SUDDIKSHANA KANNADA NEWS/ DAVANAGERE/ DATE-06-06-2025
ದಾವಣಗೆರೆ: ಗೋವಂಶ ಜಾನುವಾರು ಹತ್ಯೆ ಹಾಗೂ ಪ್ರಾಣಿ ಬಲಿ ತ್ಯಜಿಸಿ ಅಹಿಂಸಾತ್ಮಕವಾಗಿ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬವನ್ನು ಆಚರಿಸಬೇಕೆಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ, ಗೋತೀರ್ಥ, ಸರ್ವ ಜೀವ ರಕ್ಷಾಧಾಮ, ವಿಶ್ವ ಗೋರಕ್ಷಾ ಮಹಾಪೀಠ, ಬಸವ ಧರ್ಮ ಜ್ಞಾನಪೀಠ ಮತ್ತು ಗೋವಂಶ ಮುಕ್ತ ಕರ್ನಾಟಕ ನಿರ್ಮಾಣ ಸಂಘಟನೆಗಳ ಒಕ್ಕೂಟ ಮನವಿ ಮಾಡಿವೆ.
ಬಕ್ರೀದ್ ಮುಂತಾದ ಹಬ್ಬಗಳಲ್ಲಿ ಗೋವುಗಳ ವಧೆ ಮಾಡುವುದು, ಬಲಿ ನೀಡುವುದು ಅನಿವಾರ್ಯವೇನಲ್ಲ ಎಂದು ಸ್ವತಃ ಖುರಾನ್ ನಲ್ಲಿ ಉಲ್ಲೇಖವಿದ್ದು, ಪ್ರವಾದಿ ಮಹಮ್ಮದ್ ಪೈಗಂಬರ್ ಅವರು ಅನ್ಯ ಧರ್ಮೀಯರ ಭಾವನೆಗಳಿಗೆ ಧಕ್ಕೆ ಉಂಟಾಗುವುದಾದರೆ ಗೋವಧೆ ಮಾಡಬಾರದು, ಒಂದು ವೇಳೆ ಆ ರೀತಿ ಮಾಡಿದ್ದಲ್ಲಿ ಅಲ್ಲಾನ ಮುಂದೆ ಅವರ ವಿರುದ್ಧ ಸಾಕ್ಷಿ ಹೇಳುತ್ತೇನೆ ಎಂದು ತಿಳಿಸಿದ್ದಾರೆ. ಈ ಕುರಿತು ಅನೇಕ ಮೌಲ್ವಿಗಳು ಫತ್ವಾ ಹೊರಡಿಸಿದ್ದು ಉಂಟು ಎಂದು ಒಕ್ಕೂಟದ ದಯಾನಂದ ಸ್ವಾಮೀಜಿ ಪತ್ರಿಕಾಹೇಳಿಕೆಯಲ್ಲಿ ತಿಳಿಸಿದ್ದಾರೆ.
ಭಾರತದ ಸರ್ವೋಚ್ಚ ನ್ಯಾಯಾಲಯವು ಸಹ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಗೋವoಶಾದಿ ಜಾನುವಾರುಗಳ ಹತ್ಯೆ ಮಾಡುವುದು ಅನಿವಾರ್ಯವೇನಲ್ಲ ಎಂಬುದನ್ನು ಖುರಾನ್ ಉಲ್ಲೇಖಿಸಿ ಆದೇಶ ನೀಡಿದೆ. ಭಾರತವನ್ನು ಆಳಿದ ಔರಂಗಜೇಬರನ್ನು ಒಳಗೊಂಡಂತೆ ಎಲ್ಲಾ ಮೊಗಲ್ ಸಾಮ್ರಾಟರು, ಕರ್ನಾಟಕದಲ್ಲಿ ಆಳ್ವಿಕೆ ನಡೆಸಿದ ಬಹುಮನಿ ಸುಲ್ತಾನರು ನವಾಬರುಗಳು ಗೋವಂಶ ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಿದಷ್ಟೇ ಅಲ್ಲದೆ ಗೋ ಹಂತಕರಿಗೆ ಕಠಿಣ ಶಿಕ್ಷೆ ವಿಧಿಸಿದ್ದರು ಎಂಬ ಐತಿಹಾಸಿಕ ದಾಖಲೆಯೂ ನಮಗೆ ಲಭ್ಯವಿದೆ ಎಂದಿದ್ದಾರೆ.
ಎಲ್ಲಾ ಧರ್ಮಗಳ ಮೂಲ ಆಶಯವೇ ಅಹಿಂಸೆ, ದಯೆ, ಕರುಣೆ, ಪ್ರೇಮ ಮತ್ತು ಮಾನವೀಯತೆ. ಸ್ವತಃ ಭಾರತ ಸಂವಿಧಾನವು ಸಹ ಎಲ್ಲಾ ಜೀವ ಜಂತುಗಳ-ಸಕಲ ಪ್ರಾಣಿಗಳ ಬಗ್ಗೆ ಅನುಕಂಪ ಹೊಂದಿರುವುದು ಭಾರತದ ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯವೆಂದು ಘೋಷಿಸಿದೆ, ನಿರ್ದೇಶಿಸಿದೆ ಎಂದು ತಿಳಿಸಿದ್ದಾರೆ.
ಎಲ್ಲಾ ಮುಸ್ಲಿಂ ಬಾಂಧವರು ಯಾವುದೇ ಜಾನುವಾರುಗಳ, ಒಂಟೆಗಳ ಹತ್ಯೆ ಮತ್ತು ಪ್ರಾಣಿಗಳ ಬಲಿಯನ್ನು ನೀಡದೆ ಅಹಿಂಸಾತ್ಮಕವಾಗಿ ಸಾತ್ವಿಕ ರೀತಿಯಲ್ಲಿ ತಮ್ಮ ಧರ್ಮಾಚರಣೆ, ಬಕ್ರೀದ್ ಮುಂತಾದ ಹಬ್ಬಗಳನ್ನು ಆಚರಿಸಬೇಕೆಂದು ಮನವಿ ಮಾಡಿದ್ದಾರೆ.
ಗೋವಂಶಾದಿ ಜಾನುವಾರುಗಳ ಹತ್ಯೆಗೆ ಕೇವಲ ಮುಸಲ್ಮಾನ ಬಾಂಧವರಷ್ಟೇ ಅಪರಾಧಿಗಳು ಅಲ್ಲ, ಕಾರಣರೂ ಅಲ್ಲ. ಚೆನ್ನಾಗಿದ್ದಾಗ ದುಡಿಸಿಕೊಂಡು ಹಾಲು, ಮೊಸರು, ತುಪ್ಪ ಉಂಡು ಕೊನೆಗೆ ವಯಸ್ಸಾಯಿತು ಎಂದು ನಿರ್ಧರಿಸಿ ಕೊಲ್ಲಲಿಕ್ಕಾಗಿ ಮಾರಾಟ ಮಾಡುವ ಹಿಂದುಗಳನ್ನು ಒಳಗೊಂಡಂತೆ ಎಲ್ಲಾ ಧರ್ಮಿಯ ರೈತರು, ಕೃಷಿಕರು, ಪಶು ಪಾಲಕರೂ ಕೂಡ ಮೂಲ ದೋಷಿಗಳು ಎಂದು ಅಸಮಾಧಾನ ಹೊರಹಾಕಿದ್ದಾರೆ.
ಕಾನೂನು ಮತ್ತು ನ್ಯಾಯಾಲಯಗಳ ಆದೇಶಗಳ ಅನ್ವಯ ಗೋವoಶಾದಿ ಜಾನುವಾರಗಳು ಹಾಗೂ ಇನ್ನಿತರ ಪ್ರಾಣಿಗಳ ಬಲಿಯನ್ನು ಬಕ್ರಿದ್ ಹಾಗೂ ಇನ್ನಿತರ ದಿನಗಳಲ್ಲಿ ತಡೆಗಟ್ಟಲು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ಪತ್ರಿಕಾ ಹೇಳಿಕೆಯಲ್ಲಿ ದಯಾನಂದ ಸ್ವಾಮೀಜಿ ಆದಿಯಾಗಿ ಸಂಘಟನೆಗಳ ಕೆ. ವಿ ನರಸಿಂಹನ್, ಉತ್ತಮ ಚಂದ ಚಾಜ್ಜೆಡ್, ಸುರೇಶ್ ಜಿ ರೂಣವಾಲ, ಅಶೋಕ್ ನಾಗೋರೆ, ಸುನಂದಾದೇವಿ, ಭರತ್ ಸೇನ್ ಕುಮಾರ್, ತ್ರಿಷಲ ಕೊಠಾರಿ ಕೋರಿದ್ದಾರೆ.