SUDDIKSHANA KANNADA NEWS/ DAVANAGERE/ DATE:09-08-2023
ದಾವಣಗೆರೆ: ಭದ್ರಾ ಅಚ್ಚುಕಟ್ಟುದಾರ ರೈತರಿಗೆ ಸಿಹಿ ಸುದ್ದಿ. ಆಗಸ್ಟ್ 10ರಿಂದ ಭದ್ರಾ ಡ್ಯಾಂ (Bhadra Dam)ನಿಂದ ನೀರು ಬಿಡುಗಡೆ ಮಾಡಲಾಗುವುದು. ಎಡದಂಡೆ ಹಾಗೂ ಬಲದಂಡೆ ನಾಲೆಗಳಿಗೆ ನೀರು ಹರಿಸಬೇಕೆಂಬ ರೈತರ ಒತ್ತಾಯಕ್ಕೆ ಕೊನೆಗೂ ಅಸ್ತು ಸಿಕ್ಕಿದೆ. ನೀರಾವರಿ ಇಲಾಖೆಯ ಅಧಿಕಾರಿಗಳು ಆಗಸ್ಟ್ 10ರಿಂದ ನಾಲೆಗಳಲ್ಲಿ ನೀರು ಹರಿಸುವುದಾಗಿ ಅಧಿಕೃತವಾಗಿ ಪ್ರಕಟಿಸಿದ್ದಾರೆ.

ಭದ್ರಾ ಜಲಾಶಯದ ಅಚ್ಚುಕಟ್ಟುದಾರರಿಗೆ ಮತ್ತು ಸಂಬಂಧಪಟ್ಟವರಿಗೆ ಈ ಮಾಹಿತಿ ನೀಡಿರುವ ನೀರಾವರಿ ಇಲಾಖೆಯು ಮುಂಗಾರು ಹಂಗಾಮಿನ ಬೆಳೆಗಳಿಗೆ ಭದ್ರಾ ಜಲಾಶಯದ ಎಡದಂಡೆ ಮತ್ತು ಬಲದಂಡೆ ನಾಲೆ ಆನವೇರಿ ಶಾಖಾನಾಲೆ, ದಾವಣಗೆರೆ ಶಾಖಾ ನಾಲೆ, ಮಲೇಬೆನ್ನೂರು ಶಾಖಾನಾಲೆ ಹರಿಹರ ಮತ್ತು ಗೋಂದಿ ನಾಲೆಗಳಿಗೆ ನೀರು ಹರಿಸಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎಷ್ಟು ದಿನಗಳ ಕಾಲ ನೀರು:
2023-24ನೇ ಸಾಲಿನ ಭದ್ರಾ ಯೋಜನೆಯ ಅಚ್ಚುಕಟ್ಟು ವ್ಯಾಪ್ತಿಯ ಮುಂಗಾರು ಬೆಳೆಗಳಿಗೆ ಸಹಜವಾಗಿ ಭದ್ರಾ ಎಡದಂಡೆ ನಾಲೆ ಮತ್ತು ಬಲದಂಡೆ ನಾಲೆಗಳಿಗೆ ಜಲಾಶಯದಿಂದ ಈ ಕೆಳಕಂಡ ವೇಳಾಪಟ್ಟಿಯ ಅನುಗುಣವಾಗಿ ನಾಲೆಗಳಲ್ಲಿ
ನೀರನ್ನು ಹರಿಸಲಾಗುವುದು. ಭದ್ರಾ ಎಡದಂಡೆ ನಾಲೆಗೆ ಆಗಸ್ಟ್ 10ರಿಂದ ನೂರು ದಿನಗಳ ಕಾಲ ಹಾಗೂ ಭದ್ರಾ ಬಲದಂಡೆ ನಾಲೆಯಲ್ಲಿ ಆಗಸ್ಟ್ 10ರಿಂದ ನೂರು ದಿನಗಳ ಕಾಲ ನೀರು ಹರಿಸಲಾಗುವುದು ಎಂದು ತಿಳಿಸಲಾಗಿದೆ.
ಭದ್ರಾ ಜಲಾಶಯದ ಮುಖ್ಯನಾಲೆ ಮತ್ತು ಶಾಖಾ ನಾಲೆಗಳಲ್ಲಿ ಮೇಲೆ ತಿಳಿಸಿದಂತೆ ನೀರನ್ನು ಹರಿಸಲಾಗುವುದು. ವಿತರಣಾ ನಾಲೆಗಳಲ್ಲಿ ಅನುಸರಿಸಬೇಕಾದ ಅಂತರಿಕ ಸರದಿಯನ್ನು ಕಾರ್ಯಪಾಲಕ ಇಂಜಿನಿಯರ್ ಅವರು ನಿರ್ಧರಿಸಲಿದ್ದಾರೆ.
ಕೊಟ್ಟಿರುವ ಎಚ್ಚರಿಕೆ ಏನು..?
ನೀರಾವರಿಯಾಗಲಿರುವ ಸವಿಸ್ತಾರ ರ ಸರ್ವೆ ನಂಬರುಗಳು ಹಾಗೂ ಬೆಳೆಯಬೇಕಾದ ಬೆಳೆಗಳ ವಿವರಗಳನ್ನು ಸಂಬಂಧಪಟ್ಟ ಕಾರ್ಯಪಾಲಕ ಇಂಜಿನಿಯರ್ರವರು ತಿಳಿಸುತ್ತಾರೆ. ಕರ್ನಾಟಕ ನೀರಾವರಿ ಕಾಯ್ದೆ 1965 ರ ಅನ್ವಯ ಬೆಳೆ ಮಾದರಿಯನ್ನು
ಉಲ್ಲಂಘಿಸುವವರು, ನೀರಾವರಿ ಕಾಲುವೆ ಹಾಗೂ ಕಟ್ಟಡಗಳನ್ನು ಜಖಂಗೊಳಿಸುವವರು, ನಿಗದಿತ ಪ್ರಮಾಣಕ್ಕಿಂತ ಹೆಚ್ಚು ನೀರು ಬಳಸುವವರು, ಅನಧಿಕೃತ ನೀರಾವರಿ ಬೆಳಗಾರರು ವಿವಿಧ ನಿಯಮಗಳ ಪ್ರಕಾರ ಕಾನೂನು ಕ್ರಮಕ್ಕೆ ಒಳಗಾಗುತ್ತಾರೆ ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ.
ಈ ಸುದ್ದಿಯನ್ನೂ ಓದಿ:
HARIHARA MLA B.P. HARISH ANGRY: ಬೆಸ್ಕಾಂ ಎಂಡಿ ಮಹಾಂತೇಶ್ ಬೀಳಗಿ ವಿರುದ್ಧ ಬೆಂಕಿಯುಗುಳಿದ ಬಿಜೆಪಿ ಶಾಸಕ ಬಿ. ಪಿ. ಹರೀಶ್…!
ಬೆಳೆ ನಷ್ಟವಾದರೆ ಜವಾಬ್ದಾರರಲ್ಲ:
ಹಾಲಿ ಜಲಾಶಯದಲ್ಲಿ ಇರುವ ನೀರಿನ ಪ್ರಮಾಣವನ್ನು ಗಣನೆಗೆ ತೆಗೆದುಕೊಂಡು ಅನುಸೂಚಿಯಲ್ಲಿ ನಮೂದಿಸಿದ ಕ್ಷೇತ್ರ ಹಾಗೂ ಬೆಳೆಗಳಿಗೆ ಮಾತ್ರ ನೀರು ಒದಗಿಸಲು ಉದ್ದೇಶಿಸಲಾಗಿರುತ್ತದೆ. ಪ್ರಕಟಿತ ಬೆಳೆಗಳನ್ನು ಬೆಳೆಯದೇ, ಬೇರೆ ಬೆಳೆಯನ್ನು ಬೆಳೆದು ಬೆಳೆ ಉಲ್ಲಂಘನೆ ಮಾಡಿ ನಷ್ಟ ಅನುಭವಿಸಿದಲ್ಲಿ ಇದಕ್ಕೆ ಸಂಬಂಧಪಟ್ಟ ರೈತರೇ ಹೊಣೆಗಾರರಾಗಿರುತ್ತಾರೆ. ಜಲಸಂಪನ್ಮೂಲ ಇಲಾಖೆಯು ಯಾವುದೇ ರೀತಿಯಲ್ಲಿ ಜವಾಬ್ದಾರಿಯಾಗುವುದಿಲ್ಲ ಎಂಬ ಸ್ಪಷ್ಟನೆಯನ್ನೂ ಕೊಡಲಾಗಿದೆ.
ರೈತ ಬಾಂಧವರು ನೀರಿನ ಸದ್ಬಳಕೆಗೆ ಸಹಕಾರ ನೀಡಬೇಕು. ಆದ್ದರಿಂದ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳಿಗೆ ದಿನಾಂಕ : 10.08.2023.ರಿಂದ ಎಡದಂಡ ನಾಲೆಯಲ್ಲಿ 380 ಹಾಗೂ ಬಲದಂಡೆ ನಾಲೆಯಲ್ಲಿ 2650 ಕ್ಯೂಸೆಕ್ಸ್ ಮುಂಗಾರು ಬೆಳೆಗಳಿಗೆ ಶಾಲೆಗಳಲ್ಲಿ 100 ದಿನಗಳ ಅವಧಿಗೆ ನೀರನ್ನು ಹರಿಸಲು ಕ್ರಮ ಕೈಗೊಳ್ಳಲಾಗಿದೆ.
ಕೊಟ್ಟಿರುವ ಸೂಚನೆಗಳೇನು…?
ಪ್ರಸಕ್ತ ಸಾಲಿನಲ್ಲಿ ಭದ್ರಾ ಜಲಾಶಯದ ನೀರಿನ ಸಂಗ್ರಹಣೆ ಹಾಗೂ ನೀರಿನ ಒಳಹರಿವನ್ನು ಆಧರಿಸಿ ನಾಲೆಗಳಲ್ಲಿ ನೀರನ್ನು ಹರಿಸಲಾಗುವುದು. ಕಾರ್ಯ ಪಾಲಕ ಇಂಜಿನಿಯರವರು ನಿರ್ಧರಿಸುವ ಆಂತರಿಕ ಸರದಿಯನ್ವಯ ಹರಿಸಲಾಗುವ ನೀರನ್ನು ಉಪಯೋಗಿಸಿಕೊಂಡು ಪ್ರಕಟಿತ ಆಚ್ಚುಕಟ್ಟು ಪ್ರದೇಶದಲ್ಲಿ ಬೆಳೆಯನ್ನು ಬೆಳೆಯಬೇಕು . ನೀರಿನ ಬಿಡುಗಡೆಯಿಂದ ಬೆಳೆ ನಷ್ಟವುಂಟಾದಲ್ಲಿ ಇಲಾಖೆಯು ಜವಾಬ್ದಾರಿಯಾಗುವುದಿಲ್ಲ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಭದ್ರಾ ಎಡದಂಡೆ ಹಾಗೂ ನಾಲೆಗಳಲ್ಲಿ ನೀರು ಹರಿಸುವ ತೀರ್ಮಾನ ಪ್ರಕಟಿಸಿರುವುದು ರೈತರಿಗೆ ಖುಷಿ ಕೊಟ್ಟಿದೆ.
ರೈತರ ಬೇಡಿಕೆ ಏನಾಗಿತ್ತು…?
ಆಗಸ್ಟ್ ಮೊದಲ ವಾರದಲ್ಲಿಯೇ ಮುಂಗಾರು ಹಂಗಾಮಿನ ಭತ್ತದ ನಾಟಿ ಮಾಡಬೇಕು. ತಡವಾದರೆ ಹೂವಾಡುವ ಹಂತದಲ್ಲಿ ಮೂಡು ಗಾಳಿಯಿಂದ ಬೆಳೆ ಶೀತಕ್ಕೆ ಸಿಲುಕಿ ಇಳುವರಿ ಕುಂಠಿತವಾಗುತ್ತದೆ ಎಂದು ಕೃಷಿ ಇಲಾಖೆ ಜಿಲ್ಲೆಯ ರೈತರಿಗೆ ಸಲಹೆ ನೀಡಿದೆ. ಆದರೆ ಆಗಸ್ಟ್ ಮೊದಲ ವಾರದ ಕೊನೆ ದಿನವಾದರೂ ಭದ್ರಾ ನೀರು ಹರಿಸುವ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಇದರಿಂದ ರೈತರು ಕಂಗಾಲಾಗಿದ್ದಾರೆ. ಆದ್ದರಿಂದ ತಕ್ಷಣವೇ ಇಂದಿನಿಂದ ನಾಲೆಗಳಿಗೆ ನೀರು ಹರಿಸಬೇಕು ಎಂದು ರೈತರು ಒತ್ತಾಯಿಸಿದ್ದರು.
ಭದ್ರಾ ಅಚ್ಚುಕಟ್ಟು ಪ್ರದೇಶದ ಬಹುತೇಕ ರೈತರು ಬೇರೆ ಮೂಲಗಳಿಂದ ನೀರು ಬಳಸಿ, ಸಸಿಮಡಿ ಸಿದ್ದಪಡಿಸಿಕೊಂಡು, ನಾಟಿ ಮಾಡುವ ಸಲುವಾಗಿ ನಾಲೆಗೆ ನೀರು ಹರಿಸುವುದನ್ನು ಕಾಯುತ್ತಿದ್ದಾರೆ. ಆದ್ದರಿಂದ ನೀರು ಹರಿಸಿ ರೈತರ ನೆರವಿಗೆ ಧಾವಿಸಬೇಕು ಎಂದು ಕಳೆದ 10 ದಿನಗಳಿಂದಲೂ ಬಿಜೆಪಿ ಮತ್ತು ರೈತರ ಸಂಘಟನೆಗಳು ಒತ್ತಾಯ ಮಾಡುತ್ತಿದ್ದರೂ ಜಿಲ್ಲಾಡಳಿತ ಕಣ್ಣು ಕಿವಿ ಇಲ್ಲವೆಂಬಂತೆ ದಿವ್ಯ ಮೌನ ವಹಿಸಿದೆ. ರೈತಪರ ಕಾಳಜಿ ಇಲ್ಲ. ಆಗಸ್ಟ್ ಮೊದಲ ವಾರದಲ್ಲಿ ನೀರು ಬಿಡುವುದಾಗಿ ಹೇಳಿಕೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನರವರು ಯಾವ ಕ್ರಮ ಕೈಗೊಳ್ಳದಿರುವುದು ರೈತರಿಗೆ ಬೇಸರ ತರಿಸಿದೆ ಎಂದು ರೈತರು ಹೇಳಿದ್ದರು.
ರೈತರು ತಲೆ ಮೇಲೆ ಕೈ ಹೊತ್ತು ಕುಳಿತು ಕೊಳ್ಳುವಂತೆ ಆಗಿದೆ. ಭದ್ರಾ ಡ್ಯಾಂನ ಇಂದಿನ ನೀರಿನ ಮಟ್ಟ 165 ಅಡಿ ದಾಟಿದ್ದರೂ, ನೀರು ಬಿಡುಗಡೆ ಮಾಡಿಲ್ಲ. ಸುಮಾರು 47 ಟಿಎಂಸಿಯಷ್ಟು ನೀರಿನ ಸಂಗ್ರಹವಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಮಳೆ ಬರುವ ಸಾಧ್ಯತೆ ಇದೆ. ಆದ್ದರಿಂದ ಇಂದಿನಿಂದಲೇ ತಕ್ಷಣವೇ ನೀರು ಬಿಡುವ ನಿರ್ಧಾರ ಮಾಡಬೇಕು ಎಂದು ರೈತರು ಆಗ್ರಹಿಸಿದ್ದರು.