SUDDIKSHANA KANNADA NEWS/ DAVANAGERE/DATE:10_09_2025
ಶಿವಮೊಗ್ಗ: ಭದ್ರಾವತಿಯಲ್ಲಿ ಈದ್ ಮಿಲಾದ್ ಆಚರಣೆ ವೇಳೆ ನಾನು ಮುಂದಿನ ಜನ್ಮದಲ್ಲಿ ಮುಸ್ಲಿಂ ಧರ್ಮದಲ್ಲಿ ಹುಟ್ಟಬೇಕು ಎಂದು ಹೇಳಿದ್ದು ನಿಜ. ಆದ್ರೆ, ನಾನು ಮಾತನಾಡಿದ್ದ ಸಂಪೂರ್ಣ ವಿಡಿಯೋ ಪ್ರಸಾರ ಮಾಡಿಲ್ಲ. ಹಾಗಾಗಿ ಗೊಂದಲ ಉಂಟಾಗಿದೆ ಎಂದು ಭದ್ರಾವತಿ ಶಾಸಕ ಬಿ. ಕೆ. ಸಂಗಮೇಶ್ವರ ಸಮರ್ಥಿಸಿಕೊಂಡರು.
READ ALSO THIS STORY: ಐಟಿಐ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಹೆಚ್ಎಎಲ್ ನಲ್ಲಿ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಮುಂದಿನ ಜನ್ಮದಲ್ಲಿ ಕ್ರಿಶ್ಚಿಯನ್, ಮುಸ್ಲಿಂ, ಬೌದ್ಧ ಸೇರಿದಂತೆ ಎಲ್ಲಾ ಧರ್ಮದಲ್ಲಿಯೂ ಹುಟ್ಟಬೇಕು ಎಂಬ ಮಾತು ಆಡಿದ್ದೆ. ಆದ್ರೆ, ಇದನ್ನು ಎಡಿಟ್ ಮಾಡಿ ಕೇವಲ ಮುಸ್ಲಿಂ ಧರ್ಮದಲ್ಲಿ ಹುಟ್ಟಬೇಕು ಎಂಬುದಷ್ಟೇ ವೈರಲ್ ಮಾಡಲಾಗಿದೆ. ಇದರ ಹಿಂದೆ ಬಿಜೆಪಿ ಮತ್ತು ಜೆಡಿಎಸ್ ಕೈವಾಡವಿದೆ ಎಂದು ಆರೋಪಿಸಿದರು.
ಗಲಾಟೆ ನಡೆಯದಂತೆ ಹಬ್ಬಗಳು ನಡೆಯುವಂತಾಗಬೇಕು. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯದವರ ಸಹಕಾರ ಬೇಕು. ಎಲ್ಲರೂ ಸಹೋದರರಂತೆ ಹಬ್ಬ ಆಚರಿಸಬೇಕು ಎಂಬ ಕರೆ ಕೊಟ್ಟಿದ್ದೆ. ಭದ್ರಾವತಿಯ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲಾ ಧರ್ಮದವರ ಸಹಕಾರ ಬೇಕು ಎಂದು ಹೇಳಿದ್ದೇನೆ. ಇದರಲ್ಲಿ ತಪ್ಪೇನಿದೆ? ಆದರೆ ಮುಸ್ಲಿಂ ಧರ್ಮದಲ್ಲಿ ಹುಟ್ಟಬೇಕೇಂಬ ಹೇಳಿಕೆ ಇಟ್ಟುಕೊಂಡು ವಿವಾದ ಸೃಷ್ಟಿಸಲಾಗಿದೆ ಎಂದು ಕಿಡಿಕಾರಿದರು.
ಮೊದಲಿನಿಂದಲೂ ಭದ್ರಾವತಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಅಪಪ್ರಚಾರದಲ್ಲಿ ನಿರತವಾಗಿವೆ. ಭದ್ರಾವತಿಯ ಅಭಿವೃದ್ಧಿ ಸಹಿಸದೇ ಆರೋಪ ಮಾಡುತ್ತಿವೆ. ಜನರು ಇದಕ್ಕೆ ಕಿವಿಗೊಡಬಾರದು. ಎಲ್ಲಾ ಧರ್ಮದವರು ಸಹೋದರರಂತೆ ಬಾಳಬೇಕು. ಈ ನಿಟ್ಟಿನಲ್ಲಿ ನಮ್ಮ ಕೆಲಸ ಇರಬೇಕು. ಬಿಜೆಪಿ ಮತ್ತು ಜೆಡಿಎಸ್ ಷಡ್ಯಂತ್ರ ಮತ್ತು ಕುತಂತ್ರ ಮಾಡುವುದರಲ್ಲಿ ಎತ್ತಿದ ಕೈ. ಈ ಪಕ್ಷಗಳಿಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿ. ಕೆ. ಸಂಗಮೇಶ್ವರ ಹೇಳಿದರು.