SUDDIKSHANA KANNADA NEWS/ DAVANAGERE/ DATE:17-09-2023
ಬೆಂಗಳೂರು: ಕೋಟ್ಯಂತರ ರೂಪಾಯಿ ಆಸ್ತಿ ಒಡತಿಯಾಗಿರುವ ಹಿಂದೂ ಸಂಘಟನೆ ಉಗ್ರ ಭಾಷಣಕಾರ್ತಿ ಚೈತ್ರಾ ಕುಂದಾಪುರ (Kundapur) ಆಸ್ತಿ ಮಾಡಿರುವುದು ಒಂದೊಂದೇ ಬೆಳಕಿಗೆ ಬರುತ್ತಿದೆ. ಮನೆ ಕಟ್ಟಿಸುತ್ತಿರುವುದು, ಬ್ಯಾಂಕ್ ಬ್ಯಾಲೆನ್ಸ್ ಸೇರಿದಂತೆ ಚೈತ್ರಾ ಕುಂದಾಪುರ (Kundapur) ಆಸ್ತಿ ಎಷ್ಟಿದೆ ಎಂಬ ಬಗ್ಗೆ ಸಿಸಿಬಿ ಪೊಲೀಸರು ಬಟಾಬಯಲು ಮಾಡತೊಡಗಿದ್ದಾರೆ.
ಈ ಸುದ್ದಿಯನ್ನೂ ಓದಿ:
Bangalore: ಸುಲಭವಾಗಿ ಕನ್ನಡ ಕಲಿಯಬೇಕಾ? ಕನ್ನಡ ಡಿಸ್ಕೋ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ ಬೆಂಗಳೂರಿನ 17 ವರ್ಷದ ಪೋರ…!
ಕಡಿಮೆ ಅವಧಿಯಲ್ಲಿ ಇಷ್ಟೊಂದು ಆಸ್ತಿ ಸಂಪಾದನೆ ಮಾಡಿರುವ ಚೈತ್ರಾ ಕುಂದಾಪುರ (Kundapur) ಬೆಳೆದು ಬಂದಿದ್ದೇ ಕುತೂಹಲಕಾರಿ.
ಯಾರೀ ಚೈತ್ರಾ ಕುಂದಾಪುರ (Kundapur):
ಬೇರೆ ಧರ್ಮದ ಬಗ್ಗೆ ಬೈಯ್ಯುವುದೇ ಹಿಂದುತ್ವ ಎನ್ನುವಂತೆ ಪ್ರಚೋದನಾಕಾರಿ ಭಾಷಣ ಮಾಡುತ್ತಲೇ ಇದ್ದ ಚೈತ್ರಾ ಕುಂದಾಪುರ (Kundapur) ಪ್ರಕರಣ ರಾಜ್ಯದಲ್ಲಿ ಸದ್ದು ಮಾಡಿದೆ. ಬಿಜೆಪಿ ಮುಖಂಡರಿಗೆ ಮುಜುಗರ ತಂದಿದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಸೇರಿದಂತೆ ಬಿಜೆಪಿಯ ಘಟಾನುಘಟಿ ನಾಯಕರ ಜೊತೆ ಇರುವ ಭಾವಚಿತ್ರಗಳು ವೈರಲ್ ಆಗುತ್ತಿವೆ. ಉದ್ಯಮಿ ಗೋವಿಂದ ಪೂಜಾರಿ ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಕಳೆದ ಚುನಾವಣೆಯಲ್ಲಿ ಕಣಕ್ಕಿಳಿಯಲು ಟಿಕೆಟ್ ಕೊಡಿಸುವುದಾಗಿ ಹೇಳಿ ಕೋಟ್ಯಂತರ ವಂಚನೆ ಆರೋಪ ಎದುರಿಸುತ್ತಿರುವ ಚೈತ್ರಾ ಕುಂದಾಪುರ ಕೇವಲ ಹತ್ತು ವರ್ಷಗಳಲ್ಲಿ ಇಷ್ಟೊಂದು ಖ್ಯಾತಿ ಹಾಗೂ ಕುಖ್ಯಾತಿ ಗಳಿಸಿದ್ದು ಸೋಜಿಗವೇ ಸರಿ.
ಕೋಟ್ಯಂತರ ರೂ. ಮೌಲ್ಯದ ಆಸ್ತಿ ಪತ್ತೆ, ಜಪ್ತಿ:
ಉದ್ಯಮಿ ಗೋಪಾಲ್ ಪೂಜಾರಿ ಪಂಗನಾಮ ಹಾಕಿದ ಆರೋಪ ಎದುರಿಸುತ್ತಿರುವ ಚೈತ್ರಾ ಕುಂದಾಪುರ (Kundapur) ಮಾಡಿರುವ ಆಸ್ತಿ ಕುರಿತಂತೆ ತನಿಖೆ ನಡೆಸಲಾಗುತ್ತಿದೆ. ಸದ್ಯಕ್ಕೆ ಬೆಂಗಳೂರು ಸಿಸಿಬಿ ಪೊಲೀಸರಿಗೆ ಚೈತ್ರಾ ಕುಂದಾಪುರ ಅವರಿಗೆ ಸೇರಿದ ಕೋಟ್ಯಂತರ ರೂಪಾಯಿ ಆಸ್ತಿ ಹೊಂದಿರುವುದು ಬೆಳಕಿಗೆ ಬಂದಿದೆ. ಸರ್ಚ್ ವಾರೆಂಟ್ ಪಡೆದು ಶೋಧನೆ ನಡೆಸಿದ ಸಿಸಿಬಿ ಪೊಲೀಸ್ ಪಡೆ ಉಡುಪಿಯ ಉಪ್ಪೂರು ಶ್ರೀರಾಮ ಸೊಸೈಟಿಯಲ್ಲಿ ಆಸ್ತಿ, ಬಂಗಾರ ಪತ್ತೆ ಮಾಡಿದೆ. 1 ಕೋಟಿ 8 ಲಕ್ಷ ರೂಪಾಯಿ FD, ಸೊಸೈಟಿಯಲ್ಲಿ 40 ಲಕ್ಷ ರೂ. ನಗದು, ಸುಮಾರು 400 ಗ್ರಾಂ ಚಿನ್ನ ಕೂಡ ಪತ್ತೆ ಆಗಿದೆ. ಖಾಸಗಿ ಬ್ಯಾಂಕ್ ನಲ್ಲಿ ಇಟ್ಟಿದ್ದ 1.8 ಕೋಟಿ ರೂಪಾಯಿ ಮೌಲ್ಯದ ಆಸ್ತಿಯ ಪತ್ರಗಳು ಸಂಬಂಧಿಕರ ಹೆಸರಿನಲ್ಲಿ ಇರುವುದು ಬೆಳಕಿಗೆ
ಬಂದಿದೆ. ಚೈತ್ರಾ ಖರೀದಿಸಿದ್ದ ಕಾರು ಸಹ ವಶಪಡಿಸಿಕೊಂಡಿದ್ದಾರೆ. ಮಾತ್ರವಲ್ಲ, ಪೊಲೀಸರು ಆಸ್ತಿ ಜಪ್ತಿ ಮಾಡುತ್ತಿದ್ದಾರೆ.
ಆರೋಗ್ಯ ಸ್ಥಿರ:
ಈ ನಡುವೆ ಆಸ್ಪತ್ರೆಗೆ ದಾಖಲಾಗಿದ್ದ ಆಸ್ಪತ್ರೆಯು ಚೈತ್ರಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದಾರೆ. ಚೈತ್ರಾ ಕುಂದಾಪುರ (Kundapur) ಅವರ ಆರೋಗ್ಯ ಸ್ಥಿರವಾಗಿದೆ. ಆದರೆ, ಎಂಆರ್ಐ ಸ್ಕ್ಯಾನ್ಗೆ ತಜ್ಞ ವೈದ್ಯರು ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ
ಚೈತ್ರಾಳಿಗೆ ವೈದ್ಯರು MRI ಸ್ಕ್ಯಾನ್ ಮಾಡಿದ್ದಾರೆ.
ಅಳುವುದು, ಕೂಗಾಡುವುದು ಬಿಟ್ಟಿಲ್ಲ:
ಚೈತ್ರಾ ಕುಂದಾಪುರ (Kundapur) ಬಂಧನವಾದ ದಿನದಿಂದಲೂ ಕೂಗಾಡುವುದು, ಚೀರಾಡುವುದನ್ನು ನಿಲ್ಲಿಸಿಲ್ಲ. ಅಭಿನವ ಶ್ರೀ ಬಂಧನವಾಗಲಿ, ಎಲ್ಲಾ ಸತ್ಯವೂ ಹೊರಬಲಿದೆ. ಅಲ್ಲಿಯವರೆಗೆ ನನಗೇನೂ ಕೇಳಬೇಡಿ. ಚೈತ್ರಾ ಪೊಲೀಸರ ವಿಚಾರಣೆಗೆ
ಸಹಕರಿಸುತ್ತಿಲ್ಲ ಎಂದು ತಿಳಿದುಬಂದಿದೆ. ಪೊಲೀಸರು ಇದುವರೆಗೂ ಒಂದು ಪುಟ ಹೇಳಿಕೆಯನ್ನೂ ದಾಖಲು ಮಾಡಲು ಸಾಧ್ಯವಾಗಿಲ್ಲ. ಅಷ್ಟು ಹೈಡ್ರಾಮಾ ಮಾಡುತ್ತಿದ್ದಾಳೆ. ನಾನೇನು ಮಾಡಿಲ್ಲ, ಎಲ್ಲವೂ ಸ್ವಾಮೀಜಿಗೆ ಗೊತ್ತು ಎಂದು ಮಾತ್ರ ಹೇಳುತ್ತಿದ್ದಾಳೆ. ಅಲ್ಲದೆ ಪ್ರತಿಯೊಂದಕ್ಕೂ ಅಳುವುದು ಮತ್ತು ಕೂಗಾಡುತ್ತಿದ್ದಾಳೆ. ಆಕೆ ನಾಟಕ ಮುಂದುವರಿಸಿದ್ದರೂ ಪೊಲೀಸರು ಮಾತ್ರ ತನಿಖೆ ಮತ್ತಷ್ಟು ಬಿರುಸುಗೊಳಿಸಿದ್ದಾರೆ. ಆಕೆ ಆಸ್ತಿ ಹೇಗೆ ಸಂಪಾದನೆ ಮಾಡಿದಳು ಎಂಬ ಕುರಿತಂತೆಯೂ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಹಿಂದೂ ಕಟ್ಟಾ ಅಭಿಮಾನಿಗಳಿಗೆ ಚೈತ್ರಾ ಕುಂದಾಪುರ ಭಾಷಣ ಎಂದರೆ ತುಂಬಾನೇ ಇಷ್ಟ. ಉಡುಪಿ ಜಿಲ್ಲೆ ಕುಂದಾಪುರ (Kundapur) ತಾಲೂಕಿನ ತೆಕ್ಕಟ್ಟೆ ಸಮೀಪದ ಪುಟ್ಟ ಗ್ರಾಮದ ಚೈತ್ರಾ ಕುಂದಾಪುರ (Kundapur), ಕೆಲ ಕಾಲ ಟಿವಿ ವಾಹಿನಿಗಳಲ್ಲಿಯೂ ಕೆಲಸ ಮಾಡಿದ್ದಾರೆ. ರಾಜ್ಯಮಟ್ಟದ ಪತ್ರಿಕೆಯೊಂದರಲ್ಲಿ ಉಪಸಂಪಾದಕಿಯಾಗಿಯೂ ಕೆಲಸ ಮಾಡಿದ್ದಾರೆ. ಜೊತೆಗೆ ವಿದ್ಯಾವಂತೆ ಕೂಡ ಹೌದು.
ಹತ್ಯೆ ವಿರೋಧಿಸಿ ಪ್ರತಿಭಟನೆಯಲ್ಲಿ ಚೈತ್ರಾ ರೋಷಾವೇಶ:
2014 ಹಾಗೂ 15ರಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ (Kundapur) ತಾಲೂಕಿನ ಬೈಂದೂರು ಭಾಗದಲ್ಲಿ ರತ್ನಾ ಕೊಠಾರಿ ಹಾಗೂ ಅಕ್ಷತಾ ದೇವಾಡಿಗ ರೇಪ್ ಅಂಡ್ ಮರ್ಡರ್ ಕೇಸ್ ರಾಜ್ಯಮಟ್ಟದಲ್ಲಿ ಸುದ್ದಿ ಮಾಡಿತ್ತು. ಆಗ ಎಸ್ಪಿ ಆಗಿದ್ದ ಅಣ್ಣಾಮಲೈ ಅವರಿಗೂ ಈ ಎರಡೂ ಪ್ರಕರಣಗಳು ಸವಾಲಿನದ್ದಾಗಿದ್ದವು. ಅಕ್ಷತಾ ದೇವಾಡಿಗ ಕೇಸ್ ಅಂತೂ ಉಡುಪಿ ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಪ್ರಕರಣದ ಆರೋಪಿಗಳ ಪತ್ತೆಗೆ ಹೋರಾಟದ ಕಾವು ಹೆಚ್ಚಾಗತೊಡಗಿತ್ತು. ಆಗ ಎಂಟ್ರಿ ಕೊಟ್ಟವರೇ ಚೈತ್ರಾ ಕುಂದಾಪುರ. ಅಲ್ಲಿಯವರೆಗೆ ಎಬಿವಿಪಿಯಲ್ಲಿ ಸಕ್ರಿಯ ಕಾರ್ಯಕರ್ತಳಾಗಿದ್ದ ಚೈತ್ರಾ ಕುಂದಾಪುರ ಈ ಹೋರಾಟದಲ್ಲಿ ಧುಮುಕುತ್ತಿದ್ದಂತೆ ಹೆಸರು ಮುನ್ನೆಲೆಗೆ ಬಂತು.
ಹಿಂದೂ ಫೈರ್ ಬ್ರ್ಯಾಂಡ್ ಬಂದಿದ್ದು ಆಗಲೇ. ಎಬಿವಿಪಿ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಉಗ್ರ ಭಾಷಣದ ಮೂಲಕ ಅಲ್ಲಿ ನೆರೆದಿದ್ದವರು ಮಾತ್ರವಲ್ಲ, ಹಿಂದುತ್ವ ಪ್ರತಿಪಾದಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಆ ನಂತರ ಕುಂದಾಪುರ ಹಾಗೂ ಬೈಂದೂರು ಭಾಗದಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿದರು. ಆರೋಪಿಗಳನ್ನು ಬಂಧಿಸಿದ ಬಳಿಕ ಪ್ರಕರಣ ಸುಖಾಂತ್ಯಗೊಂಡಿತ್ತು.
ಬಡ ಕುಟುಂಬದ ಹಿನ್ನೆಲೆ ಹೊಂದಿದ್ದ ಈಕೆ ಹಿಂದೂಪರ ಸಂಘಟನೆಯಲ್ಲಿ ತನ್ನನ್ನು ತೊಡಗಿಸಿಕೊಂಡು ಕೋಮುದ್ವೇಷದ ಭಾಷಣಗಳಿಂದಲೇ ಜನಪ್ರಿಯತೆ ಉತ್ತುಂಗಕ್ಕೆ ಏರಿದಳು. ದಿನಕಳೆದಂತೆ ದೊಡ್ಡ ಹುಡುಗರ ಪಡೆಯೇ ಈಕೆಗೆ ಬೆಂಗಾಲಾಗಿ ನಿಂತಿತು. ಹಿಂದೂ ನಾಯಕಿಯಾಗಿ, ಚುನಾವಣೆಯ ಸಮಯದಲ್ಲಿ ಬಿಜೆಪಿಯ ಪ್ರಚಾರಕಿಯಾಗಿ, ಉಳಿದ ಸಮಯದಲ್ಲಿ ಮುಸ್ಲಿಂರ ವಿರುದ್ದ ಬೆಂಕಿ ಉಗುಳುವ ಜ್ವಾಲಾಮುಖಿಯಾಗಿ ಗುರುತಿಸಿಕೊಂಡವಳು. ಅದರಲ್ಲಿಯೂ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯದಲ್ಲಿ ಹಿಂದೂ ಸಂಘಟನೆಯ ಹುಡುಗರ ಜೊತೆ ಗಲಾಟೆ ಮಾಡಿಕೊಂಡು ವಿವಾದಕ್ಕೆ ಕಾರಣಳಾಗಿದ್ದಳು. ಮಾತ್ರವಲ್ಲ, ಪೊಲೀಸ್ ಜೀಪ್ ಅನ್ನೂ ಸಹ ಹತ್ತಿದ್ದಳು.
ಗೋವಿಂದ ಪೂಜಾರಿ ಯಾರು…?
ಗೋವಿಂದ ಪೂಜಾರಿ ಅಲಿಯಾಸ್ ಗೋವಿಂದ ಪೂಜಾರಿ ಸಹ ಬೇರೆ ಜಿಲ್ಲೆಯವರಲ್ಲ. ಉಡುಪಿ ಜಿಲ್ಲೆಯ ಕುಂದಾಪುರ (Kundapur) ತಾಲೂಕಿನ ಬಿಜೂರಿನವರು. ಬಡತನದಲ್ಲೇ ಹುಟ್ಟಿ ಬೆಳೆದ ಅವರು ಕಷ್ಟಪಟ್ಟು ಇವತ್ತು ಯಶಸ್ವಿ ಉದ್ಯಮಿ ಎನಿಸಿಕೊಂಡಿದ್ದಾರೆ. ರಾಜಕಾರಣಕ್ಕೆ ಬಂದು ಸೇವೆ ಮಾಡಬೇಕೆಂಬ ಕನಸು ಹೊತ್ತಿದ್ದರು. ಇದಕ್ಕಾಗಿ ಸಮಾಜ ಸೇವೆ ಆಯ್ಕೆ ಮಾಡಿಕೊಂಡರು. ಹೊಗಳು ಭಟ್ಟರ ಪಡೆ ಕಟ್ಟಿಕೊಂಡಿದ್ದ ಗೋವಿಂದ ಪೂಜಾರಿ ಅವರ ವೀಕ್ನೆಸ್ ಸರಿಯಾಗಿ ಅರ್ಥೈಸಿಕೊಂಡ ಚೈತ್ರಾ ಪೂಜಾರಿ ತನ್ನ ಮಾತುಗಳ ಮೂಲಕವೇ ಪೂಜಾರಿ ಖೆಡ್ಡಾಕ್ಕೆ ಬೀಳುವಂತೆ ಮಾಡಿದ್ದಾರೆ.
ಇನ್ನು ಚೈತ್ರಾ ಕುಂದಾಪುರ ಭಾಷಣ ಆಲಿಸಿದ್ದ ಗೋವಿಂದ ಪೂಜಾರಿಯು ಸಹ ಈಕೆ ಹೆಣೆದ ಬಲೆಗೆ ಬಿದ್ದರು. ರಾಜಕೀಯದ ಗಂಧಗಾಳಿ ಅರಿಯದ ಗೋವಿಂದ ಪೂಜಾರಿಯು ಆರ್ ಎಸ್ ಎಸ್ ಪ್ರಮುಖರಾದ ಕಲ್ಲಡ್ಕ ಪ್ರಭಾಕರ್ ಭಟ್, ರಾಜ್ಯ ಮಟ್ಟದ ಪ್ರಮುಖ ವಾಹಿನಿಯೊಂದರ ಹಿರಿಯ ನಿರೂಪಕರ ಜೊತೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು. ಈ ಫೋಟೋವೂ ಈಗ ವೈರಲ್ ಆಗುತ್ತಿದೆ.
ಜೊತೆಗಿದ್ದವರ ಸಾಮರ್ಥ್ಯ, ಚಾರಿತ್ರ್ಯ ಅರಿಯದೇ ಹೋದ ಗೋವಿಂದ ಪೂಜಾರಿ ವಿದ್ಯಾವಂತರು, ಪ್ರಾಮಾಣಿಕರು, ಸ್ವಾಭಿಮಾನಿಗಳು, ಚಿಂತಕರು, ಬುದ್ದಿಜೀವಿಗಳಿಂದ ದೂರ ಇಟ್ಟಿದ್ದೇ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಹಿಂದೆಯೂ ಮೋಸ ಹೋಗಿದ್ದರು ಗೋವಿಂದ ಪೂಜಾರಿ:
ಗೋವಿಂದ ಪೂಜಾರಿ ಮೋಸ ಹೋಗುತ್ತಿರುವುದು ಇದು ಮೊದಲೇ ಬಾರಿಯಲ್ಲ. ಈ ಹಿಂದೆ ಎಲ್ಲೂರಿನಲ್ಲಿ ಅತಿ ಕಡಿಮೆ ಬೆಲೆಯ ಎಕರೆಗಟ್ಟಲೆ ಜಮೀನನ್ನು ದುಬಾರಿ ಬೆಲೆಗೆ ಇವರಿಗೆ ಮಾರಾಟ ಮಾಡಲಾಯಿತು. ಅದರ ಅಸಲಿಯತ್ತು ಅರಿಯದೇ
ಮೋಸ ಹೋದ ಇವರು ಅದೇ ಜಮೀನಿಗೆ ಕಾಂಪೌಂಡ್ ಕಟ್ಟುವಾಗ ತನ್ನ ಆಪ್ತನಾಗಿದ್ದ ವ್ಯಕ್ತಿಯಿಂದಲೇ ಲಕ್ಷಾಂತರ ರೂಪಾಯಿ ಕಳೆದುಕೊಂಡರು. ಮೀನಿನ ಚಿಪ್ಸ್ ಕಾರ್ಖಾನೆ ಮಾಡುತ್ತೇನೆಂದು ಶಿಲಾನ್ಯಾಸ ಮಾಡಿದರು. ನಷ್ಟ ಸಂಭವಿಸಿ ಕೈ ಸುಟ್ಟುಕೊಂಡರು.
ಕೆಲವರಂತೂ ಪೂಜಾರಿ ಅವರಿಂದ ಕೋಟಿಗಟ್ಟಲೇ ಹಣ ಲೂಟಿ ಮಾಡಿದರು. ಸುಮಾರು 12 ಮನೆಗಳನ್ನು ಬಡವರಿಗೆ ಕಟ್ಟಿಸಿಕೊಟ್ಟು, ಅದನ್ನು ಕಲ್ಲಡ್ಕ ಭಟ್ಟ, ವಿನಯ ಗುರೂಜಿ, ಚೈತ್ರಾ ಕುಂದಾಪುರ (Kundapur)ಮೊದಲಾದ ಹಿಂದೂಪರ ಸಂಘಟನೆಯವರ ಸಮ್ಮುಖದಲ್ಲಿ ಹಸ್ತಾಂತರಿಸುವ ಕಾರ್ಯಕ್ರಮ ಮಾಡಿದ್ದರು. ಈ ಮೂಲಕ ಬೈಂದೂರು ಕ್ಷೇತ್ರದಿಂದ ಚುನಾವಣಾ ಕಣಕ್ಕೆ ಇಳಿಯುವ ಆಸೆ ಹೊಂದಿದ್ದರು. ಪ್ರತಿಯೊಂದು ಕಾರ್ಯಕ್ರಮದಲ್ಲೂ ತಮ್ಮನ್ನು ಹೊಗಳಿ ಅಟ್ಟಕ್ಕೇರಿಸುವ ವ್ಯಕ್ತಿಗಳಿಂದ ಭಜನೆ ಮಾಡಿಸಿಕೊಂಡರು. ಸಾಮಾಜಿಕ ಜಾಲತಾಣ, ದೃಶ್ಯ ಮಾಧ್ಯಮಗಳಲ್ಲಿ ಸಾಕಷ್ಟು ಪ್ರಚಾರ ಕೊಟ್ಟರು. ಉಡುಪಿಯಲ್ಲಿ ನಡೆದ ಸಂಘದ ಐಟಿಸಿ ಶಿಬಿರದಲ್ಲಿ ಭಾಗವಹಿಸಿ, ಬಿಜೆಪಿ ಅಭ್ಯರ್ಥಿ ಆಗಲು ಎಲ್ಲಾ ರೀತಿಯ ಪೂರ್ವ ಸಿದ್ದತೆ ಮಾಡಿಕೊಂಡರು.
ಯಾವ ನಂಬಿಕೆ ಮೇಲೆ ಹಣ ಕೊಟ್ಟರು ಪೂಜಾರಿ…?
ಚುನಾವಣೆ ಸಮೀಪಿಸುತ್ತಿದ್ದಂತೆ ಗೋವಿಂದ ಪೂಜಾರಿಗೆ ಬಿಜೆಪಿ ಟಿಕೆಟ್ ಕೊಡಲಿಲ್ಲ. ಆಗಲೇ ಗೊತ್ತಾಗಿದ್ದು ಚೈತ್ರಾ & ಟೀಂನ ನಾಟಕದಲ್ಲಿ ನಾನೇ ದುರಂತ ನಾಯಕ ಎಂಬುದು. ಮತ್ತೊಂದು ಕಾಡುವ ಪ್ರಶ್ನೆ ಎಂದರೆ ಚೈತ್ರಾ ಕುಂದಾಪ (Kundapur)ರ ನಂಬಿ ಅಷ್ಟೊಂದು ಹಣ ಹೇಗೆ ಕೊಟ್ಟರು ಎಂಬುದು.
ಬೈಂದೂರಿನಲ್ಲಿ ಚುನಾವಣೆಯ ಪೂರ್ವದಲ್ಲಿ ಅಂದಿನ ಶಾಸಕರಾಗಿದ್ದ ಸುಕುಮಾರ ಶೆಟ್ಟರ ಕುರಿತು ಸಂಘ ಪರಿವಾರದಲ್ಲಿ ಅಸಮಾಧಾನವಿತ್ತು. ಹಾಗಾಗಿ ಹೊಸ ಅಭ್ಯರ್ಥಿಗಳ ಹುಡುಕಾಟದಲ್ಲಿ ತನಗೊಂದು ಅವಕಾಶ ದೊರಕಬಹುದೆಂದು, ಈ ಮಾತಿನಲ್ಲೇ ಮರುಳು ಮಾಡುವ ಚೈತ್ರಾಳ ಬಿಳಿನಗೆಯನ್ನು ನಂಬಿ ಕೈಸುಟ್ಟುಕೊಂಡರು. ಈ ಚೈತ್ರಾಳ ಮಾತು ಕೇಳಿದವರಿಗೆ ಗೊತ್ತು, ಅವಳು ಸುಳ್ಳನ್ನು ಸತ್ಯದ ತಲೆಯ ಮೇಲೆ ಹೊಡೆದಂತೆ ಹೇಗೆ ಹೇಳುತ್ತಾಳೆ ಎಂಬುದು. ಆದ್ದರಿಂದ ತನ್ನ ಆಪ್ತನ ಮೂಲಕ ಹತ್ತಿರವಾದ ಚೈತ್ರಾಳಿಗೆ ಗೋವಿಂದಣ್ಣ ಕೋಟಿ ಕೋಟಿ ಹಣ ನೀಡಿ ಈಗ ಸಂಕಷ್ಟ ಎದುರಿಸುತ್ತಿದ್ದಾರೆ ಎನ್ನುತ್ತಾರೆ ಪೂಜಾರಿ ಆಪ್ತವರ್ಗದವರು.
ಯಾರಿಗೆ ಕಾನೂನು ಕುಣಿಕೆ ಹೆಚ್ಚು…?
ಚೈತ್ರಾಳಿಗಿಂತ ಗೋವಿಂದ ಪೂಜಾರಿಯವರೇ ಕಾನೂನಿನ ಕುಣಿಕೆಯಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಹೆಚ್ಚು. ಕೋಟಿಗಟ್ಟಲೆ ನಗದನ್ನು ಟಿಕೇಟ್ ಸಲುವಾಗಿ ಲಂಚದ ರೂಪದಲ್ಲಿ ನೀಡಿದ್ದು ದೊಡ್ಡ ಆರ್ಥಿಕ ಅಪರಾಧ ಎನ್ನಿಸಿಕೊಳ್ಳುವ ಅಪಾಯವಿದೆ. ಜೊತೆಗೆ ಚೈತ್ರಾಳಿಗೆ ಹಣ ನೀಡಿರುವ ಕುರಿತು ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಪೂಜಾರಿಯವರೇ ಹೇಳಿರುವಂತೆ ಸಾಲ ಮಾಡಿ ಕೋಟಿಗಟ್ಟಲೆ ಹಣ ನೀಡಿದ್ದಾರೆ. ಬ್ಯಾಂಕ್ ನಲ್ಲಿ ಸಾಲ ಮಾಡುವಾಗ ಯಾವ ಉದ್ದೇಶಕ್ಕಾಗಿ ಹಣ ಪಡೆಯುತ್ತೇವೆ ಎನ್ನುವುದನ್ನು ತಿಳಿಸುವುದು ಸಾಮಾನ್ಯ. ಆದರೆ ಬಿಜೆಪಿ ಟಿಕೆಟ್ ಗಾಗಿ ಸಾಲ ತೆಗೆದದ್ದು ಅಪರಾಧವಾಗದೇ ಇರುತ್ತದೆಯೇ…? ಸಾಲ ಕೊಟ್ಟ ಸಂಸ್ಥೆ ಈ ಕುರಿತು ಕ್ರಮ ಕೈಗೊಂಡರೆ ಏನು ಗತಿ..? ಇದರ ಮಧ್ಯೆ ಜಾರಿ ನಿರ್ದೇಶನಾಲಯ ಇ.ಡಿ. ಇಷ್ಟು ದೊಡ್ಡ ಮೊತ್ತದ ಹಣ ನಗದಾಗಿ ಚಲಾವಣೆಯಾಗಿದ್ದರ ಕುರಿತು ತನಿಖೆ ನಡೆಸಿದರೆ ಯಾರಿಗೆ ಕಷ್ಟ ಎದುರಾಗಲಿದೆ ಎನ್ನುವ
ವಿಚಾರಗಳು ಚರ್ಚೆಯಾಗುತ್ತಿವೆ.
ಚೈತ್ರಾ ಲಪಟಾಯಿಸಿದ ಹಣದಲ್ಲಿ ಒಳ್ಳೆಯ ವಕೀಲರನ್ನು ಹಿಡಿದು ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದ ನಿರ್ದೋಷಿಯಾಗುವ ಸಾಧ್ಯತೆ ಇದೆ. ಬಿಜೆಪಿ ಹೈಕಮಾಂಡ್ ಓರ್ವ ಸಾಮಾನ್ಯ ಕಾರ್ಯಕರ್ತನಿಗೆ ಯಾವುದೇ ಹಣ ಪಡೆದುಕೊಳ್ಳದೇ ಟಿಕೆಟ್ ನೀಡಿದೆ. ಜೊತೆಗೆ ಗೆಲುವು ಸಾಧಿಸಿದೆ. ಹಾಗಾಗಿ ಬಿಜೆಪಿಗೂ ಈ ವ್ಯವಹಾರಕ್ಕೂ ಸಂಬಂಧವಿಲ್ಲ. ಹಾಗೆಯೇ ಚೈತ್ರಾಳಿಗೆ ಆರ್ ಎಸ್ ಎಸ್ ನಲ್ಲಿ ಯಾವುದೇ ಜವಾಬ್ದಾರಿಯಿಲ್ಲ, ಆದ್ದರಿಂದ ಇದರಲ್ಲಿ ಆರ್ ಎಸ್ ಎಸ್ ನ ಯಾವುದೇ ಪಾತ್ರವಿಲ್ಲ. ಹಿಂದೂಪರ ಸಂಘಟನೆಯ ಹೆಸರಲ್ಲಿ ಮೋಸ ಮಾಡುವ ವಂಚಕರ ಸಹವಾಸವೇ ಈ ಎಲ್ಲಾ ಬೆಳವಣಿಗೆಗಳಿಗೆ ಕಾರಣ ಎನ್ನುತ್ತಿದ್ದಾರೆ ಜನರು.
ಅನ್ಯ ಧರ್ಮದ ವಿರುದ್ಧ ಅಬ್ಬರಿಸಿ ಬೊಬ್ಬಿರಿಯುತ್ತಿದ್ದ ಚೈತ್ರಾಳಿಗೆ ಪೊಲೀಸರಿಂದ ರಕ್ಷಿಸಿಕೊಳ್ಳಲು ಮುಸ್ಲಿಂರ (ಸುರೈಯ್ ಅಂಜುಮ್) ಸಹಾಯ ಬೇಕು, ಹಾಗೆಯೇ ಇವಳ ಪರವಾಗಿ ವಾದ ಮಾಡಲು ಅನ್ಯಧರ್ಮಿಯರೇ (ಪ್ಯಾರಜಾನ್) ಬೇಕು ಜೊತೆಗೆ ಬಾಯಿಗೆ ಬಂದಂತೆ ಬೈಯ್ದು ದೊಡ್ಡ ವ್ಯಕ್ತಿಯಾಗಲೂ ಅನ್ಯಧರ್ಮವೇ ಬೇಕು. ಚಿಕಿತ್ಸೆ ನೀಡಲೂ ಸಹ ಅದೇ ಧರ್ಮದವರು ಬೇಕು. ಚೈತ್ರಾ ಕುಂದಾಪುರದಂಥವರಿಂದ ಇನ್ನೇನೂ ನಿರೀಕ್ಷಿಸಲು ಸಾಧ್ಯ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಲಾಗುತ್ತಿದೆ.