SUDDIKSHANA KANNADA NEWS/ DAVANAGERE/ DATE:17-08-2023
ದಾವಣಗೆರೆ: ತುಮಕೂರಿನ ಸಿದ್ದಾರ್ಥ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿಎಐಡಿಎಸ್ ಓ ಸಂಘಟನೆಯುರಾಜ್ಯಮಟ್ಟದ 8 ನೇ ವಿದ್ಯಾರ್ಥಿ ಸಮ್ಮೇಳನ ಆಯೋಜಿಸಿದೆ ಎಂದು ಸಂಘಟನೆಯ ರಾಜ್ಯ ಸಮಿತಿಯ ಸೆಕ್ರೆಟರಿ ಸದಸ್ಯ ಮಹಾಂತೇಶ್ ಬೀಳೂರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್ ಇ ಪಿ ವಿರುದ್ಧ ಕಳೆದ ವರ್ಷ ಆಂದೋಲನ ನಡೆಸಲಾಗಿತ್ತು. ಸರ್ಕಾರಿ ಶಾಲೆಗಳ ಉಳಿವಿಗೆ ಮೊದಲಿನಿಂದಲೂ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ಕಳೆದ ವರ್ಷ ರಾಜ್ಯಾದ್ಯಂತ ಸಾರ್ವಜನಿಕ ಶಿಕ್ಷಣ ಉಳಿಸಿ ಆಂದೋಲನ ಆಯೋಜಿಸಲಾಗಿತ್ತು. ಈ ಆಂದೋಲನದಲ್ಲಿ 35 ಲಕ್ಷಕ್ಕೂ ಅಧಿಕ ಸಹಿ ಸಂಗ್ರಹ ಮಾಡಿದ್ದರು. ದೊಡ್ಡ ಪ್ರಭಾವ ಬೀರಿದ್ದ ಈ ಆಂದೋಲನವು ನೂರಾರು ಶಿಕ್ಷಕರು,ಪ್ರಾಂಶುಪಾಲರು, ಪೋಷಕರು ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು ಎಂದರು.
ತುಮಕೂರಿನಲ್ಲಿ ಈ ಬಾರಿಯ ಸಮ್ಮೇಳನ ಆಯೋಜಿಸಲಾಗಿದೆ. ಈ ಮೂಲಕ ಶೈಕ್ಷಣಿಕ ಸಮಸ್ಯೆಗಳ ವಿರುದ್ದ ಪ್ರಬಲ ಸಂಘಟಿತ ಹೋರಾಟಗಳನ್ನು ಬೆಳೆಸುವ ಸಂಕಲ್ಪ ನಮ್ಮದು. ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ನೀಡಬೇಕು.
ಪಠ್ಯಕ್ರಮದ ಮೂಲಕ ಶಿಕ್ಷಣಸಂಸ್ಥೆಗಳಲ್ಲಿ ಧರ್ಮನಿರಪೇಕ್ಷ ವಾತಾವರಣ ರಕ್ಷಿಸಬೇಕು. ಎನ್ ಇಪಿ ಹೇರಿಕೆ ಕೈ ಬಿಡಬೇಕು. ಖಾಲಿಯಿರುವ ಶಿಕ್ಷಕರ ಹುದ್ದೆ ಭರ್ತಿ ಮಾಡಬೇಕು. ಅತಿಥಿ ಶಿಕ್ಷಕರ ಹಕ್ಕು ರಕ್ಷಿಸಬೇಕು.ಬಜೆಟ್ ನಲ್ಲಿ ಶಿಕ್ಷಣಕ್ಕೆ ಹೆಚ್ಚು
ಅನುದಾನ ನೀಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಈ ಸಮಾವೇಶ ನಡೆಸಲಾಗುತ್ತಿದೆ. ಸಮಾವೇಶದಲ್ಲಿ ಈ ಬಗ್ಗೆ ನಿರ್ಣಯ ಅಂಗೀಕರಿಸಲಾಗುವುದು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಪೂಜಾ ನಂದಿಹಳ್ಳಿ, ಸುಮನ್ ಟಿ.ಎಸ್., ಧನುಷ, ಕೌಶಿಕ್ ಚಿರು ಹಾಜರಿದ್ದರು.