SUDDIKSHANA KANNADA NEWS/ DAVANAGERE/ DATE-29-05-2025
ಬೆಂಗಳೂರು: ತೋಟಗಾರಿಕೆ ಇಲಾಖೆ ವತಿಯಿಂದ ಕೇಂದ್ರ ಪುರಸ್ಕೃತ ಖಾದ್ಯ ತೈಲ ಅಭಿಯಾನ-ತಾಳೆ ಬೆಳೆ ಯೋಜನೆಯಡಿ ತಾಳೆ ಬೆಳೆ ಬೆಳೆಯಲು ಆಸಕ್ತಿಯುಳ್ಳ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.
ನೀರಿನ ಸೌಲಭ್ಯ ಹೊಂದಿರುವ ಫಲಾನುಭವಿಗಳಿಗೆ ಹೊಸ ಪ್ರದೇಶ ವಿಸ್ತರಣೆ ಪ್ರತಿ ಹೆಕ್ಟರ್ ಗೆ ರೂ.20 ಸಾವಿರದಂತೆ ಸಹಾಯಧನ ನೀಡಲಾಗುತ್ತದೆ. ಈ ಹಿಂದೆ ಅಭಿವೃದ್ಧಿ ಪಡಿಸಲಾದ ತಾಳೆ ಬೆಳೆ ತೋಟಗಳ ಮೊದಲನೇ, ಎರಡನೇ, ಮೂರನೇ ಮತ್ತು ನಾಲ್ಕನೇ ವರ್ಷದ ನಿರ್ವಹಣೆಗೆ ಪ್ರತಿ ಹೆಕ್ಟರ್ ರೂ.5250/- ಮೊತ್ತದ ರಾಸಾಯನಿಕ ಮತ್ತು ಸಾವಯವ ಗೊಬ್ಬರ ನೀಡಲಾಗುತ್ತದೆ.
ಕನಿಷ್ಠ 1 ಹೆಕ್ಟರ್ ತಾಳೆ ಬೆಳೆ ಪ್ರದೇಶವನ್ನು ಕೈಗೊಂಡಿರುವ ಫಲಾನುಭವಿಗಳಿಗೆ 15 ಹೆಚ್.ಪಿ ಸಾಮಾರ್ಥ್ಯದ ಡೀಸೆಲ್, ವಿದ್ಯುತ್ ಚಾಲಿತ ಪಂಪ್ಸೆಟ್ ಕೊಳ್ಳಲು ಸಾಮಾನ್ಯ ರೈತರಿಗೆ ಒಟ್ಟು ಖರ್ಚಿನ ಶೇ.50 ರಷ್ಟು ಪ್ರತಿ ಘಟಕಕ್ಕೆ ಗರಿಷ್ಟ ರೂ.22,500 ರಂತೆ ಸಹಾಯಧನ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಅತೀ ಸಣ್ಣ ಮತ್ತು ಸಣ್ಣ ರೈತ ಫಲಾನುಭವಿಗಳಿಗೆ ಪ್ರತಿ ಘಟಕಕ್ಕೆ ಗರಿಷ್ಟ ರೂ.27 ಸಾವಿರಸಹಾಯಧನ ನೀಡಲಾಗುವುದು.
ತಾಳೆ ಬೆಳೆಯುವ ರೈತರು ಮೊದಲ ನಾಲ್ಕು ವರ್ಷದವರೆಗೆ ತಾಳೆ ಬೆಳೆಯಲ್ಲಿ ತೋಟಗಾರಿಕೆ ಬೆಳೆಗಾಳ ಅಂತರ ಬೇಸಾಯ ಕೈಗೊಂಡಲ್ಲಿ ಪ್ರತಿ ಹೆಕ್ಟರ್ ಗೆ ರೂ.5 ಸಾವಿರ ಸಹಾಯಧನ ನೀಡಲಾಗುವುದು. ಕನಿಷ್ಠ ಒಂದು ಎಕರೆ ಪ್ರದೇಶದಲ್ಲಿ ಇಳುವರಿ ನೀಡುತ್ತಿರುವ ತಾಳೆ ತೋಟದಲ್ಲಿ ಕೊಳವೆ ಬಾವಿ ಅಳವಡಿಸಿದ ರೈತರಿಗೆ ರೂ.50 ಸಾವಿರ ಮೊತ್ತಕ್ಕೆ ಸಹಾಯಧನ ನೀಡಲು ಅವಕಾಶವಿದೆ. ತಾಳೆ ಬೆಳೆ ಕೃಷಿಗೆ ಅಗತ್ಯವಿರುವ ಯಂತ್ರೋಪಕರಣಗಳ ಖರೀದಿಗೆ ಶೇಕಡವಾರು ಸಹಾಯಧನ ವಿತರಿಸಲು ಅವಕಾಶವಿದೆ.
ಎರೆಹುಳು ಘಟಕಕ್ಕೆ ಶೇ.50 ರಂತೆ 15 ಸಾವಿರ ರೂ. ಮತ್ತು ನೀರು ಕೊಯ್ಲು ಘಟಕಕ್ಕೆ ಶೇ.50 ರಂತೆ 75 ಸಾವಿರ ರೂ.ಗಳ ಸಹಾಯಧನ ವಿತರಿಸಲು ಅವಕಾಶ ಇದೆ. ಆಸಕ್ತ ರೈತರು ಅಗತ್ಯ ದಾಖಲಾತಿಗಳೊಂದಿಗೆ ತೋಟಗಾರಿಕೆ ಇಲಾಖೆ ಕಚೇರಿಗೆ ಭೇಟಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳು ಹಾಗೂ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.