SUDDIKSHANA KANNADA NEWS/DAVANAGERE/DATE:30_10_2025
ದಾವಣಗೆರೆ: ಕಳೆದ ಮೂರು ವರ್ಷಗಳಿಂದ ಇಲ್ಲೇ ಠಿಕಾಣಿ ಹೂಡಿರುವ ದಾವಣಗೆರೆ ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಅವರಿಂದ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಮತ್ತು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಕೆಟ್ಟ ಹೆಸರು ಬರುತ್ತಿದೆ ಎಂದು ಮಾದಿಗ ದಂಡೋರ ಸಮಿತಿ ಗಂಭೀರ ಆರೋಪ ಮಾಡಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಘಟಕದ ಜಿಲ್ಲಾಧ್ಯಕ್ಷ ಹೆಚ್ಯ ಸಿ. ಗುಡ್ಡಪ್ಪ ಅವರು, ಒಂದಲ್ಲಾ ಒಂದು ಕಾರಣಕ್ಕೆ ದಾವಣಗೆರೆಯಲ್ಲೇ ರೇಣುಕಾ ಪಾಲಿಕೆ ಆಯುಕ್ತೆಯಾಗಿ ಮುಂದುವರಿಯುತ್ತಿರುವುದು ಹಲವು ಅನುಮಾನಕ್ಕೆ ಕಾರಣ ಆಗಿದೆ. ಎಸ್. ಎಸ್. ಮಲ್ಲಿಕಾರ್ಜುನ್ ಹಾಗೂ ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಒಳ್ಳೆಯ ಹೆಸರು ತರುವಂತೆ ಆಡಳಿತ ನಡೆಸಬೇಕಾದ ಆಯುಕ್ತೆ ರೇಣುಕಾ ಅವರು ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಕೂಡಲೇ ದಾವಣಗೆರೆಯಿಂದ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.
READ ALSO THIS STORY: ಭರ್ಜರಿ ಉದ್ಯೋಗಾವಕಾಶ, ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ: 7565 ಹುದ್ದೆಗಳಿಗೆ ಆನ್ಲೈನ್ನಲ್ಲಿ ಸಲ್ಲಿಸಿ ಅರ್ಜಿ
ರೇಣುಕಾ ಅವರು ಪೌರಕಾರ್ಮಿಕರಿಗೆ ಶೋಷಣೆ ಮಾಡುತ್ತಿದ್ದಾರೆ. ಆದರೂ ಕ್ರಮ ಕೈಗೊಂಡಿಲ್ಲ. ಕೂಡಲೇ ವರ್ಗಾವಣೆ ಮಾಡದಿದ್ದರೆ ಸಚಿವರು ಮತ್ತು ಸಂಸದೆ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ದಾವಣಗೆರೆಗೆ ಬಂದು ರೇಣುಕಾ ಅವರು ಮೂರು ವರ್ಷವಾಗುತ್ತಿದೆ. ನಾಲ್ವರು ಪೌರಕಾರ್ಮಿಕರು ಸೇರಿದಂತೆ 41 ನೌಕರರನ್ನು ಸಸ್ಪೆಂಡ್ ಮಾಡಿದ್ದಾರೆ. ಆಯುಕ್ತರ ಆಡಳಿತ ವೈಖರಿಯಿಂದ ಸಚಿವರು ಮತ್ತು ಸಂಸದರಿಗೆ ಕೆಟ್ಟ ಹೆಸರು ಈಗಾಗಲೇ ಬಂದಿದೆ. ಇದನ್ನು ಕೂಡಲೇ ಸರಿಪಡಿಸಬೇಕು ಎಂದರೆ ಆಯುಕ್ತೆ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.
19.19 ಕೋಟಿ ರೂಪಾಯಿ ಹಸಿ ಕಸ ಮತ್ತು ಒಣ ಕಸ ವಿಂಗಡಣೆಗೆ ಟೆಂಡರ್ ನೀಡಲಾಗಿದೆ. ಕಸ ಬೇರ್ಪಡಿಸಿ ಗೊಬ್ಬರ ತಯಾರಿಸುವ ಕಾರ್ಯವನ್ನು ಗುತ್ತಿಗೆದಾರ ಕಂಪೆನಿ ಮಾಡುತ್ತಿಲ್ಲ. ಪಾಲಿಕೆ ವ್ಯಾಪ್ತಿಯಲ್ಲಿ ಸಂಗ್ರಹವಾದ ಕಸವನ್ನು ಹರಪನಹಳ್ಳಿ ತಾಲೂಕಿನ ಗಣಿಗಾರಿಕೆ ಪ್ರದೇಶದ ಗುಂಡಿಗಳಿಗೆ ಸುರಿಯಲಾಗುತ್ತಿದೆ. ಈ ಕಂಪೆನಿ ವಿರುದ್ಧ ಕ್ರಮ ಕೈಗೊಳ್ಳದ ಆಯುಕ್ತರು ಪೌರ ಕಾರ್ಮಿಕರಿಗೆ ಕಿರುಕುಳ ನೀಡುತ್ತಿದ್ದಾರೆ. ನಿತ್ಯ ಬೆಳಿಗ್ಗೆ 5 ಗಂಟೆಗೆ ಆರಂಭವಾಗುವ ಪೌರಕಾರ್ಮಿಕರ ಕಾರ್ಯ ಮಧ್ಯಾಹ್ನ 3ಗಂಟೆಗೆ ಮುಗಿಯುತ್ತದೆ. ಮಕ್ಕಳ ಶಿಕ್ಷಣ, ಕುಟುಂಬದತ್ತ ಗಮನ ನೀಡುವುದು ಅವರಿಗೆ ತುಂಬಾನೇ ಕಷ್ಟ. ಬೆಳಗಿನ ತಿಂಡಿ, ಊಟ, ಕೈಗವಸು, ಸೋಪು ಸೇರಿದಂತೆ ಹಲವು ಸೌಲಭ್ಯ ನೀಡಬೇಕೆಂದು ಸರ್ಕಾರವೇ ಕಟ್ಟುನಿಟ್ಟಾಗಿ ಹೇಳಿದೆ. ಆದರೆಇವು ಪೌರಕಾರ್ಮಿಕರನ್ನು ತಲುಪುತ್ತಿಲ್ಲ. ಕಸ ಗುಡಿಸುವ ಪೊರಕೆಗಳನ್ನು ಅಗತ್ಯಕ್ಕಿಂತ ಹೆಚ್ಚು ಖರೀದಿಸಲಾಗಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಮಾದಿಗ ದಂಡೋರ ಜಿಲ್ಲಾ ಘಟಕದ ಉಪಾಧ್ಯಕ್ಷ ಹೆಚ್ಯ ಚಿದಾನಂದಪ್ಪ, ನಗರ ಘಟಕದ ಅಧ್ಯಕ್ಷ ಎಂ. ಆಂಜನೇಯ, ಮುಖಂಡರಾದ ಎಂ. ಡಿ. ಶಿವಕುಮಾರ್, ದಾನಪ್ಪ ದೊಡ್ಡಮನಿ, ಅಲೆಕಲ್ಲು ಲೋಕೇಶ್ ಮತ್ತಿತರರು ಹಾಜರಿದ್ದರು.








