SUDDIKSHANA KANNADA NEWS/ DAVANAGERE/DATE:06_08_2025
ದಾವಣಗೆರೆ: ನಗರದ ಶಿವಯೋಗಿ ಮಂದಿರದಲ್ಲಿ ನಡೆದ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಸಭೆಯಲ್ಲಿ ಜಾತಿ ಗಣತಿ ವೇಳೆ ಧರ್ಮದ ಕಾಲಂನಲ್ಲಿ ಲಿಂಗಾಯತ, ಜಾತಿ ಕಾಲಂನಲ್ಲಿ ಉಪಪಂಗಡ ಎಂದು ನಮೂದಿಸುವಂತೆ ತೀರ್ಮಾನ ತೆಗೆದುಕೊಳ್ಳಲಾಗಿದೆ.
READ ALSO THIS STORY: ಹಳೇಕುಂದುವಾಡದಲ್ಲಿ 15ಕ್ಕಿಂತ ಹೆಚ್ಚು ಜನರ ಮೇಲೆ ದಾಳಿ: ಡಾಗ್ ಆಪರೇಷನ್ ನಲ್ಲಿ ಸಿಕ್ಕಿದ್ದೆಷ್ಟು ನಾಯಿಗಳು?
ಬಸವ ಸಂಸ್ಕೃತಿ ಅಭಿಯಾನದ ಪೂರ್ವಭಾವಿ ಸಭೆಯ ಬಳಿಕ ಮಾತನಾಡಿದ ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ಈ ವಿಷಯ ತಿಳಿಸಿದ್ದಾರೆ.
ಜಾತಿಗಣತಿಯಲ್ಲಿ ಒಳಪಂಗಡವೆಂದು ನಮೂದು ಮಾಡದಿದ್ದರೆ ಸೌಲಭ್ಯ ಕೈ ತಪ್ಪುವ ಸಾಧ್ಯತೆ ಇದೆ. ಈಗಾಗಲೇ ಲಿಂಗಾಯತ ಸಮುದಾಯದ ಹಲವು ಒಳಪಗಂಡಗಳು ಸರ್ಕಾರದ ಸೌಲಭ್ಯಗಳನ್ನು ಪಡೆಯುತ್ತಿವೆ. ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ನಮೂದಿಸುವ ಅವಕಾಶವನ್ನು ಕೇಂದ್ರ ಸರ್ಕಾರ ನೀಡುತ್ತಿಲ್ಲ ಎಂಬ ಮಾಹಿತಿ ಸಿಕ್ಕಿದೆ. ಇದಕ್ಕೆ ಅವಕಾಶ ಕೋರಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಅಗತ್ಯತೆ ಇದೆ. ಸರ್ಕಾರವೂ ಸ್ಪಂದಿಸುವ ವಿಶ್ವಾಸವಿದೆ ಎಂದು ಹೇಳಿದರು.
ಲಿಂಗಾಯತ ಧರ್ಮದಲ್ಲಿ ಗುರು – ವಿರಕ್ತ ಎಂಬ ಭಾವನೆ ಇಲ್ಲ. ದಾವಣಗೆರೆಯಲ್ಲಿ ನಡೆದ ಪಂಚಪೀಠಾಧಿಪತಿಗಳ ಶೃಂಗಸಭೆಯಲ್ಲಿ ಜಾತಿಗಣತಿ ಕುರಿತ ಅಭಿಪ್ರಾಯಕ್ಕೆ ವಿರೋಧವಿಲ್ಲ. ಅಂದ ಹಾಗೆ ಎಲ್ಲವನ್ನೂ ಒಪ್ಪಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಬಸವತತ್ವವು ಪುರಾಣ, ಪರಂಪರೆ ಅಲ್ಲ. ಅವರಲ್ಲಿಯೂ ವೈಜ್ಞಾನಿಕ, ವೈಚಾರಿಕ ಮನೋಭಾವನೆ ಬೆಳೆಯುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಸಾಣೇಹಳ್ಳಿ ಶ್ರೀಗಳು ಹೇಳಿದರು.
ನಾವು ಜಾತಿಗಣತಿಯಲ್ಲಿ ಇದೇ ರೀತಿಯಲ್ಲಿ ಬರೆಸಬೇಕು ಎಂಬ ಒತ್ತಡ ಹಾಕುವುದಿಲ್ಲ. ಬೆಂಗಳೂರಿನಲ್ಲಿ ಅಕ್ಟೋಬರ್ 5ರಂದು ಏರ್ಪಡಿಸಲಾಗಿರುವ ಬಸವತತ್ವ ಅಭಿಯಾನದ ಸಮಾರೋಪಕ್ಕೆ ಪಂಚಪೀಠಾಧ್ಯಕ್ಷರು ಬರುವುದಾದರೂ ಸ್ವಾಗತಿಸುತ್ತೇವೆ ಎಂದು ಶ್ರೀಗಳು ತಿಳಿಸಿದರು.
ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ, ಪಾಂಟೋಮಟ್ಟಿ ವಿರಕ್ತ ಮಠದ ಗುರುಬಸವ ಸ್ವಾಮೀಜಿ, ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಅಥಣಿ ವೀರಣ್ಣ, ಅಣಬೇರು ರಾಜಣ್ಣ ಮತ್ತಿತರರು ಹಾಜರಿದ್ದರು.