ದಾವಣಗೆರೆ: ಬಡಾವಣೆ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಇನ್ ಸ್ಪೆಕ್ಟರ್ ಮೇಲೆ ಹಲ್ಲೆ ನಡೆಸಿದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಧ್ಯಕ್ಷ ಹಾಗೂ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಆಪ್ತ ಅಯೂಬ್ ಪೈಲ್ವಾನ್ ಪುತ್ರರು ಹಾಗೂ ಇತರರ ವಿರುದ್ಧ ಗೂಂಡಾ ಕಾಯ್ದೆಯಡಿ ಕೇಸ್ ದಾಖಲಿಸಿ ಜಿಲ್ಲೆಯಿಂದ ಗಡೀಪಾರು ಮಾಡಬೇಕು ಎಂದು ಬಿಜೆಪಿ ಜಿಲ್ಲಾ ಮುಖಂಡರು ಒಕ್ಕೊರಲ ಆಗ್ರಹ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ್ ಎನ್. ನಾಗಪ್ಪ ಅವರು ಅಯೂಬ್ ಪೈಲ್ವಾನ್ ಪುತ್ರರು ರಾಷ್ಟ್ರೀಯ ಬೆದರಿಕೆ ಹಾಕುವ ಮಟ್ಟಕ್ಕೆ ಬೆಳೆದಿದ್ದಾರೆ. ಇಲ್ಲಿಯೇ ಚಿವುಟಿ ಹಾಕದಿದ್ದರೆ ಮುಂಬರುವ ದಿನಗಳು ಮತ್ತಷ್ಟು ಕಠಿಣವಾಗಲಿವೆ. ಜಿಲ್ಲಾ ಉಸ್ತುವಾರಿ ಸಚಿವರ ಕೃಪಕಟಾಕ್ಷ ಇದೆ ಎಂಬ ಕಾರಣಕ್ಕೆ ಪೊಲೀಸ್ ಇನ್ ಸ್ಪೆಕ್ಟರ್, ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಸಮಾಜಘಾತುಕರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸರ ಜೊತೆಗೆ ನಿಲ್ಲುತ್ತೇವೆ:
ಯಾವ ರೀತಿ ಹಲ್ಲೆ ನಡೆದಿದೆ ಎಂಬುದು ಪೊಲೀಸರಿಗೆ ಗೊತ್ತು. ಪೊಲೀಸರ ಜೊತೆಗೆ ನಾವು ನಿಲ್ಲುತ್ತೇವೆ. ತಕ್ಷಣವೇ ಹಲ್ಲೆಕೋರರನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ, ಜಿಲ್ಲೆಯಿಂದ ಗಡೀಪಾರು ಮಾಡಬೇಕು. ಮುಂದೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಎದುರಾಗುತ್ತಿದೆ. ಇಂಥ ಘಾತುಕರು ಇದ್ದರೆ ಚುನಾವಣೆ ನಡೆಸಲು ಕಷ್ಟವಾಗಬಹುದು, ಜನರು ಮತ ಹಾಕಲು ಬರುವುದೂ ಕಷ್ಟವಾಗಬಹುದು ಎಂದು ಕಳವಳ ವ್ಯಕ್ತಪಡಿಸಿದರು.
ರಾತ್ರಿ 3 ಗಂಟೆಗೆ ಓಪನ್:
ರಾತ್ರಿ ಮೂರು ಗಂಟೆಗೆ ಹೋದರೂ ಆಜಾದ್ ನಗರ ಸೇರಿದಂತೆ ಮುಸ್ಲಿಂ ಬಾಹುಳ್ಯದ ಪ್ರದೇಶಗಳು ಕಾರ್ಯಾಚರಿಸುತ್ತವೆ. ಯಾರೂ ಕೂಡ ಇದಕ್ಕೆ ಕಡಿವಾಣ ಹಾಕಲು ಹೋಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಏನೂ ಗೊತ್ತಿಲ್ಲ ಎಂಬ ಮಾತು ಹೇಳುವ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಈ ಪ್ರಕರಣ ಗಂಭೀರವಾಗಿ ಪರಿಗಣಿಸಬೇಕು. ಕೂಡಲೇ ಗೂಂಡಾ ಕಾಯ್ದೆ ಹಾಕಬೇಕು. ಇಂಥ ಘಟನೆಗಳು ಈ ಪ್ರದೇಶದಲ್ಲಿ ನಡೆದಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ದಾದಾಗಿರಿ, ಗೂಂಡಾಗಿರಿ ನಡೆದಿದೆ. ಪೊಲೀಸ್ ಇಲಾಖೆಯ ವೈಫಲ್ಯವೇ ಗಲಾಟೆಕೋರರು ಬೆಳೆಯಲು ಕಾರಣ ಎಂದು ಆರೋಪಿಸಿದರು.
ಹಸನ್ ಪೈಲ್ವಾನ್, ಹುಸೇನ್ ಪೈಲ್ವಾನ್ ಗಡಿಪಾರು ಮಾಡಿ:
ಹಸನ್ ಪೈಲ್ವಾನ್ ಹಾಗೂ ಹುಸೇನ್ ಪೈಲ್ವಾನ್ ಗಡೀಪಾರು ಮಾಡಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು. ಸಮಾಜಕ್ಕೆ ಕ್ಯಾನ್ಸರ್ ನಂತಿರುವ ಇಂಥವರನ್ನು ಹೊರ ಹಾಕಿ. ನೆಮ್ಮದಿಗೆ ಭಂಗ ಆಗಲು ಕಾರಣಕರ್ತರಾಗಿದ್ದಾರೆ. ಪೊಲೀಸರ ಮೇಲೆ ಹಲ್ಲೆ ನಡೆಸಿದವರು ಎಷ್ಟೇ ಪ್ರಭಾವಶಾಲಿಯಾದರೂ ಬಿಡಲೇ ಬಾರದು ಎಂದು ಆಗ್ರಹಿಸಿದರು.
ಅಕ್ರಮಗಳ ಸಾಮ್ರಾಜ್ಯವಾಗಿದೆ ದಾವಣಗೆರೆ:
ಡ್ರಗ್ಸ್ ಮಾಫಿಯಾ, ಅಕ್ರಮ ಅಕ್ಕಿ ಸಾಗಾಟ, ಇಸ್ಪೀಟ್ ಅಡ್ಡೆಗಳು, ಒಸಿ, ಈಗ ಪೊಲೀಸರ ಮೇಲೆ ಹಲ್ಲೆಯಂಥ ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳು ದಾವಣಗೆರೆಯಲ್ಲಿ ಹೆಚ್ಚಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಅಧಿಕಾರದಲ್ಲಿದ್ದಾರೆ. ನನ್ನ ಜೊತೆಯಲ್ಲಿ ಫೋಟೋ ತೆಗೆಸಿಕೊಂಡರೆ ನಾನು ಬೆಂಬಲಿಸುತ್ತೇನಾ ಎಂಬ ಉಡಾಫೆ ಮಾತುಗಳನ್ನು ಆಡಬಾರದು. ಅಧಿಕಾರದಲ್ಲಿ ಇದ್ದವರು ಸಮಾಜಘಾತುಕ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಬೇಕು. ಜಿಲ್ಲಾ ಪೊಲೀಸ್ ಇಲಾಖೆ ಸ್ವತಂತ್ರವಾಗಿ ಕೆಲಸ ಬಿಡಬೇಕು. ಬೂದಿಹಾಳ್ ಬಾಬು ಎಂಬುವವನು ಎಸ್ಪಿ ಹಾಗೂ ಐಜಿಪಿಗಿಂತ ದೊಡ್ಡವನಂತೆ ವರ್ತಿಸುತ್ತಿದ್ದಾನೆ. ಈತನು ಯಾರು ಎಂದು ಪ್ರಶ್ನಿಸಿದರು.
ಗೋಷ್ಠಿಯಲ್ಲಿ ಶಾಸಕ ಬಿ. ಪಿ. ಹರೀಶ್, ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಶ್ರೀನಿವಾಸ್ ದಾಸಕರಿಯಪ್ಪ, ಅಜಯ್ ಕುಮಾರ್, ಮಹಾನಗರ ಪಾಲಿಕೆ ಮಾಜಿ ಮೇಯರ್ ಎಸ್. ಟಿ. ವೀರೇಶ್ ಸೇರಿದಂತೆ ಬಿಜೆಪಿ ಮುಖಂಡರು ಹಾಜರಿದ್ದರು.





Leave a comment