SUDDIKSHANA KANNADA NEWS/ DAVANAGERE/ DATE:17-02-2025
ದಾವಣಗೆರೆ: ಪದೇ ಪದೇ ಸಂಚಾರ ನಿಯಮ ಉಲ್ಲಂಘಿಸಿ ಸುಮ್ಮನಾಗಿಬಿಡ್ತೀರಾ. ಫೈನ್ ಬಂದ್ರೂ ಕಟ್ಟದೇ ಏನೂ ಆಗಲ್ಲ ಅಂದುಕೊಂಡು ಇದ್ದೀರಾ. ಹಾಗಾದ್ರೆ ಪೊಲೀಸರೇ ಬಂದು ಫೈನ್ ಕಟ್ಟಿಸಿಕೊಳ್ಳುವುದು ಗ್ಯಾರಂಟಿ.
ಹೌದು. ಪೊಲೀಸ್ ಇಲಾಖೆಯು ಟ್ರಾಫಿಕ್ ಸಿಗ್ನಲ್ ಸೇರಿದಂತೆ ರೂಲ್ಸ್ ಬ್ರೇಕ್ ಮಾಡುವವರಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿದೆ.
ಸಂಚಾರ ನಿಯಮ ಉಲ್ಲಂಘನೆ ಮಾಡಿದ ಬಗ್ಗೆ ಕ್ಯಾಮೆರಾ ಗಳಲ್ಲಿ ಸೆರೆ ಆಗಿ ಇ -ಚಲನ್ ರೈಜ್ ಆಗಿ ದಂಡ ಪಾವತಿಸದೆ ಇರುವ ಪ್ರಕರಣಗಳ ಪೈಕಿ 10 ಮತ್ತು 10 ಕ್ಕಿಂತ ಹೆಚ್ಚು ಇ- ಚಲನ್ ಬಾಕಿ ಇರಿಸಿಕೊಂಡಿದ್ದ 50 ವಾಹನ ಮಾಲೀಕರು, ಚಾಲಕರನ್ನು ದಕ್ಷಿಣ ಹಾಗೂ ಉತ್ತರ ಸಂಚಾರ ಠಾಣೆ ಅಧಿಕಾರಿ ಮತ್ತು ಸಿಬ್ಬಂದಿಗಳೊಂದಿಗೆ ಪತ್ತೆ ಹಚ್ಚಿದೆ. ಬಾಕಿ ಇದ್ದ ಒಟ್ಟು 750 ಪ್ರಕರಣಗಳಿಗೆ ಸಂಬಂಧಿಸಿದಂತೆ ಸಂಚಾರ ಪೊಲೀಸ್ ಠಾಣೆಗಳಲ್ಲಿ ದಂಡದ ಮೊತ್ತ 4.5 ಲಕ್ಷ ರೂ. ವಸೂಲಿ ಮಾಡಲಾಗಿದೆ.
ಜನವರಿ 1ರಿಂದ ಫೆಬ್ರವರಿ 17ರವರೆಗೆ ವಿಶೇಷ ಕಾರ್ಯಚರಣೆ ನಡೆಸಿದ್ದು ಒಟ್ಟು 1433 ಸಂಚಾರ ನಿಯಮಗಳ ಉಲ್ಲಂಘನೆ ಪ್ರಕರಣಗಳಲ್ಲಿಒಟ್ಟು 8,28,000 ರೂಪಾಯಿ ದಂಡವನ್ನು ಕಟ್ಟಿಸಲಾಗಿರುತ್ತದೆ.
ಇ- ಚಲನ್ ದಂಡ ವಸೂಲಾದ ಪ್ರಕರಣಗಳಲ್ಲಿ ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಒಂದೇ ಬೈಕ್ ಮೇಲೆ 38 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಬಾಕಿ ಇದ್ದು ಸದರಿ ಬೈಕ್ ಸವಾರನಿಂದ ಒಟ್ಟು 19,000 ರೂಪಾಯಿ ದಂಡವನ್ನು ಕಟ್ಟಿಸಲಾಗಿರುತ್ತದೆ.
ಹಾಗೆಯೇ ಆಟೋ ವಾಹನದ ಮೇಲೆ 31 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಬಾಕಿ ಇದ್ದು ಆಟೋ ಚಾಲಕನಿಂದ ಒಟ್ಟು 17,500 ರೂಪಾಯಿ ದಂಡ ಕಟ್ಟಿಸಲಾಗಿರುತ್ತದೆ. ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಒಂದೇ ಬೈಕ್ ಮೇಲೆ 31 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಬಾಕಿ ಇದ್ದು ಬೈಕ್ ಸವಾರನಿಂದ ಒಟ್ಟು 16,500 ರೂಪಾಯಿ ದಂಡ ಪಾವತಿಸಿಕೊಳ್ಳಲಾಗಿದೆ.
ವಿಶೇಷ ಕಾರ್ಯಚರಣೆಯು ಮುಂದುವರೆಯಲಿದ್ದು ಈಗಾಗಲೇ ಸಂಚಾರ ನಿಯಮ ಉಲ್ಲಂಘಸಿ ಇ- ಚಲನ್ ಬಂದರೂ ಬಾಕಿ ಉಳಿಸಿಕೊಂಡಿರುವ ವಾಹನ ಚಾಲಕರು ದಾವಣಗೆರೆ ದಕ್ಷಿಣ ಸಂಚಾರ ಠಾಣೆ ಮತ್ತು ಹೆಡ್ ಪೋಸ್ಟ್ ಆಫೀಸ್ ದಾವಣಗೆರೆಯಲ್ಲಿ ಬಂದು ದಂಡ ಪಾವತಿಸಬಹುದಾಗಿದೆ ಎಂದು ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.
ಎಸ್ಪಿ ಉಮಾ ಪ್ರಶಾಂತ್ ರ ಸೂಚನೆ ಮೇರೆಗೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಎಂ. ಸಂತೋಷ್, ಮಂಜುನಾಥ ಜಿ., ನಗರ ಪೊಲೀಸ್ ಉಪಾಧಿಕ್ಷಕ ಶರಣ ಬಸವೇಶ್ವರ ಭೀಮರಾವ್ ಅವರ ಮಾರ್ಗದರ್ಶನದಲ್ಲಿ ಟ್ರಾಫಿಕ್ ವಿಭಾಗದ ಸಿಪಿಐ ನಲವಾಗಲು ಮಂಜುನಾಥ್ ನೇತೃತ್ವದಲ್ಲಿ ದಕ್ಷಿಣ ಹಾಗೂ ಉತ್ತರ ಸಂಚಾರ ಪೊಲೀಸ್ ಠಾಣೆಗಳ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ತಂಡವು ಕಾರ್ಯಾಚರಣೆ ನಡೆಸಿತ್ತು.