ನವದೆಹಲಿ: ದೆಹಲಿ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಯುವರಾಜ್ ಸಿಂಗ್ ಮಂಚಂದಾ (31) ಹತ್ಯೆ ಪ್ರಕರಣದಲ್ಲಿ ಬಂಧಿತಳಾಗಿರುವ ಮುಖ್ಯ ಆರೋಪಿ ಆನ್ಯಾ ವಾಟ್ಸ್ ಹಾಗೂ ಆಕೆಯ ಪಾರ್ಟನರ್ ಸನ್ಯಮ್ ಸಚ್ದೇವ ವಿರುದ್ಧ ಕೊಲೆಯಾಗುವುದಕ್ಕಿಂತ ಕೆಲವು ವಾರಗಳಷ್ಟೇ ಮುಂಚೆ ₹1.25 ಕೋಟಿ ರೂಪಾಯಿ ವಂಚನೆ ಮತ್ತು ಕ್ರಿಮಿನಲ್ ಸಂಚಿನ ದೂರು ದಾಖಲಾಗಿತ್ತು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ಆಗಸ್ಟ್ 16, 2026 ರಂದು ದಾಖಲಾಗಿದ್ದ FIR ಪ್ರಕಾರ, ಆನ್ಯಾ ವಾಟ್ಸ್ ತನಗೆ ಕೇಂದ್ರ ಗೃಹ ಸಚಿವಾಲಯ, ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್, ಎನ್ಐಎ ( ಮತ್ತು ಜಾರಿ ನಿರ್ದೇಶನಾಲಯದ (ED) ಹಿರಿಯ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕವಿದೆ ಎಂದು ಜನರನ್ನು ನಂಬಿಸುತ್ತಿದ್ದಳು. R&AW ನಿಕಟಪೂರ್ವ ಮುಖ್ಯಸ್ಥ ಸಮಂತ್ ಗೋಯಲ್ ತನ್ನ ಚಿಕ್ಕಪ್ಪ ಹಾಗೂ ಮತ್ತೊಬ್ಬ ಹಿರಿಯ ಅಧಿಕಾರಿ ಅನಿಲ್ ಗುಪ್ತಾ ತನ್ನ ಸ್ಥಳೀಯ ಪೋಷಕರೆಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದ್ದಳು.
ಇಷ್ಟೇ ಅಲ್ಲದೆ, ಸಂತ್ರಸ್ತರಿಗೆ ED ಯಿಂದ ನೋಟಿಸ್ ಬಂದಿದೆ ಎಂದು ನಕಲಿ ವಾಟ್ಸಾಪ್ ಪತ್ರಗಳನ್ನು ಕಳುಹಿಸಿ, ಪ್ರಕರಣ ರದ್ದುಗೊಳಿಸಿಕೊಡುವುದಾಗಿ ಹೇಳಿ ₹1.25 ಕೋಟಿಗೂ ಅಧಿಕ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಳು. ಪ್ರಕರಣಗಳನ್ನು ಸಂಪೂರ್ಣ ಕ್ಲೋಸ್ ಮಾಡಲು ಆಕೆ ಸಂತ್ರಸ್ತನಿಂದ ಬರೋಬ್ಬರಿ ₹26 ಕೋಟಿಗೆ ಬೇಡಿಕೆಯಿಟ್ಟು ಬೆದರಿಕೆ ಹಾಕಿದ್ದಳು.
ಹಣಕಾಸು ವೈಷಮ್ಯ ಮತ್ತು ಭೀಕರ ಕೊಲೆ:
ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಈ ಹಿಂದೆ ಆನ್ಯಾ ಜೊತೆ ಕೆಲಸ ಮಾಡಿದ್ದ ಯುವರಾಜ್ ಸಿಂಗ್ ಮಂಚಂದಾ, ಸೆಪ್ಟೆಂಬರ್ 6 ರಂದು ಗುರುಗ್ರಾಮದಲ್ಲಿ ಆಕೆಯನ್ನು ಭೇಟಿಯಾಗಲು ತೆರಳಿದ್ದರು. ಹಣಕಾಸಿನ ವಹಿವಾಟು ಹಾಗೂ ಸಾಲದ ಹಣ ಹಿಂತಿರುಗಿಸುವ ವಿಚಾರವಾಗಿ ಇಬ್ಬರ ನಡುವೆ ಭಿನ್ನಾಭಿಪ್ರಾಯವಿತ್ತು. ಭೇಟಿಯ ವೇಳೆ ಯುವರಾಜ್ ಅವರನ್ನು ಕಾರಿನಲ್ಲೇ ಗುಂಡಿಕ್ಕಿ ಕೊಲೆ ಮಾಡಲಾಗಿತ್ತು.
ಕೊಲೆಯ ನಂತರ ಆನ್ಯಾ ಮತ್ತು ಸನ್ಯಮ್ ಮೃತದೇಹವನ್ನು ಎರಡು ದಿನಗಳ ಕಾಲ ಕಾರಿನಲ್ಲೇ ಇಟ್ಟುಕೊಂಡು ಗುರುಗ್ರಾಮ ಸುತ್ತಾಡಿದ್ದು, ನಂತರ ಸೆಪ್ಟೆಂಬರ್ 8 ರಂದು ಬಾದ್ಶಾಪುರದ ಚರಂಡಿಯೊಂದರಲ್ಲಿ ಎಸೆದಿದ್ದರು. ಅನುಮಾನ ಬಾರದಂತೆ ತಡೆಯಲು ಯುವರಾಜ್ ಮೊಬೈಲ್ನಿಂದಲೇ ಅವರ ಕುಟುಂಬಸ್ಥರಿಗೆ “ನಾನು ಸುರಕ್ಷಿತವಾಗಿದ್ದೇನೆ, ಬೆಂಗಳೂರಿಗೆ ತೆರಳುತ್ತಿದ್ದೇನೆ” ಎಂದು ಸುಳ್ಳು ವಾಟ್ಸಾಪ್ ಸಂದೇಶಗಳನ್ನು ಕಳುಹಿಸುತ್ತಿದ್ದರು.
ಪ್ರಕರಣ ದಾಖಲಿಸಿಕೊಂಡ ದೆಹಲಿ ಪೊಲೀಸರು, ಆರೋಪಿಗಳ ಹೊಸ ಮೊಬೈಲ್ ಸಂಖ್ಯೆಯ ಜಾಡು ಹಿಡಿದು ಉತ್ತರಾಖಂಡದ ಕೈಂಚಿ ಧಾಮ್ನಲ್ಲಿದ್ದ ಆನ್ಯಾ ವಾಟ್ಸ್ ಮತ್ತು ಸನ್ಯಮ್ ಸಚ್ದೇವ್ ಅವರನ್ನು ಬಂಧಿಸಿದ್ದಾರೆ. ಪೊಲೀಸರು ಈಗ ಆಕೆಯ ₹1.25 ಕೋಟಿ ವಂಚನೆ ಪ್ರಕರಣಕ್ಕೂ ಹಾಗೂ ಯುವರಾಜ್ ಹತ್ಯೆಗೂ ಏನಾದರೂ ನೇರ ಸಂಬಂಧವಿದೆಯೇ ಎಂಬ ಕೋನದಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ.





Leave a comment