SUDDIKSHANA KANNADA NEWS/ DAVANAGERE/ DATE-06-06-2025
ದಾವಣಗೆರೆ: ದಾವಣಗೆರೆ ಜಿಲ್ಲೆಯಾದ್ಯಾಂತ ಜೂ. 7ರಂದು ಬಕ್ರೀದ್ ಹಬ್ಬದ ಸಂಭ್ರಮ. ಮುಸ್ಲೀಂ ಬಾಂಧವರು ಹಬ್ಬವನ್ನು ಆಚರಿಸುತ್ತಿದ್ದು, ಜಿಲ್ಲೆಯಲ್ಲಿ ಶಾಂತಿ ಮತ್ತು ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸುವ ನಿಟ್ಟಿನಲ್ಲಿ ಈಗಾಗಲೇ ಪೊಲೀಸ ಠಾಣಾ ಮಟ್ಟದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ವಿವಿಧ ಕೋಮಿನ ಮುಖಂಡರುಗಳ ಜೊತೆಯಲ್ಲಿ ನಾಗರೀಕ ಸೌಹಾರ್ದ ಸಭೆಗಳನ್ನು ನಡೆಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಂತೆ ಎಸ್ಪಿ ಉಮಾ ಪ್ರಶಾಂತ್ ಸೂಚನೆ ಮತ್ತು ಎಚ್ಚರಿಕೆ ನೀಡಿದ್ದಾರೆ.
ಶಾಂತ ಸೌಹಾರ್ಧಯುತವಾಗಿ ಹಬ್ಬವನ್ನು ಆಚರಿಸುವಂತೆ ತಿಳಿಸಲಾಗಿರುತ್ತದೆ. ಆದಾಗ್ಯೂ ಜಿಲ್ಲೆಯ ಸಾರ್ವಜನಿಕರು ವಿಶೇಷವಾಗಿ ಮುಸ್ಲೀಂ ಬಾಂಧವರು ಬಕ್ರೀದ್ ಹಬ್ಬದ ಸಂಬಂಧ ಮಾಡಬೇಕಾದ ಕಾರ್ಯಗಳ ಕುರಿತಂತೆ ಕಡ್ಡಾಯವಾಗಿ ಈ ನಿಯಮಗಳನ್ನು ಪಾಲಿಸವಂತೆ ಜಿಲ್ಲಾ ಪೊಲೀಸ್ ವತಿಯಿಂದ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಾದ್ಯಾಂತ ಕೋಮು ಸಾಮರಸ್ಯದಿಂದ ಶಾಂತಯುತವಾಗಿ ಸಂಭ್ರಮದಿಂದ ಹಬ್ಬವನ್ನು ಆಚರಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವಂತಹ ಪ್ರಚೋದನಕಾರಿ ಪೋಸ್ಟರ್ ಗಳು, ಸುಳ್ಳು ಸುದಿಗಳು, ಪ್ರಚೋದನಕಾರಿ ಸಂಧೇಶಗಳು ಹಾಗೂ ಯಾವುದೇ ಧರ್ಮದ ವಿರುದ್ದ, ವ್ಯಕ್ತಿಯ ವಿರುದ್ದ ಅವಹೇಳನಕಾರಿ ಪೋಸ್ಟರ್, ಸಂದೇಶಗಳು ಕಂಡು ಬಂದಲ್ಲಿ ಮತ್ತೊಬ್ಬರಿಗೆ ರವಾನಿಸದೇ ಕೂಡಲೇ ಸ್ಥಳೀಯ ಪೊಲೀಸ್ ಅಧಿಕಾರಿ-ಸಿಬ್ಬಂದಿಗಳಿಗೆ ಮಾಹಿತಿ ನೀಡುವುದು ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ಸಾಮಾಜಿಕ ಜಾಲತಾಣ ನಿಗಾ ಘಟಕದ ಸಂಖ್ಯೆ -9480803208 ಗೆ ಮಾಹಿತಿ ನೀಡಬೇಕು.
ಬಕ್ರೀದ್ ಹಬ್ಬದ ಸಮಯದಲ್ಲಿ ಧ್ವನಿವರ್ಧಕ ಅಳವಡಿಕೆಗೆ ನಿಯಮವನ್ನು ಮತ್ತು ಅನುಮತಿಯನ್ನು ಸಂಬಂಧಪಟ್ಟ ಆಯೋಜಕರು ಕಟ್ಟುನಿಟ್ಟಾಗಿ ಪಾಲಿಸಬೇಕು. ಬಕ್ರೀದ್ ಹಬ್ಬದ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ಕಂಡು ಬಂದಲ್ಲಿ / ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬಂದಲ್ಲಿ ಕೂಡಲೇ ತುರ್ತು ಸಹಾಯವಾಣಿ 112 ಕ್ಕೆ ಕರೆ ಮಾಡುವುದು ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿ / ಸಿಬ್ಬಂದಿಗಳಿಗೆ ಮಾಹಿತಿ ನೀಡಿ.
ಹಬ್ಬದ ಆಚರಣೆ ಸಮಯದಲ್ಲಿ ಎಲ್ಲಾ ಸಾರ್ವಜನಿಕರು ಸಂಚಾರ ನಿಯಮಗಳನ್ನು ಪಾಲಿಸಬೇಕು, ನಿಗಧಿತ ಸ್ಥಳಗಳಲ್ಲಿ ವಾಹನಗಳ ಪಾರ್ಕಿಂಗ್ ಮಾಡಬೇಕು. ಕಾನೂನು ಬಾಹಿರವಾಗಿ ಪ್ರಾಣಿಗಳ ವಧೆ ಹಾಗೂ ಗೋ ಸಾಗಾಟ ಮಾಡಬಾರದು ಹಾಗೂ ಯಾವುದೇ ವ್ಯಕ್ತಿಗಳು, ಸಂಘಟನೆಯ ಅಡಿಯಲ್ಲಿ ನೈತಿಕ ಪೊಲೀಸ್ ಗಿರಿ ಮಾಡಬಾರದು ಅಂತದೇನಾದರೂ ಕಂಡುಬಂದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವಂತಹ ಪ್ರಚೋಧನಕಾರಿ ಪೋಸ್ಟರ್ ಗಳನ್ನು ಹಾಕುವುದಾಗಲೀ, ಸುಳ್ಳುಸುದ್ದಿ-ಪ್ರಚೋದನಕಾರಿ ಸಂದೇಶಗಳನ್ನು ಹರಿಬಿಡುವುದಾಗಲಿ ಹಾಗೂ ಯಾವುದೇ ಧರ್ಮದ ವಿರುದ್ದ, ವ್ಯಕ್ತಿಯ ವಿರುದ್ದ ಅವಹೇಳನಕಾರಿ ಪೋಸ್ಟರ್, ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದು, ರವಾನಿಸುವವರ ಮೇಲೆ ಪೊಲೀಸ್ ನಿಗಾವಹಿಸುತ್ತಿದೆ. ಅಂತಹ ಪೋಸ್ಟ್ ಗಳು ಕಂಡು ಬಂದಲ್ಲಿ ಅಂತವರ ವಿರುದ್ಧ ಪ್ರಕರಣ ದಾಖಲಿಸಿ ಕಟ್ಟುನಿಟ್ಟಿನ ಕಾನೂನು ಕ್ರಮ ವಹಿಸಲಾಗುವುದು.
ದ್ವಿಚಕ್ರ ವಾಹನಗಳಲ್ಲಿ 3 ಜನರು ಸೇರಿ ಸವಾರಿ ಮಾಡಿಕೊಂಡು ಚಲಿಸುವುದಾಗಲೀ, ಬೈಕ್ ವೀಲಿಂಗ್ ಮಾಡುವುದಾಗಲೀ, ವಾಹನದ ಸೈಲೆನ್ಸರ್ ಗಳನ್ನು ತೆಗೆದು ಕರ್ಕಶವಾದ ಶಬ್ದವನ್ನು ಉಂಟುಮಾಡುವ ಸೈಲೆನ್ಸರ್ ಗಳನ್ನು ಉಪಯೋಗಿಸುವುದು ಕಂಡುಬಂದಲ್ಲಿ ವಾಹನಗಳನ್ನು ಸ್ವಾಧೀನಪಡಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗುವುದು.
ಬಕ್ರೀದ್ ಹಬ್ಬದ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ಕಂಡು ಬಂದಲ್ಲಿ, ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬಂದಲ್ಲಿ ಕಾನೂನು ಕೈಗೆತ್ತಿಕೊಳ್ಳಬಾರದು, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಕಿಡಿಗೇಡಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು.
ಪ್ರಾರ್ಥನೆಗೆ ಹೋಗುವ ಮುಸ್ಲೀಂ ಬಾಂಧವರು ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯಾಗದಂತೆ ಎಚ್ಚರವಹಿಸಬೇಕು ಹಾಗೂ ಅನ್ಯಕೋಮಿನ ಭಾವನೆಗಳಿಗೆ ಧಕ್ಕೆಯಾಗುವ ರೀತಿಯಲ್ಲಿ ಯಾವುದೇ ಕೋಮಿನ ಬಾಂಧವರು ನಡೆದುಕೊಳ್ಳಬಾರದು.
ಹಬ್ಬದ ಸಮಯದಲ್ಲಿ ಅಕ್ರಮ ಮದ್ಯ ಮಾರಾಟ, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಕಂಡು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ರೌಡಿ ಮತೀಯ ಗೂಂಡ ಮತ್ತು ಎಂ.ಓ.ಬಿಗಳು ಹಬ್ಬದ ಸಮಯದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಲು ಪ್ರಯತ್ನಿಸಿದ್ದಲ್ಲಿ ಕಟ್ಟುನಿಟ್ಟಿನ ಕಾನೂನು ಕ್ರಮ ವಹಿಸಲಾಗುವುದು. ಹಬ್ಬದ ಸಮಯದಲ್ಲಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಚೂಡಾಯಿಸುವುದು ಮತ್ತು ಮದ್ಯ ಸೇವನೆ ಮಾಡಿ ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸುವುದು ಕಂಡು ಬಂದಲ್ಲಿ ಅಂತವರ ವಿರುದ್ಧ ಕಟ್ಟು ನಿಟ್ಟಿನ ಕಾನೂನು ಕ್ರಮ ವಹಿಸಲಾಗುವುದು.
ಹಬ್ಬದ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಇತರೆ ಜಾಲತಾಣಗಳ ಮೂಲಕ ವಿಶೇಷ ಕೊಡುಗೆಗಳ ಆಮೀಷ ತೋರಿಸಿ ವಂಚನೆ ಮಾಡು ಸಾಧ್ಯತೆ ಇರುತ್ತದೆ ಸಾರ್ವಜನಿಕರು ಇಂತಹ ಆಮೀಷಗಳಿಗೆ ಮೋಸ ಹೋಗದೇ ಎಚ್ಚರ ವಹಿಸಬೇಕು.
ಪೊಲೀಸ್ ಬಂದೋಬಸ್ತ್:
ಬಕ್ರೀದ್ ಹಬ್ಬದ ಸಂಬಂಧ ಜಿಲ್ಲಾ ಪೊಲೀಸ್ ವತಿಯಿಂದ ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿ – ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, 3 ಕೆ ಎಸ್ ಆರ್ ಪಿ ತುಕಡಿಗಳು, 8 ಜಿಲ್ಲಾ ಸಶಸ್ತ್ರ್ ಮೀಸಲು ಪಡೆ ಹಾಗೂ ವಿಶೇಷ ಗಸ್ತುವಾಹನಗಳನ್ನು ಹಾಗೂ ದುರ್ಗಾಪಡೆ, ಕ್ಯೂ.ಆರ್.ಟಿ ತಂಡಗಳನ್ನು ನಿಯೋಜಿಸಲಾಗಿದೆ ಮತ್ತು ಜಿಲ್ಲೆಯಲ್ಲಿ ಅಕ್ರಮ ಜಾನುವಾರು ಸಾಗಾಟ ತಡೆಗೆ ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿರುತ್ತದೆ. ಪ್ರಮುಖ ಸೂಕ್ಷ್ಮ ಸ್ಥಳಗಳಲ್ಲಿ ನಿಗಾವಣೆಗೆ ಸಿಸಿಟಿವಿ ಕ್ಯಾಮೇರಾಗಳನ್ನು ಸಹ ಅಳವಡಿಸಲಾಗಿದೆ. ನಗರದಾದ್ಯಂತ ಡ್ರೋನ್ ಕಣ್ಗಾವಲು ಇರಿಸಲಾಗಿದೆ.
ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ಮುಂಜಾಗ್ರತೆ ಕೈಗೊಂಡು ಸೂಕ್ತ ನಿಗಾವಹಿಸಲಾಗಿದೆ ಎಂದು ಎಸ್ಪಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.