SUDDIKSHANA KANNADA NEWS/ DAVANAGERE/ DATE_08-07_2025
ದಾವಣಗೆರೆ: ದಾವಣಗೆರೆ ನಗರ ಸೇರಿದಂತೆ ಜಿಲ್ಲೆಯಲ್ಲಿ ಪರಿಸರ ಸಂರಕ್ಷಣೆ ಮಾಡಲು ಮತ್ತು ಏಕಬಳಕೆ ಪ್ಲಾಸ್ಟಿಕ್ನ್ನು ಸಂಪೂರ್ಣವಾಗಿ ನಿಷೇಧಿಸಲು ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಿ. ಎಂ. ಗಂಗಾಧರಸ್ವಾಮಿ ತಿಳಿಸಿದರು.
ಈ ಸುದ್ದಿಯನ್ನೂ ಓದಿ: ಯಡಿಯೂರಪ್ಪರಿಂದ 1 ಸಾವಿರ ರೂಪಾಯಿ ಸ್ವಂತಕ್ಕೆ ಕೆಲಸ ಮಾಡಿಸಿಕೊಂಡಿದ್ದರೆ ರಾಜಕೀಯ ನಿವೃತ್ತಿ: ಸಿಡಿದೆದ್ದ ಜಿ.ಎಂ. ಸಿದ್ದೇಶ್ವರ!
ಅವರು ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಹೋಟೆಲ್ ಮಾಲಿಕರು, ಕಲ್ಯಾಣ ಮಂಟಪ ಮಾಲಿಕರು, ಬಟ್ಟೆ ಅಂಗಡಿ, ಕ್ಯಾಟರಿಂಗ್, ಆಸ್ಪತ್ರೆ ಮಾಲಿಕರೊಂದಿಗೆ ಪರಿಸರ ಸಂರಕ್ಷಣೆ ಮತ್ತು ಏಕಬಳಕೆ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಮನವರಿಕೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪರಿಸರ ಸಂರಕ್ಷಣೆಯಲ್ಲಿ ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಬಹಳ ಮುಖ್ಯವಾಗಿದೆ. ಏಕ ಬಳಕೆ ಪ್ಲಾಸ್ಟಿಕ್ ಮಾರಾಟ, ಉತ್ಪಾದನೆ ನಿಷೇಧವಿದೆ. ಆದರೆ ಇದರ ಬಳಕೆ ಮಾಡಲಾಗುತ್ತಿದೆ. ಏಕಬಳಕೆ ಪ್ಲಾಸ್ಟಿಕ್ ನಿರ್ವಹಣೆಯನ್ನು ವೈಜ್ಞಾನಿಕವಾಗಿ ಮಾಡಬೇಕಾಗಿದೆ. ಪಾಲಿಕೆ ಕಸ ಸಂಗ್ರಹ ವಾಹನಗಳು ಬಂದಾಗ ನಾಗರಿಕರು ಹಸಿ-ಕಸ ಮತ್ತು ಒಣಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ ನೀಡಬೇಕು ಎಂದರು.
ಕಲ್ಯಾಣ ಮಂಟಪದಲ್ಲಿ ಉತ್ಪತ್ತಿಯಾಗುವ ಕಸವನ್ನು ಸಹ ಪ್ಲಾಸ್ಟಿಕ್ ಪ್ರತ್ಯೇಕಿಸಿ ನೀಡಬೇಕು. ಬಾಳೆ ಎಲೆಯನ್ನು ಪ್ಲಾಸ್ಟಿಕ್ನಲ್ಲಿ ಮಡಚಿ ನೀಡದೇ, ಪ್ಲಾಸ್ಟಿಕ್ ಪ್ರತ್ಯೇಕಿಸಿ ನೀಡಬೇಕು. ಹೋಟೆಲ್ನವರು ಸಹ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಬೇಕು. ಬಟ್ಟೆ ಅಂಗಡಿಯಲ್ಲಿ ಬಟ್ಟೆ ಬ್ಯಾಗ್ಗಳನ್ನು ಹೆಚ್ಚು ಬಳಕೆಗೆ ಪ್ರೋತ್ಸಾಹಿಸಬೇಕು. ಸಿದ್ದ ಆಹಾರ ಪೂರೈಕೆದಾರರು ಸಹ ಏಕ ಬಳಕೆಯ ಪ್ಲಾಸ್ಟಿಕ್ನ್ನು ಬಳಕೆ ಮಾಡಬಾರದು. ಪ್ಲಾಸ್ಟಿಕ್ನಲ್ಲಿ ಆಹಾರವನ್ನು ಪ್ಯಾಕಿಂಗ್ ಮಾಡಬಾರದು. ಕ್ಲಿನಿಕ್ಸ್ ಮತ್ತು ಆಸ್ಪತ್ರೆಯವರು ಮೆಡಿಕಲ್ ಘನತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಯಾವುದೇ ಕಾರಣಕ್ಕೂ ಮೆಡಿಕಲ್ ಘನತ್ಯಾಜ್ಯವನ್ನು ಪಾಲಿಕೆ ಕಸದ ಗಾಡಿಗಳಿಗೆ ನೀಡದೆ, ಆರೋಗ್ಯ ಇಲಾಖೆಯಿಂದ ಪ್ರತ್ಯೇಕವಾಗಿ ಮೆಡಿಕಲ್ ಘನತ್ಯಾಜ್ಯ ನಿರ್ವಹಣೆಗೆ ಏಜೆನ್ಸಿ ನಿಗದಿ ಮಾಡಲಾಗಿದೆ. ಈ ಏಜೆನ್ಸಿಯವರು ಕ್ಲಿನಿಕಲ್ ತ್ಯಾಜ್ಯವನ್ನು ಸಂಗ್ರಹಿಸುವರು ಎಂದು ಸೂಚನೆ ನೀಡಲಾಯಿತು.
ಪ್ಲಾಸ್ಟಿಕ್ ನಿಷೇಧ ಮತ್ತು ಬಳಕೆಯನ್ನು ಗಣನೀಯವಾಗಿ ತಗ್ಗಿಸಲು ಪ್ಲಾಸ್ಟಿಕ್ ಬಳಕೆದಾರರು ಮತ್ತು ಅಂಗಡಿಯವರೊಂದಿಗೆ ಮನವರಿಕೆ ಸಭೆಯನ್ನು ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿದಲ್ಲಿ ದಂಡವಿಧಿಸಲಾಗುತ್ತದೆ, ನಂತರ ಕಾನೂನು ಕ್ರಮ ಕೈಗೊಂಡು ಪರವಾನಗಿ ರದ್ದು ಮಾಡಲು ಕ್ರಮವಹಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಷಣ್ಮುಖಪ್ಪ, ಪಾಲಿಕೆ ಆಯುಕ್ತೆ ರೇಣುಕಾ, ಪರಿಸರ ಇಲಾಖೆ ಅಧಿಕಾರಿ ಹಾಗೂ ಅಂಗಡಿ ಮಾಲಿಕರು ಉಪಸ್ಥಿತರಿದ್ದರು.