ದಾವಣಗೆರೆ: ಇತ್ತೀಚೆಗೆ ನಗರಕ್ಕೆ ಆಗಮಿಸಿದ್ದ ಶಾಸಕ ಪ್ರದೀಪ್ ಈಶ್ವರ್ ಅವರು ಬಿಜೆಪಿಯವರ ಬಗ್ಗೆ, ಆಡಿರುವ ಮಾತಿಗೆ ದಾವಣಗೆರೆಗೆ ಬರಲಿ ಎಂಬ ದಾವಣಗೆರೆ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಬಿ.ಜಿ. ಅಜಯ್ ಕುಮಾರ್ ಹಾಕಿರುವ ಸವಾಲು ಕಾಂಗ್ರೆಸ್ ಪಕ್ಷ ಸ್ವೀಕರಿಸಲಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಬಿಜೆಪಿಗರು ಮುಸ್ಲಿಂ ಸಮುದಾಯದ ಬಗ್ಗೆ, ಹೊಂದಿರುವ ಅಭಿಪ್ರಾಯ ಖಂಡಿಸಿದ್ದರು.
ಮಾರ್ಚ್ 28ರಂದು ಬೆಳಿಗ್ಗೆ 11 ಗಂಟೆಗೆ ಪ್ರದೀಪ್ ಈಶ್ವರ್ ದಾವಣಗೆರೆಗೆ ಆಗಮಿಸುತ್ತಾರೆ. ನಗರದ ಕೆಬಿ ಬಡಾವಣೆಯಲ್ಲಿರುವ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡುವರು. ಆ ಬಳಿಕ ಅಲ್ಲಿಂದಲೇ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರ ಪರವಾಗಿ ಪ್ರಚಾರ ಮಾಡಲಿದ್ದಾರೆ. ತಾಕತ್ತಿದ್ದರೆ ಅಜಯ್ ಕುಮಾರ್ ಸೇರಿದಂತೆ ಬಿಜೆಪಿಗರು ತಡೆಯಲಿ. ಮಾತ್ರವಲ್ಲ, ನಾವೂ ಎಲ್ಲದಕ್ಕೂ ಸಿದ್ಧರಾಗಿದ್ದೇವೆ ಎಂದು ಎಚ್ಚರಿಕೆ ನೀಡಿದರು.
ನಿಜಾಂಶ ಹೇಳಿದರೆ ಬಿಜೆಪಿಗರಿಗೆ ಆಗುವುದಿಲ್ಲ. ಶಾಸಕ ಪ್ರದೀಪ್ ಈಶ್ವರ್ ಅವರನ್ನು ಏಕ ವಚನದಲ್ಲಿ ನಿಂದಿಸಿ ಬೆದರಿಕೆ ಹಾಕಿರುವ ಅಜಯಕುಮಾರ್ ಅವರಿಗೆ ಈ ದೇಶದ ಕಾನೂನಿನ ಬಗ್ಗೆ ಗೌರವ ಇದೆಯಾ? ಎಂದು ಪ್ರಶ್ನಿಸಿದರು.
ಹಿಂಬಾಗಿಲ ಮೂಲಕ ಅಧಿಕಾರಕ್ಕೆ ಬರುತ್ತಿರುವ ಬಿಜೆಪಿಗರು ಈಗಾಗಲೇ ದೇಶಾದ್ಯಂತ ಜಾತಿ ಧರ್ಮದ ಮೇಲೆ ಅಧಿಕಾರ ನಡೆಸಿ ಇದೀಗ ಸರ್ವ ಜನಾಂಗದ ಶಾಂತಿಯ ತೋಟವಾಗಿರುವ ದಾವಣಗೆರೆಯಲ್ಲಿ ಅಶಾಂತಿ ಸೃಷ್ಟಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಇದಕ್ಕೆ ಕಾಂಗ್ರೆಸ್ ಪಕ್ಷ ಆಸ್ಪದ ನೀಡುವುದಿಲ್ಲ ಎಂದು ದಿನೇಶ್ ಕೆ. ಶೆಟ್ಟಿ ಎಚ್ಚರಿಕೆ ನೀಡಿದರು.
ಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಅಯೂಬ್ ಪೈಲ್ವಾನ್, ಕೆ. ಜಿ. ಶಿವಕುಮಾರ್, ಅನಿತಾ ಬಾಯಿ, ರಾಘವೇಂದ್ರ ಗೌಡ, ಮೊಯಿನುದ್ದೀನ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅನಿತಾ ಬಾಯಿ, ಎ. ನಾಗರಾಜ್ ಮತ್ತಿತರರು ಹಾಜರಿದ್ದರು.





Leave a comment