SUDDIKSHANA KANNADA NEWS/ DAVANAGERE/ DATE:29-07-2023
ದಾವಣಗೆರೆ: ಬರೋಬ್ಬರಿ 25 ವರ್ಷಗಳ ಸೇವೆ. ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡಿದ ಎಲ್ಲರ ನೆಚ್ಚಿನ, ಮೆಚ್ಚಿನ ಶಿಕ್ಷಕಿ (Teacher) . ಎಲ್ಲರಲ್ಲೂ ಭಾವುಕತೆ, ಇಂಥ ಮಿಸ್ ಬೆಂಗಳೂರಿಗೆ ಹೋಗುತ್ತಿದ್ದಾರಲ್ಲಾ ಎಂಬ ಹೃದಯಾಂತರಾಳದ ನೋವು. ನಿತ್ಯವೂ ಶಾಲೆಗೆ ಪಾಠ ಮಾಡಲು ಬರುತ್ತಿದ್ದ ಎಲ್ಲರ ಅಚ್ಚುಮೆಚ್ಚಿನ ಶಿಕ್ಷಕಿ (Teacher) ಎಂದೇ ಕರೆಯಲ್ಪಡುವ ಎ. ಸಿ. ಶಶಿಕಲಾ ಶಂಕರಮೂರ್ತಿ ಅವರು ಬೆಂಗಳೂರಿಗೆ ಹೋಗುತ್ತಿದ್ದಾರೆ ಎಂಬ ಮನದಾಳದಲ್ಲಿನ ಮಮಕಾರದ ಪ್ರೀತಿ ವ್ಯಕ್ತಪಡಿಸಿದ್ದು ನಿಜಕ್ಕೂ ಅಚ್ಚರಿ.
ಹೂವಿನಮಡು ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಶಿಕಲಾ ಶಂಕರಮೂರ್ತಿ ಅವರು ಬೆಂಗಳೂರಿಗೆ ವರ್ಗಾವಣೆಯಾಗಿ ಹೋಗುತ್ತಾರೆ ಎಂಬ ಸುದ್ದಿ ಕೇಳಿದಾಕ್ಷಣವೇ ಎಲ್ಲರಲ್ಲೂ ಭಾವುಕತೆ ಕಾಣಿಸಿತ್ತು. ಮುಖದಲ್ಲಿ ನೋವು ಮಡುಗಟ್ಟಿತ್ತು. ಅದರಲ್ಲಿಯೂ ನಿತ್ಯವೂ ಟೀಚರ್ ಅವರನ್ನು ಪ್ರೀತಿಯಿಂದ ಕಾಣುತ್ತಿದ್ದ ವಿದ್ಯಾರ್ಥಿಗಳ ಮನದಲ್ಲಿಯೂ ಮೇಡಂ ನಾಳೆ ಬರೋದಿಲ್ಲ, ಬೆಂಗಳೂರಿಗೆ ಹೋಗುತ್ತಿದ್ದಾರೆ ಎಂಬ ನೋವಿತ್ತು.
ಕಳೆದ ಏಳೂವರೆ ವರ್ಷಗಳ ಕಾಲ ಹೂವಿನಮಡುವಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಸಾವಿರಾರು ವಿದ್ಯಾರ್ಥಿಗಳ ಮೆಚ್ಚಿನ ಟೀಚರ್ ಆಗಿದ್ದರು. ಇವರ ಬಳಿ ಶಿಕ್ಷಣ ಕಲಿತವರು ಶಶಿಕಲಾ ಮೇಡಂ ಅಂತಾನೇ ಕರೆಯುತ್ತಿದ್ದರು.
ಗೌರವಪೂರ್ವಕ ಬಿಡುಗಡೆ:
ಶಿಕ್ಷಕರು ಒಂದು ಕಡೆಯಿಂದ ಮತ್ತೊಂದು ಕಡೆ ಹೋಗುವಾಗ ಬೇಸರ ಆಗುವುದು ಸಹಜ. ಆದ್ರೆ, ಎಲ್ಲರ ಮೆಚ್ಚುಗೆ ಗಳಿಸಿದ್ದ ಪ್ರೀತಿ ಪಾತ್ರರಾಗಿದ್ದ ಶಶಿಕಲಾ ಅವರು ಬೆಂಗಳೂರಿಗೆ ವರ್ಗಾವಣೆಯಾದ ಕಾರಣ ಗೌರವಪೂರ್ವಕವಾಗಿ ಬಿಡುಗಡೆಗೊಳಿಸಲಾಯಿತು. ಏಳೂವರೆ ವರ್ಷಗಳ ಕಾಲ ನೀಡಿದ ಸೇವೆ ಸ್ಮರಿಸಿ ಸನ್ಮಾನಿಸಲಾಯಿತು.
ಶಾಲೆಗೆ ರಜೆಯಿದ್ದರೂ ಮಳೆ ಬರುತಿದ್ದರೂ ಮಕ್ಕಳು, ಗ್ರಾಮಸ್ಥರು, ಎಸ್ ಡಿ ಎಂ ಸಿಯ ಹಳೆ ಹಾಗೂ ಹೊಸ ಅಧ್ಯಕ್ಷರು, ಶಾಲಾ ಸಿಬ್ಬಂದಿಯೂ ಆತ್ಮೀಯವಾಗಿ ಬೀಳ್ಕೊಟ್ಟರು.
ಈ ಸುದ್ದಿಯನ್ನೂ ಓದಿ:
Rain: ಮಳೆ ಮಳೆ… ಮಳೆನಾಡಾದ ಬೆಣ್ಣೆನಗರಿ, ಈ ಕ್ರಮಗಳ ಅನುಸರಿಸಿದರೆ ರೋಗಗಳಿಂದ ದೂರ ದೂರ ಗ್ಯಾರಂಟಿ… ಹಾಗಾದ್ರೆ ಓದಿ ಅನುಸರಿಸಿ ತಡಮಾಡ್ಬೇಡಿ…
ಪ್ರಭಾರಿ ಮುಖ್ಯ ಶಿಕ್ಷಕಿಯಾಗಿ ಹಾಗೂ ಕನ್ನಡ ಭಾಷಾ ಶಿಕ್ಷಕಿಯಾಗಿ, ಸಾಹಿತಿಯಾಗಿ, ಪ್ರಕಾಶಕಿಯಾಗಿ ಶಾಲೆ, ಇಲಾಖೆ, ಸಮಾಜಕ್ಕೆ ಅವಿರತ ಶ್ರಮಿಸಿದ ಎ. ಸಿ. ಶಶಿಕಲಾ ಶಂಕರಮೂರ್ತಿ ಅವರ ಸುದೀರ್ಘ ಸೇವೆಯನ್ನು ಹೃನ್ಮನದಿ ನೆನೆದು, ಶುಭಾಶಯಗಳೊಂದಿಗೆ ಹಾರೈಸಿದರು.
ವೀರೇಶ್, ಹಿಂದಿ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ ಹೂವಿನಮಡು:
ಶಶಿಕಲಾ ಮೇಡಂ ಅವರ ಮುಂದಿನ ಪಯಣವೂ ಸುಖಕರವಾಗಿರಲಿ. ಅವರಿಂದ ಮತ್ತಷ್ಟು ವಿದ್ಯಾರ್ಥಿಗಳಿಗೆ ಉತ್ತಮ ಗುರಿ ಸಿಗುವಂತಾಗಲಿ. ಅವರ ಸೇವೆ ನಿಜಕ್ಕೂ ಅನನ್ಯ. ಕೇವಲ ಶಿಕ್ಷಕಿಯಾಗಿ ಮಾತ್ರವಲ್ಲ, ಬೇರೆ ಬೇರೆ ಕ್ಷೇತ್ರಗಳಲ್ಲಿಯೂ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ ಎಂದು ಹೂವಿನಮಡು ಸರ್ಕಾರಿ ಪ್ರೌಢಶಾಲೆಯ ಹಿಂದಿ ಭಾಷಾ ಶಿಕ್ಷಕ ವೀರೇಶ್ ಅವರು ಸೇವೆ ಸ್ಮರಿಸಿದರು.
ಶಿಕ್ಷಕ ಮಂಜಪ್ಪರ ನಿವಾಸದಲ್ಲಿ ಗೌರವ:
ಹೂವಿನಮಡು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಡಾ. ಮಂಜಪ್ಪ ದಂಪತಿ ಅವರ ಸ್ವಗೃಹದಲ್ಲಿ ಸ್ಥಾಪಿಸಿರುವ ಸರ್ವಜ್ಞ ವಿದ್ಯಾಪೀಠದಲ್ಲಿ ವರ್ಗಾವಣೆ ಆದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ವೃತ್ತಿ ಸೇವೆ ಮುಂದುವರಿಕೆಗೆ ಹೋಗುತ್ತಿರುವ ಎ. ಸಿ. ಶಶಿಕಲಾ ಶಂಕರಮೂರ್ತಿ ಅವರನ್ನು ಹೃತ್ಪೂರ್ವಕವಾಗಿ ಆದರಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಮೋತಿವೀರಪ್ಪ ಕಾಲೇಜಿನ ಕನ್ನಡ ಭಾಷಾ ಶಿಕ್ಷಕ ನಾಗರಾಜ್, ಹೂವಿನಮಡು ಶಾಲೆಯ ಶಿಕ್ಷಕ ಮಂಜುನಾಥ್ ಉಪಸ್ಥಿತರಿದ್ದರು.
ಸ್ವಇಚ್ಛೆಯಿಂದ ವರ್ಗಾವಣೆ:
ಇನ್ನು ಶಶಿಕಲಾ ಅವರು ಸ್ವಇಚ್ಚೆಯಿಂದ ಬೆಂಗಳೂರಿಗೆ ವರ್ಗಾವಣೆಯಾಗಿ ಹೋಗುತ್ತಿದ್ದಾರೆ. ಆದ್ರೆ, ಶಾಲೆಯಲ್ಲಿನ ಸವಿ ಸವಿ ಸಾವಿರ ನೆನಪು ಹಾಗೆಯೇ ಬಿಟ್ಟು ಹೋಗುತ್ತಿದ್ದಾರೆ. 25 ವರ್ಷಗಳ ಸುದೀರ್ಘ ಸೇವೆ ದಾವಣಗೆರೆ ಜಿಲ್ಲೆಗೆ ಸಲ್ಲಿಸಿ, ಬೆಂಗಳೂರಿಗೆ ಸ್ವಇಚ್ಛೆಯಿಂದ ಕೋರಿಕೆ ವರ್ಗಾವಣೆ ಆದ ಪ್ರಯುಕ್ತ ದಾವಣಗೆರೆ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಕೃತಜ್ಞತೆ ಸಲ್ಲಿಸಿರುವ ಶಶಿಕಲಾ ಅವರು, ಎಲ್ಲರ ನೆರವು ಮರೆಯಲಾಗದು ಎಂದರು.
ಅಕ್ಷರದಾಸೋಹದ ಜೊತೆಗೆ ದಾನಧರ್ಮದ ಕಾಯಕ:
ದಾವಣಗೆರೆ ಬಿಟ್ಟು ಹೋಗುವಲ್ಲಿಯೂ ಇಲಾಖೆ ಬಗ್ಗೆ ಅವರು ಹೊಂದಿದ ಪ್ರೀತಿ, ತೋರಿದ ಅಭಿಮಾನ ಕಾಯಕ ಮಾತುಗಳಲ್ಲಿ ಹೇಳಲಾಗದಷ್ಟು. ಶಶಿಕಲಾ ಮೇಡಂ ಅವರು ದಾವಣಗೆರೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಗೌರವ ಸಲ್ಲಿಸಲು ಸೇರಲಾಗಿದ್ದ ಕೃತಜ್ಞತಾ ಗೌರವ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲೆಯ ಎಲ್ಲ ಹಿರಿಯ, ಕಿರಿಯ ಅಧಿಕಾರಿಗಳು ಹಾಗೂ ಜಿಲ್ಲಾ ಶಿಕ್ಷಣ ಸಂಘಗಳ ಪದಾಧಿಕಾರಿಗಳು ಎ. ಸಿ. ಶಶಿಕಲಾ ಶಂಕರಮೂರ್ತಿಯವರ ಸಾಹಿತ್ಯ ಸಾಮಾಜಿಕ, ಶೈಕ್ಷಣಿಕ ಸೇವೆ,ಅವರ ದಾಸೋಹದ ಗುಣ, ದಾನ ಧರ್ಮದ ಕಾಯಕ, ಕನ್ನಡ ಭಾಷಾ ಶಿಕ್ಷಕಿಯಾಗಿ ಅವರು ಶಾಲೆಗಳಿಗೆ ಇಲಾಖೆಗೆ ಡಯಟ್ ಗೆ ಸಲ್ಲಿಸಿದ ಸೇವೆಗಳನ್ನು ಮನಸ್ಸಾರೆ ಸ್ಮರಿಸಿ, ವಂದಿಸಿದರು.
ದಾವಣಗೆರೆ ರತ್ನ ಬೆಂಗಳೂರಲ್ಲಿ ಬೆಳಗಲಿ:
ದಾವಣಗೆರೆ ಒಂದು ಕನ್ನಡದ ವಜ್ರವನ್ನು ಕಳೆದುಕೊಳ್ಳುತ್ತಿದೆ. ಶಶಿಕಲಾ ಅವರು ದಾವಣಗೆರೆ ಉತ್ತರ ವಲಯವನ್ನು ಬಿಟ್ಟು ದಾವಣಗೆರೆ ದಕ್ಷಿಣ ವಲಯಕ್ಕೆ ಬಂದಾಗಲೇ ಬೇಸರವಾಗಿತ್ತು. ಆದರೀಗ ಪೂರ ಜಿಲ್ಲೆಯನ್ನು ಬಿಟ್ಟು ಬೆಂಗಳೂರಿಗೆ ವರ್ಗಾವಣೆ ಆಗಿರುವುದು ತುಂಬಾ ಬೇಸರ ಆಗಿದೆ. ಆದರೂ ಅವರು ಅವರ ಮಕ್ಕಳ ಹತ್ತಿರ ಹೋಗುತಿದ್ದಾರೆ. ರಾಜಧಾನಿಯಲ್ಲಿದ್ದು, ದಾವಣಗೆರೆಯ ಹೆಸರು ಉಳಿಯುವಂತೆ ಅವರು ಕನ್ನಡ ಕಾರ್ಯ ಮಾಡುತ್ತಾರೆ ಎಂಬ ನಂಬಿಕೆ ನಮಗಿದೆ. ನಮ್ಮ ಜಿಲ್ಲೆಯ ಕನ್ನಡ ರತ್ನ ರಾಜಧಾನಿಯಲ್ಲಿ ಬೆಳಗಲಿ ಎಂದು ಶುಭ ಹಾರೈಸಿದರು.
ಕೆ. ಸಿ. ಶ್ರೀನಿವಾಸ್, ಮುಖ್ಯ ಶಿಕ್ಷಕರು ಹೊನ್ನಮರಡಿ:
ನಮ್ಮ ದಾವಣಗೆರೆ ಜಿಲ್ಲೆಯ ಅನನ್ಯ ಕನ್ನಡ ಭಾಷಾ ಶಿಕ್ಷಕಿ ಎ. ಸಿ. ಶಶಿಕಲಾ ಅವರಿಗೆ ದಾವಣಗೆರೆ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಪರವಾಗಿ ಶುಭಾಶಯಗಳನ್ನು ಕೋರುತ್ತೇವೆ. ಅವರು ಎಲ್ಲಿದ್ದರೂ ನೂರ್ಕಾಲ ಸುಖವಾಗಿದ್ದು, ಅವರ ಕನ್ನಡ ಬದುಕು ಬೆಳಗಲಿ ಎಂದು ಹಾರೈಸುತ್ತೇವೆ ಎಂದು ದಾವಣಗೆರೆ ತಾಲೂಕಿನ ಹೊನ್ನಮರಡಿಯ ಆಂಜನೇಯ ನಗರದ ಮಾರುತಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಕೆ. ಸಿ. ಶ್ರೀನಿವಾಸ್ ಹಾರೈಸಿದರು.