದರೆ ಇದೀಗ ರೈತರ ಗದ್ದೆಯಲ್ಲಿ ಕೆಲ ಸಸಿ ಈಗಾಗಲೇ ಕೊಯ್ಲಿಗೆ ಬಂದಿದ್ದರೆ ಮತ್ತೆ ಕೆಲವು ಹಸಿರು ತೆನೆಹೊತ್ತು ಹಾಗೆಯೇ ನಿಂತಿವೆ. ಮತ್ತೆ ಕೆಲವು ಭತ್ತ ಸಂಪೂರ್ಣ ಒಣಗಿ ಕಾಳುಗಳು ಉದುರುತ್ತಿವೆ. ಹೀಗೆ ಮೂರು ರೀತಿಯ ತಳಿಯ ಬೀಜಗಳು ರೈತರ ಗದ್ದೆಗಳಲ್ಲಿ ಬೆಳೆದು ನಿಂತಿದ್ದು, ಸಂಪೂರ್ಣ ಕಳಪೆ ಗುಣಮಟ್ಟದ ಬಿತ್ತನೆ ಬೀಜಗಳನ್ನು ಕಂಪನಿ ರೈತರಿಗೆ ಪೂರೈಕೆ ಮಾಡಿದೆ ಎಂದು ಆರೋಪಿಸಿದರು.
ಈ ಸಂಬಂಧ ತಾಲ್ಲೂಕು ಸಹಾಯಕ ಕೃಷಿ ಅಧಿಕಾರಿಗೆ ದೂರು ಸಲ್ಲಿಸಿದ ಮೇರೆಗೆ ವಿಜ್ಞಾನಿಯನ್ನು ಕರೆಸುವುದಾಗಿ ಭರವಸೆ ನೀಡಿದ್ದರು. ಆದರೆ 15 ದಿನವಾದರೂ ಯಾವ ತಜ್ಞರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಇದಕ್ಕೂ ಮುನ್ನ ಕಂಪನಿಯ ಪರವಾಗಿ ಬಂದಿದ್ದ ಮೇನೇಜರ್ ಚನ್ನೇಶ್ ಎಂಬಾತ ಇದು ಬಿತ್ತನೆ ಬೀಜದ ಸಮಸ್ಯೆಯಾಗಿದೆ ಎಂದು ಒಪ್ಪಿಕೊಂಡಿದ್ದರು. ಇದೀಗ ಅವರು ಕೂಡ ಗ್ರಾಮಸ್ಥರ ಕೈಗೆ ಸಿಗದೆ ತಲೆ ಮರೆಸಿಕೊಂಡಿದ್ದಾರೆ ಎಂದರು.
ಕಂಪನಿಯವರೆ ಈ ಭತ್ತವನ್ನು ಕೊಯ್ಲು ಮಾಡಿಕೊಂಡು ಹೋಗಬೇಕು, ಪ್ರತಿ ಎಕರೆಗೆ 50 ಕ್ವಿಂಟಲ್ ಇಳುವರಿಯಂತೆ ಸರ್ಕಾರ ನಿಗದಿಪಡಿಸಿರುವ ಕನಿಷ್ಠ ಬೆಂಬಲ ಬೆಲೆ 2,300 ರೂ ದರ ನೀಡಬೇಕು ಎಂದು ಆಗ್ರಹಿಸಿದರು.
ನಂತರ ಜಿಲ್ಲಾಧಿಕಾರಿ ಕಚೇರಿಗೆ ಹೋಗಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಸಹಾಯಕ ನಿರ್ದೇಶಕರಿಗೆ ಕರೆ ಮಾಡಿ ಕೂಡಲೇ ಕಂಪನಿಗೆ ನೋಟಿಸ್ ಜಾರಿ ಮಾಡಿ, ಬೀಜ ಮಾರಾಟ ತಡೆಯುವಂತೆ ಸೂಚನೆ ನೀಡಿದರು. ಪ್ರತಿಭಟನೆಯಲ್ಲಿ ಹೂವಿನ ಮಡು ನಾಗರಾಜ್, ಚಿನ್ನಸಮುದ್ರದ ಭೀಮಣ್ಣ ಗುಮ್ಮನೂರು ರುದ್ರೇಶ್, ಭೀಮೇಶ್, ಬೋರಗೊಂಡನಹಳ್ಳಿ ಕಲ್ಲೇಶ್, ಆಲೂರು ಪರಶುರಾಮ್, ಯರವನಾಗತಿಹಳ್ಳಿ ರುದ್ರಪ್ಪ, ಓಬಳೇಶಪ್ಪ, ಅಣ್ಣಪ್ಪ, ಆನಗೋಡು ಭೀಮಣ್ಣ ಇತರರು ಭಾಗವಹಿಸಿದ್ದರು.