ದಾವಣಗೆರೆ: ನಗರದ ಶಕ್ತಿ ದೇವತೆ ಶ್ರೀ ದುರ್ಗಾಂಬಿಕಾ ದೇವಿಯ ಅದ್ಧೂರಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ, ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹಾಗೂ ಸಾರ್ವಜನಿಕರಲ್ಲಿ ಸುರಕ್ಷತಾ ಭಾವನೆಯನ್ನು ಮೂಡಿಸುವ ಉದ್ದೇಶದಿಂದ ಇಂದು ಬೃಹತ್ ಪೊಲೀಸ್ ಪಥ ಸಂಚಲನ ನಡೆಸಲಾಯಿತು.
ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವ:
ನೂತನ ಜಿಲ್ಲಾ ಪೊಲೀಸ್ ಅಧೀಕ್ಷಕ ಶೇಖರ್ ಹೆಚ್.ಟಿ. ಅವರ ನೇತೃತ್ವದಲ್ಲಿ ನಡೆದ ಈ ಪಥ ಸಂಚಲನವು ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಮತ್ತು ಜನನಿಬಿಡ ಪ್ರದೇಶಗಳಲ್ಲಿ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ.
ಸಂಚರಿಸಿದ ಮಾರ್ಗಗಳು:
ಪೊಲೀಸ್ ಪಥ ಸಂಚಲನವು ನಗರದ ಹೊಂಡದ ವೃತ್ತದಿಂದ ಆರಂಭವಾಗಿ ಅಂಬೇಡ್ಕರ್ ವೃತ್ತ, ಹಗೆದಿಬ್ಬ ವೃತ್ತ, ಕಾಳಿಕಾದೇವಿ ರಸ್ತೆ, ಗ್ಯಾಸ್ ಕಟ್ಟೆ ವೃತ್ತ, ಎಸ್.ಕೆ.ಪಿ ರಸ್ತೆ ಮೂಲಕ ದುರ್ಗಾಂಬಿಕಾ ದೇವಾಸ್ಥಾನಕ್ಕೆ ತಲುಪಿತು. ನಂತರ ಅಲ್ಲಿಂದ ನೇರವಾಗಿ ಹೊಂಡದ ವೃತ್ತಕ್ಕೆ ಬಂದು ಮುಕ್ತಾಯಗೊಂಡಿತು.
ಭಾಗವಹಿಸಿದ ಅಧಿಕಾರಿಗಳು:
ಈ ಪಥ ಸಂಚಲನದಲ್ಲಿ ನಗರ ಡಿವೈಎಸ್ಪಿ ಶರಣಬಸವೇಶ್ವರ ಬಿ., ಪೊಲೀಸ್ ನಿರೀಕ್ಷಕರಾದ ವಸಂತ್, ಸುನೀಲ್ ಕುಮಾರ್, ಶಿಲ್ಪಾ, ನಂಜುಂಡಸ್ವಾಮಿ, ಮಂಜುನಾಥ ಕುಪ್ಪೇಲೂರು ಭಾಗವಹಿಸಿದ್ದರು. ಇವರೊಂದಿಗೆ ಪಿಎಸ್ಐಗಳಾದ ರವಿನಾಯ್ಕ, ಸಚಿನ್, ಶಕುಂತಲಾ ಹಾಗೂ ಆರ್.ಎ.ಎಫ್ (RAF)ತಂಡದ ಪೊಲೀಸ್ ನಿರೀಕ್ಷಕ ರಾಜು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು. ನಗರ ಪೊಲೀಸ್ ಹಾಗೂ ಡಿಎಆರ್ (DAR) ಪಡೆಗಳು ಪಥ ಸಂಚಲನದಲ್ಲಿ ಶಿಸ್ತುಬದ್ಧವಾಗಿ ಪಾಲ್ಗೊಂಡಿದ್ದವು.





Leave a comment