SUDDIKSHANA KANNADA NEWS/ DAVANAGERE/ DATE-06-06-2025
ದಾವಣಗೆರೆ: ದಾವಣಗೆರೆ ಜಿಲ್ಲೆಯ ಈ ಭಾಗದಲ್ಲಿ ಅನುಮತಿ ಕೊಟ್ಟರೆ ತಮ್ಮ ಸ್ವಂತ ಖರ್ಚಿನಲ್ಲಿ ಐಎಎಸ್, ಐಎಫ್ಎಸ್ ಹಾಗೂ ಕೆಎಎಸ್ ಸ್ಪರ್ಧಾತ್ಮಕ ತರಬೇತಿ ಕೇಂದ್ರ ಸ್ಥಾಪಿಸಿ, ಯುವಕರನ್ನು ಉನ್ನತ ಸ್ಥಾನಕ್ಕೆ ತರುವಂತಹ ಅಭೂತಪೂರ್ವ ಕಾರ್ಯ ಮಾಡಲಾಗುತ್ತದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೋಳಿ ಹೇಳಿದರು.
ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ ಅಣಜಿ ಗ್ರಾಮದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಮಹರ್ಷಿ ವಾಲ್ಮೀಕಿ ಸಮುದಾಯ ಭವನ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಯಾವುದೇ ಒಂದು ಶಾಲಾ, ಕಾಲೇಜು ನಿರ್ಮಾಣ ಮಾಡಿದಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸಲಿವೆ. ಆಗಾಗಿ ಅದರಂತೆ ರಾಜ್ಯಾದ್ಯಂತ ಈಗಾಗಲೇ ಶಿರಾ, ಕುಷ್ಟಗಿ ಹಾಗೂ ಘಟಪ್ರಭಾ ಸೇರಿದಂತೆ ಒಟ್ಟು ನಾಲ್ಕು ಭಾಗಗಳಲ್ಲಿ ತರಬೇತಿ ಕೇಂದ್ರಗಳನ್ನು ನಡೆಸಲಾಗುತ್ತಿದೆ. ಅದೇ ರೀತಿ ಈ ಭಾಗದಲ್ಲೂ ತರಬೇತಿ ಕೇಂದ್ರಗಳ ಸ್ಥಾಪನೆಗೆ ಅನುಮತಿ ನೀಡಿದಲ್ಲಿ, ಯುವ ಜನರಲ್ಲಿ ಕೌಶಲ್ಯತೆ ಹೆಚ್ಚಿಸುವ ಜೊತೆಗೆ ಸಮಾಜದ ಮುಖ್ಯವಾಹಿನಿಗೆ ತರಲು ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಶೈಕ್ಷಣಿಕವಾಗಿ ಈ ನಾಲ್ಕು ದಿಕ್ಕಿನಲ್ಲಿ ಕೆಲಸ ಮಾಡಬೇಕಿದೆ ಎಂದರು.
ಇಂದು ಉದ್ಘಾಟನೆಗೊಂಡ ವಾಲ್ಮೀಕಿ ಸಮುದಾಯ ಭವನ ಬಡವರಿಗೆ, ಸಾರ್ವಜನಿಕರಿಗೆ ವಿದ್ಯಾರ್ಥಿಗಳಿಗೆ ಹಲವು ಕಾರ್ಯಕ್ರಮಗಳಿಗೆ ಭವನವನ್ನು ನಿರಂತರವಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ಸರ್ಕಾರ ಒದಗಿಸುವ ಪಂಚಗ್ಯಾರಂಟಿ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಯೋಜನೆಗಳಲ್ಲಿ ಶೇ.7.5ರಷ್ಟು ಸಬ್ಸಿಡಿ ನೀಡಲಾಗುತ್ತಿದೆ. ಇಂತಹ ಯೋಜನೆಗಳನ್ನು ಸದುಪಯೋಗ ಪಡೆದುಕೊಂಡು ಪ್ರತಿಯೊಬ್ಬ ನಾಗರೀಕನೂ ಸಮಾಜದ ಮುನ್ನಲೆಗೆ ಬರಬೇಕು. ಆಗ ಮಾತ್ರ ಯೋಜನೆಗಳು ಸಫಲವಾಗಲು ಸಾಧ್ಯ. ಹಾಗೆಯೇ ಈ ಭಾಗದ ರಸ್ತೆಗಳ ಅಭಿವೃದ್ಧಿಗೆ ಸುಮಾರು 30 ಕೋಟಿ ಅನುದಾನ ನೀಡಲಾಗಿದೆ ಎಂದು ತಿಳಿಸಿದ ಅವರು, ಭವನವನ್ನು ಕೇವಲ ಉದ್ಘಾಟನೆಗೆ ಸೀಮಿತಗೊಳಿಸದೇ ಹಲವು ಉತ್ತಮ ಕಾರ್ಯಗಳಿಗೆ ಸದ್ಬಳಕೆಯಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, ಇಂದು ಉದ್ಘಾಟನೆಗೊಂಡ ಭವನಕ್ಕೆ ಅನೇಕ ತೊಡಕುಗಳು ಎದುರಾದರು, ಅನುದಾನ ಪಡೆದು ಭವ್ಯವಾದ ವಾಲ್ಮೀಕಿ ಭವನವನ್ನು ನಿರ್ಮಿಸಲಾಗಿದೆ. ಇದು ಈ ಭಾಗದ ಜನತೆಗೆ ವರದಾನವಾಗಿದೆ. ಹಾಗೆಯೇ ಇಲ್ಲಿ ವಸತಿಗೃಹ, ಹೈಟೆಕ್ ಶೌಚಾಲಯ, ತಡೆಗೋಡೆ ನಿರ್ಮಾಣ ಸೇರಿದಂತೆ ಕ್ಷೇತ್ರ ವ್ಯಾಪ್ತಿಯಲ್ಲಿ ಅಂದಾಜು 100 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳು ಬಾಕಿ ಇದ್ದು, ಸರ್ಕಾರದಿಂದ ಇನ್ನಷ್ಟು ಅನುದಾನ ಪಡೆದು ಯಾವುದೇ ಆಸೆ ಆಮೀಷಗಳಿಗೆ ಒಳಗಾಗದೇ ಪ್ರಾಮಾಣಿಕವಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ ಅಣಜಿಯಲ್ಲಿ ಸುಮಾರು 2 ಕೋಟಿ ವೆಚ್ಚದ ವಾಲ್ಮೀಕಿ ಸಮುದಾಯದ ಭವನ, ಕಾಟೇಹಳ್ಳಿ ಗ್ರಾಮದಲ್ಲಿ ಬಾವಿಹಾಳು, ಗಂಗನಕಟ್ಟೆ, ಕೊಡಗನೂರು ರಸ್ತೆ ಕೂಡುವ ರಸ್ತೆಯ ಅಂದಾಜು ರೂ. 12 ಕೋಟಿ ವೆಚ್ಚದ ಕಾಮಗಾರಿ, ದಾವಣಗೆರೆಯಿಂದ ಲೋಕಿಕೆರೆ ಗ್ರಾಮದವರೆಗೆ ಹಾಗೂ ಲೋಕೀಕೆರೆ ಶ್ಯಾಗಲೇ, ಹೂವಿನಮಡು ಗ್ರಾಮದವೆರೆಗೆ ರೂ.೬ ಕೋಟಿ ವೆಚ್ಚದ ಕಾಮಗಾರಿ, ಮಾಯಕೊಂಡ ಕ್ಷೇತ್ರದಲ್ಲಿ ೨ ಕೋಟಿ ವೆಚ್ಚದ ವಿವಿಧ ಕಾಮಗಾರಿ ಸೇರಿದಂತೆ ಒಟ್ಟು ೩೦ ಕೋಟಿಗೂ ಅಧಿಕ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು.
ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮಾಜಿ ಸಚಿವ ಹೆಚ್.ಆಂಜನೇಯ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್, ಎಪಿಎಂಸಿ ಮಾಜಿ ಅಧ್ಯಕ್ಷ ಚಂದ್ರಶೇಖರ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶಂಬಣ್ಣ, ಮುಖಂಡರಾದ ಹದಡಿ ಹಾಲಪ್ಪ ಸೇರಿದಂತೆ ಸಮಾಜದ ಮುಖಂಡರು, ಚುನಾಯಿತ ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.