ಬೆಂಗಳೂರು: ರೈತರ ನೋವನ್ನು ಸರ್ಕಾರ ಹಾಗೂ ಅಧಿಕಾರಿಗಳು ಸೇರಿ ದೂರ ಮಾಡಬೇಕು. ಬರ ಪರಿಸ್ಥಿತಿ ಬಾಗಲಕೋಟೆ ಜಿಲ್ಲೆಯ ಸಾಕಷ್ಟು ಕಡೆ ಆವರಿಸಿದೆ. ಗದಗ ಜಿಲ್ಲೆಯ 1 ತಾಲೂಕನ್ನು ಮಾತ್ರ ಬರಪೀಡಿತ ಎಂದು ಘೋಷಿಸಲಾಗಿದೆ. ಗದಗ ಜಿಲ್ಲೆಯ 6 ತಾಲೂಕುಗಳ ಪರಿಸ್ಥಿತಿ ಬಾಗಲಕೋಟೆಗಿಂತ ಭೀಕರವಾಗಿದೆ. ಇಲ್ಲಿ ಅರ್ಧ ಭಾಗ ಹಸಿರಾಗಿದ್ದರೆ, ಇನ್ನರ್ಧ ಭಾಗದಲ್ಲಿ ಹಸಿರಿಲ್ಲ. ರೈತರ ನೋವು ನಿವಾರಣೆಗೆ ಸರ್ಕಾರ ಮತ್ತು ಅಧಿಕಾರಿಗಳು ಒಗ್ಗಟ್ಟಾಗಿ ಕೆಲಸ ಮಾಡಬೇಕು. ಬರದ ನೈಜ ಪರಿಸ್ಥಿತಿಯನ್ನು ಕೇಂದ್ರ ಅಧ್ಯಯನ ತಂಡಕ್ಕೆ ಮನವರಿಕೆ ಮಾಡಿಕೊಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.
ಬಾಗಲಕೋಟೆ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ಬರ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಸಭೆಯಲ್ಲಿ ಹೇಳಿದ್ದೇನು?
ರೈತರಿಗೆ ಪರಿಹಾರವನ್ನು ಹೇಗೆ ನೀಡಬೇಕೆಂದು ಎಲ್ಲರೂ ಸೇರಿ ಸಮಾಲೋಚಿಸಬೇಕು. ಬಾಗಲಕೋಟೆ ಜಿಲ್ಲೆಯಲ್ಲಿ 40% ಮಳೆ ಕೊರತೆಯಾಗಿದೆ. ದೇಶದಲ್ಲಿ 50 ವರ್ಷಗಳಲ್ಲೇ ಭೀಕರ ಬರ ಪರಿಸ್ಥಿತಿ ಎದುರಾಗಿದೆ. ಜೊತೆಗೆ, ಬರದ ಮುನ್ಸೂಚನೆ ಕುರಿತು ಪ್ರಧಾನಮಂತ್ರಿಗಳೂ ಸಹ ಗಮನ ಸೆಳೆದಿದ್ದರು.
ಅಧಿಕಾರಿಗಳು ಕುಡಿಯುವ ನೀರಿಗೆ ಆದ್ಯತೆ ನೀಡಬೇಕು. ಕುಡಿಯುವ ನೀರಿಗಾಗಿ ಪ್ರತಿ ಕ್ಷೇತ್ರಕ್ಕೆ 1 ಕೋಟಿ ರೂ. ನೀಡಲಾಗಿದೆ. ಜಿಲ್ಲಾಧಿಕಾರಿಗಳು ಪಿಡಿ ಖಾತೆಯಲ್ಲಿರುವ ಹಣವನ್ನು ಸರಿಯಾಗಿ ಬಳಸಿಕೊಳ್ಳಬೇಕು. ಜಿಲ್ಲಾಧಿಕಾರಿಗಳು, ಸಿಇಒ ಹಾಗೂ ಅಧಿಕಾರಿಗಳು ಕ್ಷೇತ್ರ ವೀಕ್ಷಣೆ ಮಾಡಬೇಕು.
ಮೇವು ಕಿಟ್ಗಳನ್ನು ನೀಡಬೇಕು. ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಅಧಿಕಾರಿಗಳು ಜನರನ್ನು ತಲುಪಬೇಕು. ಜಿಲ್ಲಾ ಕೇಂದ್ರದಲ್ಲೇ ಅಧಿಕಾರಿಗಳು ವಾಸ್ತವ್ಯ ಹೂಡಬೇಕು. ರೈತರಿಗೆ ಗೌರವದಿಂದ ಸ್ಪಂದಿಸಿ, ಕೈಗೊಂಡಿರುವ ಕೆಲಸಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು. ನೀವು ಜನರಿಗೆ ತಾಳ್ಮೆಯಿಂದ ಪ್ರತಿಕ್ರಿಯೆ ನೀಡಿದರೆ ಸರ್ಕಾರಕ್ಕೂ ಒಳ್ಳೆಯದಾಗಲಿದೆ.
ಬೆಳೆ ವಿಮೆ ಕುರಿತು ಜಿಲ್ಲೆಯಲ್ಲಿ ಸಾಕಷ್ಟು ದೂರುಗಳು ಬಂದಿವೆ. ಏಜೆಂಟರು ರೈತರನ್ನು ದಾರಿ ತಪ್ಪಿಸುವ ಕೆಲಸಕ್ಕೆ ಕಡಿವಾಣ ಹಾಕಬೇಕು. ಕೆಲವು ಫೈನಾನ್ಸ್ ಕಂಪನಿಗಳ ಮೀಟರ್ ಬಡ್ಡಿ ದಂಧೆಯನ್ನು ನಿಲ್ಲಿಸಲು ಪೊಲೀಸರು ಮುಂದಾಗಬೇಕು. ಅಮಾಯಕರು ಈ ಜಾಲಕ್ಕೆ ಸಿಲುಕಿಕೊಳ್ಳದಂತೆ ನಿಗಾವಹಿಸಬೇಕು.
ಯಾವುದೇ ಫಲಾನುಭವಿಗೆ ಬರ ಪರಿಹಾರ ನೀಡುವಾಗ ಪಾರದರ್ಶಕತೆ ಇರಬೇಕು. ಯಾವುದೇ ಅಕ್ರಮ ನಡೆದರೂ ಅದಕ್ಕೆ ಅಧಿಕಾರಿಗಳೇ ಹೊಣೆಗಾರರಾಗುತ್ತಾರೆ.
ಕಂದಾಯ, ಸಮಾಜ ಕಲ್ಯಾಣ, ಪಿಡಿಒ ಸೇರಿದಂತೆ ಜನರ ನಡುವೆ ಕೆಲಸ ಮಾಡುವ ಅಧಿಕಾರಿಗಳು ಜಿಲ್ಲೆಯಲ್ಲಿ ಎಲ್ಲಿರುತ್ತಾರೆ ಎಂಬ ಮಾಹಿತಿ ಇರಬೇಕು. ಪ್ರವಾಸ ಕಾರ್ಯಕ್ರಮ, ದೂರವಾಣಿ ಸಂಖ್ಯೆ ಸೇರಿದಂತೆ ಎಲ್ಲದರ ಮಾಹಿತಿಯು ನಿಖರವಾಗಿ ನವೀಕೃತವಾಗಿರಬೇಕು. ಡ್ಯಾಶ್ಬೋರ್ಡ್ ಮುಖಾಂತರ ಬರದ ಮಾಹಿತಿ ಸೇರಿದಂತೆ ಜನರಿಗೆ ಹಾಗೂ ರೈತರಿಗೆ ಅನುಕೂಲವಾಗುವಂತಹ ಮಾಹಿತಿಗಳನ್ನು ನೀಡಬೇಕು.
ಜಮೀನುಗಳನ್ನು ಗುರುತಿಸಿ, ಪ್ರತಿ ತಾಲೂಕಿನಲ್ಲಿ ನಿವೇಶನ ರಹಿತರಿಗೆ ನಿವೇಶನ ಹಂಚುವ ಕೆಲಸ ಮಾಡಬೇಕು. ಪ್ರತಿ ತಾಲೂಕಿನಲ್ಲಿ 50 ಸಾವಿರ ನಿವೇಶನಗಳನ್ನು ಹಂಚುವ ಗುರಿಯಿದೆ.
ತೇಗದ ಸಿರಿ ಯೋಜನೆಯಡಿ ರಸ್ತೆಗಳ ಪಕ್ಕದ ಜಮೀನಿನಲ್ಲಿ ತೇಗದ ಸಸಿಗಳನ್ನು ನೆಟ್ಟು, ರೈತರು ಅವುಗಳನ್ನು ಆರೈಕೆ ಮಾಡುವ ನೂತನ ಆಲೋಚನೆ ಸರ್ಕಾರಕ್ಕಿದೆ. ಇದರಿಂದ ಬರುವ ಲಾಭದಲ್ಲಿ ರೈತರಿಗೆ 70% ಹಾಗೂ ಸರ್ಕಾರಕ್ಕೆ 30% ಹಂಚಿಕೆ ಮಾಡಲಾಗುತ್ತದೆ.
Leave a comment