SUDDIKSHANA KANNADA NEWS/ DAVANAGERE/DATE:19_09_2025
ದಾವಣಗೆರೆ: ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ ನಗರದ ಡೆಂಟಲ್ ಕಾಲೇಜಿನಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ರಕ್ತದಾನ ಮಾಡುವ ಮೂಲಕ ಚಾಲನೆ ನೀಡಿದರು.
READ ALSO THIS STORY: ಹೊಸಚಿಕ್ಕನಹಳ್ಳಿ ಸರ್ಕಾರಿಶಾಲೆಗೆ ಡೆಸ್ಕ್ ವಿತರಣೆ, ಶೈಕ್ಷಣಿಕ- ಕ್ರೀಡಾ ಕ್ಷೇತ್ರಕ್ಕೆ ಎಸ್. ಎಸ್. ಮಲ್ಲಿಕಾರ್ಜುನ್ ಕೊಡುಗೆ ಅಪಾರ: ಗಡಿಗುಡಾಳ್ ಮಂಜುನಾಥ್
ಎಸ್.ಎಸ್. ಕೇರ್ ಟ್ರಸ್ಟ್ ವಿದ್ಯಾರ್ಥಿ ಘಟಕದ ಸಹಯೋಗದಲ್ಲಿ ಇಂದಿನಿಂದ ಸೆ. 30ರವರೆಗೆ ಬಾಪೂಜಿ ಎಜುಕೇಶನ್ ಅಸೋಸಿಯೇಷನ್ ನ 10 ಶಿಕ್ಷಣ ಸಂಸ್ಥೆಗಳಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಂಸದರು ತಾವು ವಿದ್ಯಾಭ್ಯಾಸ ಮಾಡಿದ ವಿದ್ಯಾಸಂಸ್ಥೆಯಾದ ಬಾಪೂಜಿ ಡೆಂಟಲ್ ಕಾಲೇಜಿನಲ್ಲಿ ರಕ್ತದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ.
ಈ ವೇಳೆ ಮಾತನಾಡಿದ ಸಂಸದರು ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ತಮ್ಮ ತಮ್ಮ ಸಂಸ್ಥೆಗಳಲ್ಲಿ ನಿಗದಿತ ದಿನಾಂಕಗಳಲ್ಲಿ ಬಂದು ರಕ್ತದಾನ ಮಾಡುವಂತೆ ಕರೆ ನೀಡಿದರು.
ಪ್ರತಿ 2 ಸೆಕೆಂಡಿಗೆ ಒಮ್ಮೆ ಭಾರತದಲ್ಲಿ ರಕ್ತದ ಅವಶ್ಯಕತೆ ಉಂಟಾಗುತ್ತದೆ. ಪ್ರತಿದಿನ ಸುಮಾರು 12,000 ಮಂದಿ ರಕ್ತದ ಕೊರತೆಯಿಂದ ಜೀವ ಕಳೆದುಕೊಳ್ಳುತ್ತಾರೆ. ನಾವೆಲ್ಲಾ ಒಟ್ಟಾಗಿ ರಕ್ತದ ಕೊರತೆಯಿಂದ ಜೀವಹಾನಿಯನ್ನು ತಡೆಯೋಣ. ನೀವು ರಕ್ತದಾನ ಮಾಡಿದ ದಿನವನ್ನು ಮರೆಯಬಹುದು. ಆದರೆ ಅಗತ್ಯ ಇರುವವರು ತಮ್ಮ ಜೀವನಪರ್ಯಂತ ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ.ನಾವು ಸಮಾಜಕ್ಕೆ ಕೊಡುವ ಅತಿ ಶ್ರೇಷ್ಠ ಕೊಡುಗೆ ರಕ್ತದಾನವಾಗಿದೆ. ಆದ್ದರಿಂದ ರಕ್ತದಾನ ಮಾಡಿ ಮಾದರಿಯಾಗೋಣ ಎಂದು ಕರೆ ನೀಡಿದರು.
ರಕ್ತದಾನದ ಮೊದಲ ದಿನ ನೂರು ಯೂನಿಟ್ ರಕ್ತ ಸಂಗ್ರಹಣೆಯಾಗಿದೆ. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು,ವಿದ್ಯಾರ್ಥಿಗಳು ಹಾಗೂ ಎಸ್ಎಸ್ ಕೇರ್ ಟ್ರಸ್ಟ್ ನ ವಿದ್ಯಾರ್ಥಿ ವಿಭಾಗದ ಸದಸ್ಯರು ಉಪಸ್ಥಿತರಿದ್ದರು.