SUDDIKSHANA KANNADA NEWS/ DAVANAGERE/ DATE-29-05-2025
ದಾವಣಗೆರೆ: ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ “ವಿಕಸಿತ ಕೃಷಿ ಸಂಕಲ್ಪ ಪೂರ್ವ ಮುಂಗಾರು 2025 ಅಭಿಯಾನ” ಆರಂಭಗೊಂಡಿದ್ದು, ಜೂನ್ 16ರವರೆಗೆ ನಡೆಯಲಿದೆ.
ಭಾರತ ಸರ್ಕಾರದ ಕೃಷಿ ಸಚಿವಾಲಯದ ಮಹತ್ವದ ಕಾರ್ಯಕ್ರಮ ಇದಾಗಿದೆ. ಕಾರ್ಯಕ್ರಮವು ಭಾರತೀಯ ಕೃಷಿ ಅನುಸಂಧಾನ ಪರಿಷತ್ ನವದೆಹಲಿ ಹಾಗೂ ಅದರ ನಾನಾ ಅಂಗಸಂಸ್ಥೆಗಳು, ಕರ್ನಾಟಕ ಸರ್ಕಾರದ ಅಭಿವೃದ್ಧಿ ಇಲಾಖೆಗಳಾದ ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ಮೀನುಗಾರಿಕೆ ಇಲಾಖೆ, ಪಶು ಸಂಗೋಪನೆ ಹಾಗೂ ಪಶುವೈದ್ಯ ಸೇವಾ ಇಲಾಖೆ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯ, ಆತ್ಮಯೋಜನೆ, ಹಾಗೂ ಇತರೆ ಸ್ಥಳೀಯ ಕೃಷಿಗೆ ಸಂಬಂಧಿಸಿದ ಸಂಸ್ಥೆಗಳ ಸಹಯೋಗದಲ್ಲಿ ಮುಂಗಾರು ಹಂಗಾಮಿನಲ್ಲಿ ಕೃಷಿ ಕ್ಷೇತ್ರಕ್ಕೆ ಹೊಸ ತಾಂತ್ರಿಕತೆಗಳು ಲಭ್ಯವಾಗುವಂತೆ ಅಭಿಯಾನವನ್ನು ಏರ್ಪಡಿಸಲಾಗಿದೆ.
ಭಾರತೀಯ ಕೃಷಿ ಅನುಸಂಧಾನ ಪರಿಷತ್, ನವದೆಹಲಿ ಹಾಗೂ ತರಳಬಾಳು ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಸಿರಿಗೆರೆ ಇವರುಗಳ ಸಂಯುಕ್ತಾಶ್ರಯದಲ್ಲಿ ಸ್ಥಾಪಿತಗೊಂಡಿರುವ ಐ.ಸಿ.ಎ.ಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ದಾವಣಗೆರೆ ಮುಂದಾಳತ್ವದಲ್ಲಿ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಕೈಗೊಂಡಿರುವ ದಾವಣಗೆರೆ ಜಿಲ್ಲೆಯ ಉಬ್ರಾಣಿ, ಸಾಸ್ವೆಹಳ್ಳಿ, ಜಗಳೂರು, ಭರಮಸಾಗರ ಪ್ರದೇಶಗಳ ಏತನೀರಾವರಿ ಯೋಜನೆಗಳಿಂದ ಕೃಷಿಕರಿಗೆವಿವಿಧ ಬೆಳೆಗಳ ಅನುಕೂಲತೆಗಳನ್ನು ಈ ಅಭಿಯಾನದ ಮುಖಾಂತರ ರೈತಬಾಂಧವರಿಗೆ ತಿಳಿಸಿಕೊಡಲಾಗುವುದು.
ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನಿಗಳು, ಅಧಿಕಾರಿಗಳು ರೈತರಕಡೆ ತೆರಳಿ ಹವಮಾನ ಆಧಾರಿತ ಹೊಸ ತಳಿಗಳ ಪರಿಚಯ, ರೋಗ ಮತ್ತು ಕೀಟಗಳ ಸಮಗ್ರ ನಿರ್ವಹಣೆ, ಸಮಗ್ರ ಪೋಷಕಾಂಶ ನಿರ್ವಹಣೆ, ಅಧಿಕ ಇಳುವರಿ ಕೊಡುವ ತಾಂತ್ರಿಕತೆಗಳು, ಕಡಿಮೆ ಖರ್ಚಿನ ತಾಂತ್ರಿಕತೆಗಳು, ನೈಸರ್ಗಿಕ ಕೃಷಿ, ಗ್ರಾಮೀಣ ಪ್ರದೇಶದಲ್ಲಿ ಕೃಷಿ ಉದ್ಯಮಗಳು ಬಗ್ಗೆ ಮಾಹಿತಿಕೊಡಲಾಗುವುದು.
ಈ ಅಭಿಯಾನಕ್ಕೆ ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ ಸಾಂಕೇತಿಕವಾಗಿ ಕೃಷಿ ಸಂಜೀವಿನಿ ರಥಗಳಿಗೆ ಬಾವುಟ ನಿಶಾನೆ ಮೂಲಕ ಚಾಲನೆ ನೀಡಲಾಗಿದೆ. ಸುಮಾರು 90 ಹಳ್ಳಿಗಳನ್ನು 15 ದಿನಗಳ ಈ ಅಭಿಯಾನ ಕಾರ್ಯಕ್ರಮವು 18,000 ಕೃಷಿ ಕುಟುಂಬಗಳನ್ನು ತಾಂತ್ರಿಕ ಮಾಹಿತಿ ಮೂಲಕ ತಲುಪುವ ಉದ್ದೇಶ ಹೊಂದಿದೆ. ದೇಶದ 731 ಕೃಷಿ ವಿಜ್ಞಾನ ಕೇಂದ್ರಗಳು 700 ಜಿಲ್ಲೆಗಳಲ್ಲಿ 2,000 ಕ್ಕೂ ಹೆಚ್ಚು ವಿಜ್ಞಾನಿಗಳ ತಂಡಗಳೊಂದಿಗೆ ಸುಮಾರು 1.5 ಕೋಟಿರೈತರೊಂದಿಗೆ ನೇರ ಸಂವಾದ
ನಡೆಸಲಿದ್ದಾರೆ. ಜಿಲ್ಲೆಯ ಪ್ರಗತಿಪರ ಕೃಷಿಕರು ತಮ್ಮ ಅನುಭವಗಳನ್ನು ಈ ಅಭಿಯಾನದಲ್ಲಿ ಹಂಚಿಕೊಳ್ಳಲಿದ್ದಾರೆ.
ಹೊಸ ತಂತ್ರಜ್ಞಾನ ಮಾಹಿತಿಗಳ ಜೊತೆಗೆ ಸರ್ಕಾರದಯೋಜನೆ ಕುರಿತು ಮಾಹಿತಿ ನೀಡಲಾಗುವುದು. ಸಂಶೋಧನೆಗೆ ಅಗತ್ಯವಿರುವ ವಿಚಾರಗಳನ್ನೂ ಗುರುತಿಸಲಾಗುವುದು ಎಂದು ಐಸಿಎಆರ್- ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರಾದ ದೇವರಾಜ ಟಿ. ಎನ್. ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಅಭಿಯಾನ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತ ಬಾಂಧವರು ಭಾಗವಹಿಸಿ ಇದರ ಪ್ರಯೋಜನ ಪಡೆದುಕೊಳ್ಳಲು ತರಳಬಾಳು ಶ್ರೀಗಳವರು ಈ ಮೂಲಕ ಆಶೀರ್ವಾದ ಪೂರಕವಾಗಿ ತಿಳಿಸಿದ್ದಾರೆ.