SUDDIKSHANA KANNADA NEWS/DAVANAGERE/DATE:28_10_2025
ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆಗಳನ್ನು ಹತ್ತಿಕ್ಕುವ ಏಕೈಕ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ತಡೆಯಾಜ್ಞೆ ನೀಡಿರುವ ರಾಜ್ಯ ಉಚ್ಛ ನ್ಯಾಯಾಲಯದ ಆದೇಶ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಘನತೆಗೆ ಸಂದ ಗೌರವವಾಗಿದೆ. ಆರ್ ಎಸ್ ಎಸ್ ಗೆ ಕಡಿವಾಣ ಹಾಕುವ ಕಾಂಗ್ರೆಸ್ ತಂತ್ರ ಫಲಿಸದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಹೇಳಿದ್ದಾರೆ.
ಲಕ್ಷಾಂತರ ಜನರ ತ್ಯಾಗ, ಬಲಿದಾನದಿಂದ ಈ ದೇಶಕ್ಕೆ ಸ್ವಾತಂತ್ರ್ಯ ದೊರಕಿತು. ಆದರೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪಕ್ಷ ಎಂದು ಬೊಗಳೆ ಬಿಡುವ ನಕಲಿ ಕಾಂಗ್ರೆಸ್, ಸ್ವಾತಂತ್ರ್ಯಾ ನಂತರ ಪ್ರಜಾಪ್ರಭುತ್ವದ ಕತ್ತು ಹಿಸುಕುವ ಪ್ರಯತ್ನವನ್ನು ನಿರಂತರವಾಗಿಸಿಕೊಂಡಿದೆ ಎಂದು
ಹೇಳಿದ್ದಾರೆ.
READ ALSO THIS STORY: ದಾವಣಗೆರೆ ಸಿದ್ಧಗಂಗಾ ವಿದ್ಯಾ ಸಂಸ್ಥೆಯ ವಿದ್ಯಾರ್ಥಿ ಗಿರೀಶ್ ಆರ್. ನೇಸರ್ಗಿ ಅದ್ವಿತೀಯ ಸಾಧನೆ
1970ರ ದಶಕದ ತುರ್ತು ಪರಿಸ್ಥಿತಿ ದೇಶದ ಇತಿಹಾಸದ ಪುಟಗಳಲ್ಲಿ ಕರಾಳ ದಿನಗಳನ್ನು ಹಚ್ಚೊತ್ತಿದೆ, ತುರ್ತು ಪರಿಸ್ಥಿತಿಯ ನೆರಳಿನಲ್ಲನ್ನು ಈಗಲೂ ಹಿಂಬಾಲಿಸುವ ಕಾಂಗ್ರೆಸ್ಸಿಗರು ತಾವು ಅಧಿಕಾರಕ್ಕೆ ಬಂದ ಸಂದರ್ಭದಲ್ಲೆಲ್ಲಾ ಪ್ರಜಾಪ್ರಭುತ್ವದ ಮೇಲೆ ದೌರ್ಜನ್ಯ ನಡೆಸುವುದು, ಸಂವಿಧಾನಕ್ಕೆ ಅಪಚಾರ ಎಸಗುವುದು, ಸರ್ವಾಧಿಕಾರಿ ಧೋರಣೆಯನ್ನು ವಿಜೃಂಭಿಸುವುದನ್ನು ಕರಗತ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಅದರ ಮುಂದುವರಿದ ಭಾಗವಾಗಿ ಶತಮಾನ ಪೂರೈಸಿರುವ RSS ಈವರೆಗೂ ಒಂದು ಸಣ್ಣ ಅಹಿತಕರ ಘಟನೆಗೂ ಅವಕಾಶ ಕೊಡದೆ ಸಂಘಟಿಸುತ್ತಿರುವ ಶತಮಾನದ ಸಂಭ್ರಮಾಚರಣೆಯ ಯಶಸ್ಸನ್ನು ನೋಡಿ ವಿಪರೀತ ಹತಾಶೆಗೊಂಡಿರುವ ಕಾಂಗ್ರೆಸ್ಸಿಗರು ಪಥಸಂಚಲನ ಹಾಗೂ ಚಟುವಟಿಕೆಗಳನ್ನು ನಿರ್ಬಂಧಿಸುವ ದುರುದ್ದೇಶದಿಂದ ಹೊರಡಿಸಿದ ‘ಸಾರ್ವಜನಿಕ ಸ್ಥಳಗಳಲ್ಲಿ ಖಾಸಗಿ ಸಂಘ- ಸಂಸ್ಥೆಗಳ ಚಟುವಟಿಕೆಗಳ ಮೇಲೆ ನಿಯಂತ್ರಣ ಸಾಧಿಸುವ’ ಕಾಂಗ್ರೆಸ್ ಸರ್ಕಾರದ ನಿರ್ಧಾರಕ್ಕೆ ಘನ ನ್ಯಾಯಾಲಯದಲ್ಲಿ ಹಿನ್ನಡೆಯಾಗುವ ಮೂಲಕ ಮುಖಭಂಗವುಂಟಾಗಿದೆ ಎಂದು ಹೇಳಿದ್ದಾರೆ.
ಇನ್ನಾದರೂ ಈ ಸರ್ಕಾರ ಬುದ್ದಿ ಕಲಿಯಲಿ. ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಪ್ರಜಾಪ್ರಭುತ್ವವನ್ನು ಉಸಿರುಗಟ್ಟಿಸುವ ಪ್ರಯತ್ನಗಳಿಗೆ ಕೈ ಹಾಕುವ ವ್ಯರ್ಥ ಪ್ರಯತ್ನವನ್ನು ನಿಲ್ಲಿಸಲಿ ಎಂದು ಆಗ್ರಹಿಸುವೆ ಎಂದು ವಿಜಯೇಂದ್ರ ಗುಡುಗಿದ್ದಾರೆ.








