SUDDIKSHANA KANNADA NEWS/ DAVANAGERE/ DATE:11-10-2023
ದಾವಣಗೆರೆ: ಭದ್ರಾ ಜಲಾಶಯ (Bhadra Dam)ದಿಂದ ಬಲದಂಡೆ ನಾಲೆಯಲ್ಲಿ ನೀರು ಹರಿಸುವ ಸಂಬಂಧ ಆನ್ ಅಂಡ್ ಆಫ್ ಪದ್ಧತಿ ಕೈಬಿಟ್ಟು ನಿರಂತರವಾಗಿ ನೀರು ಹರಿಸಬೇಕೆಂಬ ಆಗ್ರಹ ಹೆಚ್ಚಾಗುತ್ತಿದೆ. ಈಗಾಗಲೇ ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ಬೆಳೆದಿದ್ದು, ನೀರು ಹರಿಸಬೇಕು ಎಂದು ಒತ್ತಾಯ ಕೇಳಿ ಬಂದಿದೆ. ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರನ್ನು ಭೇಟಿಯಾಗಿ 2ನೇ ಅವಧಿಗೆ ನೀರು ನಿಲುಗಡೆ ಮಾಡದಂತೆ ಹರಿಹರ ತಾಲೂಕಿನ ಮಲೇಬೆನ್ನೂರು ಭಾಗದ ರೈತರು ಮನವಿ ಮಾಡಿದ್ದಾರೆ.
READ ALSO THIS STORY:
ದೇಶದಲ್ಲಿ ಎಷ್ಟು ಲಕ್ಷ ಹೆಕ್ಟೇರ್ ನಲ್ಲಿ ಅಡಿಕೆ (Areca nut) ಬೆಳೆಯಲಾಗುತ್ತೆ…? ಧಾರಣೆ ಕುಸಿಯುತ್ತಿರುವ ಈ ಹೊತ್ತಲ್ಲಿ ಅಡಿಕೆ ಸಿಪ್ಪೆ, ಹಾಳೆ ಬಳಸಿ ಕೈ ತುಂಬಾ ಹಣ ಮಾಡಬಹುದು… ಹೇಗೆ ಅಂತೀರಾ…?
ಆಗಸ್ಟ್ 10ರಿಂದ ಭದ್ರಾ ಬಲದಂಡೆ ನಾಲೆಯಲ್ಲಿ ನೀರು ಹರಿಸಿದ ಪರಿಣಾಮ ಭತ್ತ ಬೆಳೆಯಲಾಗಿದೆ. ಇದೇ ನೀರು ಅವಲಂಬಿಸಿದ್ದೇವೆ. ಆದ್ರೆ, ಈಗ ಆನ್ ಅಂಡ್ ಆಫ್ ಪದ್ಧತಿಯಡಿ ನೀರು ನಿಲುಗಡೆ ಮಾಡಿದರೆ ಬೆಳೆದಿರುವ ಭತ್ತ
ಹಾಳಾಗಲಿದೆ. ಇದರಿಂದ ರೈತರು ಸುಮಾರು 30 ಸಾವಿರ ರೂಪಾಯಿಯಿಂದ 40 ಸಾವಿರ ರೂಪಾಯಿ ಪ್ರತಿ ಎಕರೆಗೆ ನಷ್ಟ ಅನುಭವಿಸಬೇಕಾಗುತ್ತದೆ. ಈ ಕಾರಣಕ್ಕೆ ಯಾವುದೇ ಕಾರಣಕ್ಕೂ ನೀರು ನಿಲುಗಡೆ ಮಾಡದಂತೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ್ ಅವರ ಮೇಲೆ ಒತ್ತಡ ಹೇರಬೇಕು. ನೀರು ಹರಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಎಂದು ಸಚಿವರಲ್ಲಿ ಮನವಿ ಮಾಡಿದರು.
ಕಾಡಾ ಇತಿಹಾಸದಲ್ಲಿ ಒಮ್ಮೆ ನಿರ್ಧಾರವಾದರೆ ಮತ್ತೆ ಬದಲಿಸಿದ ಉದಾಹರಣೆ ಕಡಿಮೆ. ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಸಹ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರ ಬದಲಿಸುವುದು ಕಷ್ಟ ಎಂಬ ಮಾತು ಹೇಳಿದ್ದಾರೆ ಎಂದು ತಿಳಿಸುವ ಮೂಲಕ ಎಸ್. ಎಸ್. ಮಲ್ಲಿಕಾರ್ಜುನ್ ರೈತರ ಮುಂದೆ ಅಸಹಾಯಕತೆ ವ್ಯಕ್ತಪಡಿಸಿದರು.
ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ಭತ್ತ ಕಾಳು ಕಟ್ಟುವ ಸಮಯ. ಈಗ ನೀರಿನ ಅವಶ್ಯತೆ ಇದೆ. ಈ ವೇಳೆ ನೀರು ಬಾರದಿದ್ದರೆ ಭತ್ತ ಒಣಗಿ ಹೋಗುತ್ತದೆ. ಒಂದೆಡೆ ಮಳೆಯೂ ಇಲ್ಲ, ಮತ್ತೊಂದೆಡೆ ಭದ್ರಾ ಡ್ಯಾಂನಿಂದ ನೀರು ಬಾರದಿದ್ದರೂ ನಷ್ಟ ಗ್ಯಾರಂಟಿ. ಮತ್ತೆ ಹತ್ತು ದಿನಗಳ ಕಾಲ ನೀರು ಸ್ಥಗಿತಗೊಳಿಸಿದರೆ ಸಮಸ್ಯೆ ಹೆಚ್ಚಾಗುತ್ತದೆ. ಸರ್ಕಾರವು ಪರಿಹಾರವನ್ನೂ ಕೊಡಲ್ಲ. ಬೆಳೆದ ಬೆಳೆಯೂ ಕೈಗೆ ಸಿಗುವುದಿಲ್ಲ. ಮತ್ತೊಂದೆಡೆ ಭತ್ತ ಸಂಪೂರ್ಣ ಹಾಳಾಗುತ್ತದೆ. ಸಾಲ ಸೋಲ ಮಾಡಿ ಬೆಳೆ ಬೆಳೆದಿರುವ ರೈತರು ಮತ್ತೆ ಸಾಲ ಮಾಡಬೇಕಾಗುತ್ತದೆ. ಹಾಗಾಗಿ, ಆನ್ ಅಂಡ್ ಆಫ್ ಪದ್ದತಿ ಕೈ ಬಿಟ್ಟು ನಿರಂತರವಾಗಿ ನೀರು ಹರಿಸಬೇಕು. ನೀವು ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಸಿ ನೀರು ಹರಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ರೈತರು ಒತ್ತಾಯಿಸಿದರು.
ತುಂಬಾ ಕಷ್ಟಸಾಧ್ಯವಾದರೆ ಕಡಿಮೆ ಪ್ರಮಾಣದಲ್ಲಿ ಆದರೂ ನೀರು ಹರಿಸಲು ಕ್ರಮ ತೆಗೆದುಕೊಳ್ಳಲು ಹೇಳಿ. ನಾವು ಸಹ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಲು ಬರುತ್ತೇವೆ. ರೈತರೊಟ್ಟಿಗೆ ನಿಯೋಗ ತೆರಳಿ ಒತ್ತಾಯ ಮಾಡೋಣ ಎಂದು ಭದ್ರಾ ಜಲಾಶಯ ಯೋಜನೆ ವ್ಯಾಪ್ತಿಯ ನೀರು ಬಳಕೆದಾರರ ಮಹಾಮಂಡಳದ ಅಧ್ಯಕ್ಷ ಸಿರಿಗೆರೆ ರಾಜಣ್ಣ ಹೇಳಿದರು. ಈ ವಿಚಾರಕ್ಕೆ ಎಲ್ಲಾ ರೈತರು ದನಿಗೂಡಿಸಿದರು. ರೈತ ಮುಖಂಡರಾದ ಕರಿಬಸಪ್ಪ, ಭುವನ್, ಜಿಗಳಿ ಆನಂದಪ್ಪ, ಮುದೇಗೌಡ್ರ ತಿಪ್ಪೇಶ್, ರಮೇಶ್, ಕುಮಾರ್ ಮತ್ತಿತರರು ಹಾಜರಿದ್ದರು.