ಬಿಜ್ನೋರ್ (ಉತ್ತರ ಪ್ರದೇಶ): ಗ್ರಾಮದ ಕಳಪೆ ರಸ್ತೆ ಹಾಗೂ ಮೂಲಸೌಕರ್ಯಗಳ ಸಮಸ್ಯೆಗಳನ್ನು ವೀಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಕ್ಕಾಗಿ ಯೂಟ್ಯೂಬರ್ ಹಾಗೂ ಡಿಜಿಟಲ್ ಪತ್ರಕರ್ತನೊಬ್ಬನ ಮೇಲೆ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ಕೊತ್ವಾಲಿ ದೇಹತ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಘಟನೆಯ ಹಿನ್ನೆಲೆ:
ಸಂತ್ರಸ್ತ ಯೂಟ್ಯೂಬರ್ ನೀಡಿರುವ ದೂರಿನ ಪ್ರಕಾರ, ಸೆಪ್ಟೆಂಬರ್ 11ರಂದು ಶುಕ್ರವಾರದ ಪ್ರಾರ್ಥನೆ ಮುಗಿಸಿ ಮಸೀದಿಯಿಂದ ಹೊರಬರುತ್ತಿದ್ದಾಗ ರಾಮೂನ್ ಅಲಿಯಾಸ್ ಮುನ್ಷಿ ಎಂಬ ವ್ಯಕ್ತಿ ಅವರನ್ನು ತಡೆದು, “ನೀನು ದೊಡ್ಡ ಪತ್ರಕರ್ತನ ಎಂದು ಭಾವಿಸಿದ್ದೀಯಾ? ಗ್ರಾಮದ ವೀಡಿಯೊಗಳನ್ನು ಏಕೆ ಮಾಡುತ್ತಿದ್ದೀಯಾ?” ಎಂದು ಬೆದರಿಕೆ ಒಡ್ಡಿದ್ದಾನೆ.
ತದನಂತರ, ಗ್ರಾಮ ಪಂಚಾಯತಿ ಅಧ್ಯಕ್ಷೆಯ (ಪ್ರಧಾನ್) ಪತಿ ಇಮ್ರಾನ್, ಅವರ ಸಹೋದರ ಫುರ್ಕಾನ್ ಸೇರಿದಂತೆ ಶಾಬಾನ್, ಝೀಶಾನ್ ಮತ್ತು ಅಶ್ರಫ್ ಎಂಬುವವರು ಸ್ಥಳಕ್ಕೆ ಬಂದು ಯೂಟ್ಯೂಬರ್ ಮೇಲೆ ಹಲ್ಲೆ ನಡೆಸಿದ್ದಾರೆ. ಮುಂದೆ ವೀಡಿಯೊ ಮಾಡಿದರೆ ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾರೆ.
ಠಾಣೆಯವರೆಗೂ ಬೆನ್ನಟ್ಟಿ ಹಲ್ಲೆ:
ಸಂತ್ರಸ್ತ ಯೂಟ್ಯೂಬರ್ ಘಟನಾ ಸ್ಥಳದಿಂದ ತಪ್ಪಿಸಿಕೊಂಡು ಕೊತ್ವಾಲಿ ದೇಹತ್ ಪೊಲೀಸ್ ಠಾಣೆಗೆ ತೆರಳಲು ಯತ್ನಿಸಿದಾಗಲೂ ಆರೋಪಿಗಳ ಗುಂಪು ಅವರನ್ನು ಬೆನ್ನಟ್ಟಿ ಹಲ್ಲೆ ನಡೆಸಿ, ಠಾಣೆಯವರೆಗೂ ಕರೆತಂದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪೋಲಿಸ್ ಕ್ರಮ:
ದೂರು ದಾಖಲಿಸಿಕೊಂಡಿರುವ ಕೊತ್ವಾಲಿ ದೇಹತ್ ಪೊಲೀಸರು, ಪ್ರಧಾನ್ ಪತಿ ಇಮ್ರಾನ್ ಸೇರಿದಂತೆ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳಿಗಾಗಿ ತನಿಖೆ ಮುಂದುವರಿದಿದೆ.
ಸ್ಥಳೀಯ ಅಭಿವೃದ್ಧಿ ಹಾಗೂ ನಾಗರಿಕ ಸಮಸ್ಯೆಗಳನ್ನು ಪ್ರಶ್ನಿಸುವ ಡಿಜಿಟಲ್ ಪತ್ರಕರ್ತರು ಮತ್ತು ಕಂಟೆಂಟ್ ಕ್ರಿಯೇಟರ್ಗಳ ಭದ್ರತೆಯ ಕುರಿತು ಈ ಘಟನೆ ಹಲವು ಪ್ರಶ್ನೆಗಳನ್ನು ಎತ್ತಿದೆ.





Leave a comment