SUDDIKSHANA KANNADA NEWS/DAVANAGERE/DATE:25_09_2025
ದಾವಣಗೆರೆ: ದಾವಣಗೆರೆ ನಗರ ಸ್ವಚ್ಚತೆಗಾಗಿ ರಾಷ್ಟ್ರೀಯ ಮಟ್ಟದಲ್ಲಿ 32 ನೇ ಸ್ಥಾನ ಪಡೆದಿದ್ದು ಸಾರ್ವಜನಿಕರು ಸ್ವಯಂಪ್ರೇರಿತವಾಗಿ ಇನ್ನೂ ಹೆಚ್ಚಿನ ಸ್ವಚ್ಚತೆ ಕಾಪಾಡಿಕೊಂಡಲ್ಲಿ ದೇಶದಲ್ಲಿ ಇನ್ನೂ ಹೆಚ್ಚಿನ ಮಟ್ಟದ ನಗರವಾಗಿ ಬೆಳೆಯಲು ಸಹಕಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಆಶಯ ವ್ಯಕ್ತಪಡಿಸಿದರು.
READ ALSO THIS STORY: ಶೋಷಿತ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬಾಡದ ಆನಂದರಾಜು ಹೃದಯಾಘಾತಕ್ಕೆ ಬಲಿ: ಸ್ನೇಹಪರ ಜೀವಿಯ ಯಶೋಗಾಥೆ ಕಂಪ್ಲೀಟ್ ಡೀಟೈಲ್ಸ್
ಅವರು ಕುಂದುವಾಡ ಕೆರೆ ಸುತ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಾನಗರಪಾಲಿಕೆ ಮತ್ತು ವಿವಿಧ ಸಂಘ, ಸಂಸ್ಥೆಗಳ ಮತ್ತು ಸಾರ್ವಜನಿಕರ ಸಹಕಾರದಲ್ಲಿ ಕೈಗೊಂಡ ಸ್ವಚ್ಚತಾ ಹೀ ಸೇವಾ ಪಾಕ್ಷಿಕದ ಅಂಗವಾಗಿ ಒಂದು ದಿನ, ಒಂದು ಗಂಟೆ ಎಲ್ಲರೊಟ್ಟಿಗೆ ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪ್ರತಿಜ್ಞಾವಿಧಿ ಬೋಧಿಸಿ ಸ್ವತಃ ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ಭಾಗಿಯಾಗಿ ಮಾತನಾಡಿದರು.
ಒಂದು ದಿನ ಸ್ವಚ್ಚತೆ ಕೈಗೊಂಡಾಕ್ಷಣ ಸಂಪೂರ್ಣ ಸ್ವಚ್ಚತೆ ಕಾಣುವುದಿಲ್ಲ. ಆದರೆ ನಿರಂತರ ಇದೇ ರೀತಿ ಮುಂದುವರೆದಲ್ಲಿ ಗಣನೀಯವಾಗಿ ಸ್ವಚ್ಚತೆ ಕಾಣಬಹುದು, ಇದರಿಂದ ಸ್ವಚ್ಚ ಪರಿಸರ ನಿರ್ಮಾಣವಾಗಲಿದೆ. ಸಾರ್ವಜನಿಕರ ಸಹಭಾಗಿತ್ವದಲ್ಲಿ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜನರು ಪ್ಲಾಸ್ಟಿಕ್, ಹಸಿ ಕಸ, ಒಣ ಕಸ ಹಾಗೂ ಇತರೆ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿರುವುದನ್ನು ಕಾಣಬಹುದು. ಜನರಲ್ಲಿ ಜಾಗೃತಿ ಮೂಡಿಸಿ ಕಸವನ್ನು ಬೇರ್ಪಡಿಸಿ ಸಂಗ್ರಹಿಸುವ ಜೊತೆಗೆ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಮುಖೇನ ಜಲಚರಗಳ ರಕ್ಷಣೆ, ಐತಿಹಾಸಿಕ, ಪುಣ್ಯ ಸ್ಥಾನಗಳ ರಕ್ಷಣೆ ಮತ್ತು ಪರಿಸರ ಮಾಲಿನ್ಯ ತಡೆಗೆ ಶ್ರಮಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ದಾವಣಗೆರೆ ನಗರ ವ್ಯಾಪ್ತಿಯಲ್ಲಿ ಅಧಿಕ ಜನಸಂಖ್ಯೆ ಹೊಂದಿದ್ದು, ಕೇವಲ 400ಪೌರಕಾರ್ಮಿರಿದ್ದಾರೆ. ಅವರಿಂದ ಇಂತಹ ಬೃಹತ್ ನಗರ ಪ್ರದೇಶವನ್ನು ಸಂಪೂರ್ಣ ಸ್ವಚ್ಚಗೊಳಿಸಲು ಸಾಧ್ಯವಾಗುವುದಿಲ್ಲ. ನಮ್ಮ ಪರಿಸರ ಸ್ವಚ್ಚವಾಗಿಟ್ಟುಕೊಳ್ಳಲು ನಾಗಕರಿರು ಸಹ ಸ್ವಚ್ಚತಾ ಕಾರ್ಯಕ್ಕೆ ಸಹಕರಿಸಿ, ಹಸಿಕಸ ಒಣಕಸ ಎಲ್ಲೆಂದರಲ್ಲಿ ಎಸೆಯದೇ ಬೇರ್ಪಡಿಸಿ ಸ್ಥಳೀಯ ಸಂಸ್ಥೆಗಳ ಕಸಸಂಗ್ರಹ ವಾಹನಗಳಿಗೆ ನೀಡಲು ತಿಳಿಸಿದರು.
ಸ್ವಚ್ಚತೆ ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕ ಕುಂದುಕೊರತೆ ವ್ಯವಸ್ಥೆ ನಿವಾರಣೆಗೆ “ದಾವಣಗೆರೆ ಸ್ಮಾರ್ಟ್ ಹೆಲ್ಪ್ ಅಪ್ಲಿಕೇಷನ್” ಬಿಡುಗಡೆ ಮಾಡಲಾಗಿದೆ. ನಾಗರಿಕ ಸೇವೆ ಮತ್ತು ಹೊಣೆಗಾರಿಕೆಯನ್ನು ಸುಧಾರಿಸುವತ್ತ ಒಂದು ಪ್ರಮುಖ ಹೆಜ್ಜೆಯಾಗಿ ಈ ಆಪ್ನ್ನು ಜಿಲ್ಲಾ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ ಬಿಡುಗಡೆಗೊಳಿಸಿದ್ದಾರೆ. ಸಾರ್ವಜನಿಕರು ಮಹಾನಗರ ಪಾಲಿಕೆಯ ಆರೋಗ್ಯ ಮತ್ತು ಪರಿಸರ ವಿಭಾಗಕ್ಕೆ ಸಂಬಂಧಿಸಿದಂತೆ ಮುಖ್ಯವಾಗಿ ಕಸವಿಲೇವಾರಿ ಸಮಸ್ಯೆ ಕುರಿತು ಛಾಯಾಚಿತ್ರಗಳೊಂದಿಗೆ ಮೊಬೈಲ್ ಅಪ್ಲಿಕೇಷನ್ ಮೂಲಕ ದೂರು ಸಲ್ಲಿಸಿ, ಸ್ವೀಕೃತಿ ಪಡೆಯಲು ಮತ್ತು ನಿಗಧಿತ ಸಮಯದಲ್ಲಿ ದೂರು ಪರಿಹಾರವಾಗುವ ಬಗ್ಗೆ ಪರಿಶೀಲಿಸಲು ಅವಕಾಶವಿರುತ್ತದೆ ಎಂದು ಮಾಹಿತಿ ನೀಡಿದರು.
ದೂರು ಸಲ್ಲಿಸುವ ವಿಧಾನ:
ಕಸ ವಿಲೇವಾರಿ ಕುರಿತ ಪುರಾವೆಗಳ ಛಾಯಾಚಿತ್ರಗಳನ್ನು ಮೊಬೈಲ್ ಅಪ್ಲಿಕೇಶನ್ ಮುಖಾಂತರ ಅಪ್ಲೋಡ್ ಮಾಡುವುದರೊಂದಿಗೆ ಸರಳ ನೊಂದಣಿ ಮಾಡಿಕೊಳ್ಳಬಹುದಾಗಿರುತ್ತದೆ. ನಾಗರಿಕರು ತಮ್ಮ ಆದ್ಯತೆಯ ಭಾಷೆ – ಕನ್ನಡ ಅಥವಾ ಇಂಗ್ಲಿಷ್ನಲ್ಲಿ ದೂರು ಸಲ್ಲಿಸಬಹುದು. ಹಾಗೆಯೇ ಸಮಯ-ಬದ್ಧ ಪರಿಹಾರ ಕಾರ್ಯವಿಧಾನಕ್ಕೆ ಸಹ ಅವಕಾಶ ಕಲ್ಪಿಸಲಾಗಿದೆ. ನಾಗರಿಕರ ಪಾರದರ್ಶಕತೆಗಾಗಿ ತಮ್ಮ ದೂರನ್ನು ಯಾರು ನಿರ್ವಹಿಸುತ್ತಿದ್ದಾರೆ ಮತ್ತು ಯಾವ ಹಂತದಲ್ಲಿದೆ ಎಂಬುದನ್ನು ಸುಲಭವಾಗಿ ವೀಕ್ಷಿಸಬಹುದು. ನಗರದ ನಾಗರಿಕರ ಅಗತ್ಯತೆ ಮತ್ತು ಪ್ರತಿಕ್ರಿಯೆಗಳನ್ನು ಆಧರಿಸಿ ಈ ಕುಂದು ಕೊರತೆ ಅಪ್ಲಿಕೇಷನ್ ಅನ್ನು ಸುಧಾರಣೆ ಮಾಡಲಾಗುತ್ತದೆ ಎಂದರು.
ಸಾರ್ವಜನಿಕರು ಸತ್ತ ಪ್ರಾಣಿಗಳನ್ನು ತೆರವುಗೊಳಿಸದೇ ಇರುವುದು. ಕಸದ ರಾಶಿ, ಕಸದ ಬುಟ್ಟಿಗಳನ್ನು ಸ್ವಚ್ಛಗೊಳಿಸದಿರುವುದು. ಕಸದ ವಾಹನಗಳು ಬಾರದಿರುವುದು. ರಸ್ತೆಯಲ್ಲಿನ ಕಸವನ್ನು ಗುಡಿಸದಿರುವುದು. ತೆರೆದ ಜಾಗದಲ್ಲಿ ಕಸವನ್ನು ಸುಡುವುದು. ಕಟ್ಟಡದ ನಿರ್ಮಾಣದ ಸಾಮಗ್ರಿ, ಅವಶೇಷಗಳನ್ನು ಹಾಗೆ ಬಿಟ್ಟಿರುವ ಕಸ ವಿಲೇವಾರಿ ಕುರಿತು ದೂರನ್ನು ಸಲ್ಲಿಸಬಹುದಾಗಿದೆ. ದೂರು ಸಲ್ಲಿಸಲು ಪ್ಲೇ-ಸ್ಟೋರ್ನಲ್ಲಿ https://play.google.com/store/apps/details?id=com.dvgsmart.help ಜಾಲತಾಣದಲ್ಲಿ ಡೌನ್ಲೋಡ್ ಮಾಡಿಕೊಳ್ಳಲಾಗುವುದು.
ಸ್ವಚ್ಚತಾ ಕಾರ್ಯದಲ್ಲಿ ಅಧಿಕಾರಿಗಳು ಸ್ವಯಂ ಸೇವಕರು, ಪೌರಕಾರ್ಮಿಕರು ಸೇರಿ ನೂರಾರು ಜನರು ಭಾಗವಹಿಸಿ ಸುಮಾರು 350 ಕೆ.ಜಿ.ಗೂ ಅಧಿಕ ಪ್ಲಾಸ್ಟಿಕ್ ಮತ್ತು ಕಸವನ್ನು ಸಂಗ್ರಹಿಸಲಾಯಿತು. ಈ ವೇಳೆ ವಾಯು ವಿಹಾರಿಗಳಿಗೆ ಕುಂದುವಾಡ ಕೆರೆಯಲ್ಲಿ ಬೆಳಗಿನ ಮತ್ತು ಸಂಜೆಯ ವಾಯುವಿಹಾರಿಗಳಿಗೆ ಅನುಕೂಲವಾಗುವಂತೆ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಮನವಿ ಮಾಡಿದರು.
ದೂಡಾ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ, ಸಿಇಒ ಗಿತ್ತೆ ಮಾಧವ ವಿಠಲರಾವ್, ದೂಡಾ ಆಯುಕ್ತ ಹುಲಿಮನಿ ತಿಮ್ಮಣ್ಣ, ನಗರಾಭಿವೃದ್ದಿ ಕೋಶ ಯೋಜನಾ ನಿರ್ದೇಶಕ ಮಹಾಂತೇಶ್, ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಧುಸೂಧನ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೊಟ್ರೇಶ್ ಜಿ., ಜಿಲ್ಲಾ ಆರೋಗ್ಯಾಧಿಕಾರಿ ಡಾ. ಷಣ್ಮುಖಪ್ಪ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನಾಗರಾಜ್, ಮಹಾನಗರ ಪಾಲಿಕೆ ಮಾಜಿ ಸದಸ್ಯ ಗಡಿಗುಡಾಳ್ ಮಂಜುನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.