SUDDIKSHANA KANNADA NEWS| DAVANAGERE| DATE:12-04-2023
ದಾವಣಗೆರೆ: ಆನ್ ಲೈನ್ (ONLINE) ಮೂಲಕ ಬಿಜೆಪಿ (BJP) ಪ್ರಚಾರ ತಂತ್ರ ನಡೆಸುತ್ತಿರುವ ಆರೋಪ ಕೇಳಿ ಬಂದಿದೆ. ಯಾವುದೇ ರೀತಿಯ ಅನುಮತಿ ಪಡೆಯದೇ ಟೆಲಿ ಕಾಲ್ ಮೂಲಕ ಮತದಾರರ ಸೆಳೆಯುವ ಪ್ರಯತ್ನ ನಡೆಯುತ್ತಿದ್ದ ಸ್ಥಳದಲ್ಲಿ 59ಕ್ಕೂ ಹೆಚ್ಚು ಲ್ಯಾಪ್ ಟಾಪ್ (LAPTOP) ವಶಪಡಿಸಿಕೊಂಡ ಘಟನೆ ನಗರದ ಚೇತನ ಹೊಟೇಲ್ ಎದುರುಗಡೆ ಇರುವ ರಾಮಕೃಷ್ಣ (RAMAKRISHNA) ಆರ್ಥೋಪೆಡಿಕ್ ಎಸೆನ್ ಷಿಯಲ್ಸ್ ಆಸ್ಪತ್ರೆ ಕಟ್ಟಡದಲ್ಲಿ ನಡೆದಿದೆ.
ಆಸ್ಪತ್ರೆಯ ಮೊದಲನೇ ಮಹಡಿಯಲ್ಲಿ 60ಕ್ಕೂ ಜನರನ್ನು ಈ ಕಾರ್ಯಕ್ಕೆ ಬಳಸಿಕೊಳ್ಳಲಾಗುತಿತ್ತು. ಟೆಲಿಕಾಲ್ (TELICALL) ಮೂಲಕ ಕರೆ ಮಾಡಿ ಕಳೆದ ಐದು ವರ್ಷಗಳ ಪ್ರಧಾನಿ ನರೇಂದ್ರ ಮೋದಿ (NARENDRA MODI) ಸಾಧನೆ ಹಾಗೂ ರಾಜ್ಯ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಹೇಳುವುದು, ಬಿಜೆಪಿಯ ಕಮಲ ಗುರುತಿಗೆ ಮತ ಚಲಾಯಿಸುವಂತೆ ಆಮಿಷ ಒಡ್ಡುವ ರೀತಿಯಲ್ಲಿ ಆನ್ ಲೈನ್ ಮೂಲಕ ಮತದಾರರ ಸೆಳೆಯುವ ಯತ್ನ ಮಾಡಲಾಗುತಿತ್ತು ಎಂಬ ಆರೋಪ ಕೇಳಿ ಬಂದಿದೆ.
60ಕ್ಕೂ ಹೆಚ್ಚು ಟೆಲಿ ಕಾಲರ್ ಗಳನ್ನು ಈ ಕೆಲಸಕ್ಕೆ ನಿಯೋಜನೆ ಮಾಡಲಾಗಿತ್ತು. ಸೂರ್ಯ ಎಂಬುವವರ ಹೆಸರಿನಲ್ಲಿ ಅಗ್ರಿಮೆಂಟ್ ಆಗಿದ್ದ ಕಚೇರಿ ಸೀಜ್ ಅನ್ನು ಚುನಾವಣಾಧಿಕಾರಿಗಳು ಮಾಡಿದರು.
ಗುಜರಾತ್, ಬಿಹಾರ ಮೂಲದವರಿಂದ ಕಾರ್ಯ ನಿರ್ವಹಣೆ ಜವಾಬ್ದಾರಿ ವಹಿಸಲಾಗಿದ್ದು, ಸ್ಥಳೀಯರಿಗೆ ಉದ್ಯೋಗ ನೀಡುವ ನೆಪದಲ್ಲಿ ಈ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ.
ಬಿಜೆಪಿ (BJP) ಸಾಧನೆಗಳ ಬಗ್ಗೆ, ಕಾಂಗ್ರೆಸ್ (CONGRESS) ಪಕ್ಷ (PARTY) ಅವಹೇಳನ ಕೆಲಸಕ್ಕೆ ನಿಯೋಜನೆ ಮಾಡಲಾಗಿದೆ ಎಂಬ ದೂರು ಕೇಳಿ ಬಂದಿದೆ. ಟೆಲಿ ಕಾಲ್ ಮೂಲಕ ಮತದಾರರಿಗೆ ಬಿಜೆಪಿಗೆ ಮತ ಹಾಕುವಂತೆ ಆಮಿಷ ಹಾಗೂ ವೆಬ್ ಸೈಟ್, ವ್ಯಾಟ್ಸಪ್ ಗ್ರೂಪ್ ಮಾಡಿ ಕಾಂಗ್ರೆಸ್ ತೇಜೋವಧೆ ಮಾಡಲಾಗುತಿತ್ತು ಎಂದು ಹೇಳಲಾಗಿದೆ.
ಸ್ಥಳಕ್ಕೆ ಬಂದ ಚುನಾವಣಾಧಿಕಾರಿಗಳು ಆಗಮಿಸಿ ಕೆಲಸ ಮಾಡುವವರ ವಿಚಾರಣೆ ನಡೆಸಿದರು. ನಮಗೆ ಕೆಲಸ ಬೇಕಿತ್ತು, ಬಂದಿದ್ದೇವೆ. ಬೇರೆ ಏನೂ ಗೊತ್ತಿಲ್ಲ ಎಂದು ಕೆಲಸಗಾರರು ಹೇಳಿದರು.
ಕಾಂಗ್ರೆಸ್ ಮುಖಂಡರ ದಾಳಿ:
ಆನ್ ಲೈನ್ ಪ್ರಚಾರ ಸ್ಥಳಕ್ಕೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ದಾಳಿ ನಡೆಸಿದರು. ಕಾನೂನು ರೀತಿಯ ಕ್ರಮ ತೆಗೆದುಕೊಳ್ಳಬೇಕು. ಯಾವುದೇ ಅನುಮತಿ ಪಡೆಯದೇ ಮತದಾರರನ್ನು ಆನ್ ಲೈನ್ ಮೂಲಕ ಸೆಳೆಯುವ ಮೂಲಕ ಬಿಜೆಪಿ ವಾಮಮಾರ್ಗ ಅನುಸರಿಸುತ್ತಿದೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದರು.
ಸ್ಥಳದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಜಮಾಯಿಸಿದರು. ಬಿಜೆಪಿಯ ಮುಖಂಡರು, ಕಾರ್ಯಕರ್ತರು ಬಂದಿದ್ದು, ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಅಧಿಕಾರಿಗಳು ಲ್ಯಾಪ್ ಟಾಪ್ ಸೀಜ್ ಮಾಡಿ ತೆಗೆದುಕೊಂಡು ಹೋದರು. ಕಚೇರಿಯ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ.
ವಾಮಮಾರ್ಗದಲ್ಲಿ ಬಿಜೆಪಿ: ಕೈ ಕೆಂಡಾಮಂಡಲ
ವಾಮಮಾರ್ಗದ ಮೂಲಕ ಬಿಜೆಪಿ ಜನರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ. ಸ್ಥಳದಲ್ಲಿ ಕೆಲ ಐಡಿ ಕಾರ್ಡ್ ಗಳು ಪತ್ತೆಯಾಗಿವೆ. ಆನ್ ಲೈನ್ ಮೂಲಕ ಮತದಾರರನ್ನು ಅಕ್ರಮವಾಗಿ ಸೆಳೆಯುವ ಪ್ರಯತ್ನ ಬಯಲಾಗಿದೆ. ಕಾನೂನಿನ ಪ್ರಕಾರ ಕಟ್ಟುನಿಟ್ಟಿನ ಕ್ರಮ ಆಗಬೇಕು. ತಪ್ಪಿತಸ್ಥರು ಯಾರೇ ಇದ್ದರೂ ಕ್ರಮ ಕೈಗೊಳ್ಳಬೇಕು ಎಂದು ಮಹಾನಗರ ಪಾಲಿಕೆ ವಿರೋಧ ಪಕ್ಷದ ಮಾಜಿ ನಾಯಕ ಗಡಿಗುಡಾಳ್ ಮಂಜುನಾಥ್, ಕಾಂಗ್ರೆಸ್ ಮುಖಂಡ ಕೆ. ಜಿ. ಶಿವಕುಮಾರ್ ಮತ್ತಿತರರು ಆಗ್ರಹಿಸಿದರು.
ಬಿಜೆಪಿ ಸ್ಪಷ್ಟನೆ:
ವಾಮಮಾರ್ಗದಲ್ಲಿ ಪ್ರಚಾರ ನಡೆಸಲಾಗುತ್ತಿಲ್ಲ. ಕಾಂಗ್ರೆಸ್ ನವರು ಮಾಡುತ್ತಿರುವ ಆರೋಪ ಶುದ್ಧ ಸುಳ್ಳು ಎಂದು ಬಿಜೆಪಿ ಮುಖಂಡರು ಸ್ಪಷ್ಟಪಡಿಸಿದರು.
ಕೇಸರಿ- ಕೈ ಸೇನಾನಿಗಳ ವಾಗ್ಯುದ್ಧ:
ಚೇತನಾ ಹೊಟೇಲ್ ಬಳಿ ಬಿಗುವಿನ ವಾತಾವರಣ ನಿರ್ಮಾಣ ಆಗಿತ್ತು. ಮೊದಲು ಕಾಂಗ್ರೆಸ್ಸಿಗರು ಆಗಮಿಸಿದರೆ ಆನಂತರ ಬಿಜೆಪಿಯವರು ಬಂದರು.ಈ ವೇಳೆ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಜಟಾಪಟಿ ನಡೆಯಿತು.
ಟೆಲಿಕಾಲ್ ಮೂಲಕ ಮತ ಸೆಳೆಯುವ ಕಚೇರಿ ಮೇಲೆ ದಾಳಿ ಬಳಿಕ ಅಧಿಕಾರಿಗಳು ಲ್ಯಾಪ್ ಟಾಪ್ ಸೀಜ್ ಮಾಡಿ ಹೋಗುತ್ತಿದ್ದಂತೆ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ಪರ- ವಿರೋಧ ಘೋಷಣೆ ಕೂಗಲು ಆರಂಭಿಸಿದರು.
ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರು ಘೋಷಣೆ ಮುಂದುವರಿಸಿದರು. ಪರಿಸ್ಥಿತಿ ಅರಿತ ಬಡಾವಣೆ ಪೊಲೀಸರು ಎರಡೂ ಪಕ್ಷದವರನ್ನು ಕಳುಹಿಸಲು ಹರಸಾಹಸ ಪಡಬೇಕಾಯಿತು.
ಭ್ರಷ್ಟ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ ಎಂದು ಕಾಂಗ್ರೆಸ್ ಮುಖಂಡರು ಕೂಗಿದರೆ, ಪ್ರತಿಯಾಗಿಜೈಶ್ರೀರಾಮ್ ಎಂದು ಘೋಷಣೆಯನ್ನು ಬಿಜೆಪಿಗರು ಹಾಕಿದರು.