SUDDIKSHANA KANNADA NEWS/ DAVANAGERE/ DATE:18-04-2023
ದಾವಣಗೆರೆ (DAVANAGERE): ಮಾಯಕೊಂಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಬಸವರಾಜ್ ನಾಯ್ಕ್ ನಾಮಪತ್ರ ಸಲ್ಲಿಸಿದರು. ನಗರದ ಗಾಂಧಿ ವೃತ್ತದಿಂದ ತೆರೆದ ವಾಹನದಲ್ಲಿ ಸಹಸ್ರಾರು ಕಾರ್ಯಕರ್ತರ ಜೊತೆ ಮೆರವಣಿಗೆಯಲ್ಲಿ ಆಗಮಿಸಿದ ಬಸವರಾಜ್ ನಾಯ್ಕ್ ( BASAVARAJA NAIK)ಅವರಿಗೆ ಸಂಸದ ಜಿ. ಎಂ. ಸಿದ್ದೇಶ್ವರ, ಶಾಸಕ ಪ್ರೊ. ಎನ್. ಲಿಂಗಣ್ಣ ಸೇರಿದಂತೆ ನಾಯಕರು ಸಾಥ್ ನೀಡಿದರು.
ತಹಶೀಲ್ದಾರ್ ಕಚೇರಿಯಲ್ಲಿ ಸಂಸದರ ಜೊತೆ ತೆರಳಿ ನಾಮಪತ್ರ ಸಲ್ಲಿಸಿದ ಬಸವರಾಜ್ ನಾಯ್ಕ್ ಅವರಿಗೆ ಸಾವಿರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮೂಲಕ ಗೆಲುವಿಗೆ ಹಾರೈಸಿದರು. ಇದಕ್ಕೂ ಮುನ್ನ ಮಾಧ್ಯಮದವರ
ಜೊತೆ ಮಾತನಾಡಿದ ಬಸವರಾಜ್ ನಾಯ್ಕ್, ಮೆರವಣಿಗೆಯಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಜನರು ಆಗಮಿಸಿದ್ದು ಖುಷಿ ತಂದಿದೆ. ನಾನೆಷ್ಟು ಅದೃಷ್ಟಶಾಲಿ ಎಂಬುದು ಇದರಿಂದ ಗೊತ್ತಾಗಿದೆ. ಮಾಯಕೊಂಡ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ (BJP)
ಪಕ್ಷವೇ ಗೆಲ್ಲುತ್ತದೆ. ಪಕ್ಷದಲ್ಲಿ ಉತ್ತಮ ಕೆಲಸ ಮಾಡಿರುವುದರಿಂದ ರಾಜ್ಯ ನಾಯಕರು, ರಾಷ್ಟ್ರ ನಾಯಕರು ಗುರುತಿಸಿ ಟಿಕೆಟ್ ನೀಡಿದ್ದಾರೆ ಎಂದು ಹೇಳಿದರು.
ಜಿ. ಎಂ. ಸಿದ್ದೇಶ್ವರ, ಶಾಸಕ ಎಸ್. ಎ. ರವೀಂದ್ರನಾಥ್, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಶಿವಯೋಗಿಸ್ವಾಮಿ, ಮಂಡಲದ ಅಧ್ಯಕ್ಷ ದೇವೇಂದ್ರಪ್ಪ ಸೇರಿದಂತೆ ಎಲ್ಲಾ ಸ್ಟಾರ್ ನಾಯಕರು ಬೆಂಬಲವಾಗಿ ನಿಂತಿದ್ದಾರೆ. ಯಾವುದೇ ಕಾರಣಕ್ಕೂ ಬಿಜೆಪಿಗೆ ಹಿನ್ನೆಡೆ ಆಗುವುದಿಲ್ಲ. ಐದು ಬಾರಿ ಬಿಜೆಪಿ ಪಕ್ಷವು ಮಾಯಕೊಂಡದಲ್ಲಿ ಜಯ ಗಳಿಸಿದೆ. ಆರನೇ ಬಾರಿಯೂ ಕಮಲ ಅರಳುವಂತೆ ಮಾಡಲು ಕಾರ್ಯಕರ್ತರು ಸನ್ನದ್ಧರಾಗಿದ್ದಾರೆ ಎಂದು ತಿಳಿಸಿದರು.
ಯಾವುದೇ ಹಳ್ಳಿ, ಕೇರಿಗಳಿಗೂ ಹೋದರೂ ಬಿಜೆಪಿ ಪರ ಅಲೆ ಇದೆ. 11 ಜನರ ಪೈಕಿ ನಾಲ್ವರ ಜೊತೆ ಮಾತನಾಡಿದ್ದೇನೆ, ನಿನ್ನೆ ಮತ್ತು ಇಂದು ಬೆಳಿಗ್ಗೆಯೂ ಸಹ ಮಾತುಕತೆ ನಡೆಸಿದ್ದೇನೆ. ಸಹಜವಾಗಿಯೇ ಟಿಕೆಟ್ ಕೈತಪ್ಪಿದ್ದರಿಂದ ಸಿಟ್ಟು ಬರುತ್ತದೆ. ನಾವೆಲ್ಲರೂ ಸಹೋದರರಂತೆ. ಇನ್ನೆರಡು ದಿನಗಳಲ್ಲಿ ಎಲ್ಲವೂ ಸರಿಹೋಗಲಿದೆ. ನಾಮಪತ್ರ ಸಲ್ಲಿಕೆ ಮಾಡಬಹುದು. ವಾಪಸ್ ತೆಗೆದುಕೊಳ್ಳಲು ಸಮಯಾವಕಾಶ ಇದೆ. ಮನವೊಲಿಸುವ ಕಾರ್ಯ ನಡೆಯುತ್ತಿದೆ. ಯಾವುದೇ ರೀತಿಯಿಂದಲೂ ಬಿಜೆಪಿ ಕಾರ್ಯಕರ್ತರು ದಿನದ 24 ಗಂಟೆಯೂ ಕೆಲಸ ಮಾಡುತ್ತಿದ್ದಾರೆ. ಬಂಡಾಯದವರಿಗೆ ಮಣೆ ಹಾಕುವುದಿಲ್ಲ. ನನ್ನ ಮೇಲೆ ಯಾವುದೇ ಆರೋಪ ಮಾಡಿದರೂ ಮನವೊಲಿಸುವ ಪ್ರಯತ್ನ ನಡೆಸುತ್ತೇನೆ. ಬೇರೆ ಯಾವುದೇ ವಿಚಾರವಾದರೂ ಬಹಿರಂಗ ಚರ್ಚೆಗೂ ಸಿದ್ಧನಿದ್ದೇನೆ ಎಂದು ಸವಾಲು ಹಾಕಿದರು.
ಯಾರಿಗೋ ಟಿಕೆಟ್ ಸಿಕ್ಕಿಲ್ಲ ಎಂದು ನನ್ನ ಮೇಲೆ ಆರೋಪ ಮಾಡಿದರೆ ಹೇಗೆ? ಬಿಜೆಪಿಯ ಮಾನದಂಡದಲ್ಲಿ ಪಾಸ್ ಆದವರಿಗೆ ಟಿಕೆಟ್ ನೀಡಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೇರೆ ಪಕ್ಷಕ್ಕೆ ಹೋಗಿದ್ದಾಗಿ ಹೇಳಿರಬಹುದು. ಅದೇ ಬೇರೆ ವಿಚಾರ. ಈಗಿನ ಮಾನದಂಡದ ವಿಚಾರವೇ ಬೇರೆ. ಬೇರೆ ಪಕ್ಷದಿಂದ ಸ್ಪರ್ಧಿಸಿದ್ದರೂ ಮತ್ತೆ ಬಿಜೆಪಿಗೆ ವಾಪಸ್ ಕರೆ ತಂದು ಸ್ಥಾನಮಾನ ಕೊಡಲಾಗಿದೆ. ರಾಜ್ಯ ಉಪಾಧ್ಯಕ್ಷ, ರಾಜ್ಯ ಕೋರ್ ಕಮಿಟಿ ಹಾಗೂ ಜಿಲ್ಲಾ ಕೋರ್ ಕಮಿಟಿಯಲ್ಲಿ ಸ್ಥಾನ ನೀಡಲಾಗಿತ್ತು. ರಾಜ್ಯದಲ್ಲಿ ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷರನ್ನಾಗಿ ಮಾಡಿ ಮತ್ತೆ ಟಿಕೆಟ್ ನೀಡಿದೆ. ಈ ಚುನಾವಣೆಯಲ್ಲಿ ಗೆಲ್ಲುತ್ತೇನೆ ಎಂಬ ವಿಶ್ವಾಸ ಇದೆ ಎಂದರು.
ಸಂಸದ ಜಿ. ಎಂ. ಸಿದ್ದೇಶ್ವರ ಮಾತನಾಡಿ, ಮಾಯಕೊಂಡ ವಿಶಿಷ್ಟ ಕ್ಷೇತ್ರ. ಈ ಹಿಂದೆ ಶಾಸಕರಾಗಿ ಬಸವರಾಜ್ ನಾಯ್ಕ್ ಉತ್ತಮ ಕೆಲಸ ಮಾಡಿದ್ದಾರೆ. ಈ ಬಾರಿ ಪಕ್ಷವು ಟಿಕೆಟ್ ಕೊಟ್ಟಿದೆ. ಎಲ್ಲರೂ ಕಮಲ ಅರಳುವಂತೆ ಮಾಡಿ. ಮಾಯಕೊಂಡ ಕ್ಷೇತ್ರದಲ್ಲಿ ಬಿಜೆಪಿ ಪರವಾದ ಅಲೆ ಇದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದ ಡಂಬಲ್ ಎಂಜಿನ್ ಸರ್ಕಾರದ ಸಾಧನೆ ಮನೆ ಮನೆ ತಲುಪಿದರೆ ಗೆಲುವಿಗೆ ಕಷ್ಟವಾಗದು ಎಂದು ಅಭಿಪ್ರಾಯಪಟ್ಟರು.
ಈ ವೇಳೆ ಶಾಸಕ ಪ್ರೊ. ಎನ್. ಲಿಂಗಣ್ಣ, ಮಾಯಕೊಂಡ ಬಿಜೆಪಿ ಮಂಡಲ ಅಧ್ಯಕ್ಷ ದೇವೇಂದ್ರಪ್ಪ ಮತ್ತಿತರರು ಹಾಜರಿದ್ದರು.