SUDDIKSHANA KANNADA NEWS/ DAVANAGERE/ DATE:26-12-2023
ದಾವಣಗೆರೆ: ರೈತರ ಬಗ್ಗೆ ಹಗುರ ಹಾಗೂ ಕೇವಲವಾಗಿ ಮಾತನಾಡಿರುವ ಸಚಿವ ಶಿವಾನಂದ ಪಾಟೀಲ್ ಅವರನ್ನು ಕೂಡಲೇ ಸಚಿವ ಸ್ಥಾನದಿಂದ ಕೆಳಗಿಳಿಸಬೇಕು. ಬೆಳೆ ಪರಿಹಾರ, ಸಾಲ ಮನ್ನಾ ಆಗುತ್ತದೆ ಎಂಬ ಕಾರಣಕ್ಕಾಗಿ ಮೇಲಿಂದ ಮೇಲೆ ಬರ ಬರಲಿ ಎಂದು ರೈತರು ಆಶಿಸುತ್ತಾರೆ ಎಂಬ ಉಡಾಫೆ ಮಾತು ಆಡುವ ಮೂಲಕ ರೈತ ಸಮುದಾಯ ಅವಮಾನಿಸಿದ್ದು, ಕೂಡಲೇ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ರೈತ ಒಕ್ಕೂಟದ ಮುಖಂಡ ಕೊಳೇನಹಳ್ಳಿ ಸತೀಶ್ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಗೆ ಸಾಮಾನ್ಯ ಜ್ಞಾನ ಇಲ್ಲವೆಂದು ಕಾಣಿಸುತ್ತದೆ. ರೈತರನ್ನು ಅವಮಾನಿಸಿದ್ದಾರೆ. ಇದು ಅವರ ರೈತ ವಿರೋಧಿ ಮನಸ್ಥಿತಿ. ಇಂತಹ ಸಚಿವರನ್ನು ತಕ್ಷಣ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಈ ಹಿಂದೆ ಶಿವಾನಂದ ಪಾಟೀಲ್, 5 ಲಕ್ಷ ಪರಿಹಾರದ ಆಸೆಗಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದು ಹೆಚ್ಚಾಗುತ್ತಿದೆ ಎಂದು ಅನ್ನದಾತನ ಜೀವನವನ್ನು ಅಣಕ ಮಾಡಿದ್ದರು. ರೈತರನ್ನು ಕೀಳಾಗಿ ಕಾಣುವುದು ಇವರ ಸಂಸ್ಕೃತಿಗೆ ಖಂಡನೀಯ. ಇತ್ತೀಚೆಗೆ ಹೈದರಾಬಾದ್ ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಲಕ್ಷ್ಮೀ ಎಂದು ರೈತರು ಪೂಜಿಸುವ ನೋಟುಗಳನ್ನು ಮೈಮೇಲೆ ತೂರಿಸಿಕೊಂಡು, ಅವರ ಕಾಲುಗಳ ಬೂಟು ಅಡಿ ನೋಟುಗಳು ಬಿದ್ದಿರುವ ವಿಡಿಯೋ ಬಹಳಷ್ಟು ವೈರಲ್ ಆಗಿತ್ತು. ಸದಾ ಮೋಜು ಮಸ್ತಿಯಲ್ಲಿ ಮುಳುಗೋ ಈ ಸಚಿವರಿಗೆ ಬರಗಾಲದಿಂದ ತತ್ತರಿಸಿರುವ ರೈತರ ಸಂಕಷ್ಟ ಅರ್ಥವಾಗುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ 123 ವರ್ಷಗಳಲ್ಲಿ ಕಂಡರಿಯದ ಭೀಕರ ಬರ ತಲೆದೋರಿದ್ದು ರಾಜ್ಯದಲ್ಲಿ 48.17 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ಸಮೀಕ್ಷೆ ಹೇಳಿದೆ. ಆದರೂ ರಾಜ್ಯದ ಕಾಂಗ್ರೆಸ್ ಸರ್ಕಾರ ಬರ ಪರಿಹಾರ ನೀಡಿ ರೈತರ ಸಂಕಷ್ಟಕ್ಕೆ ಧಾವಿಸಿಲ್ಲ. ರೈತರಿಗೆ ಧೈರ್ಯ ಹೇಳಿ ವಿಶ್ವಾಸ ಮೂಡಿಸುವ ಬದಲು ಅಧಿಕಾರದ ಅಮಲಿನಲ್ಲಿ ತೇಲಾಡುತ್ತಿರುವುದು ಅಹಂಕಾರದ ಪರಮಾವಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬರ ಪರಿಹಾರ ಕೇಳಲು ದೆಹಲಿಗೆ ಹೋದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಕಂದಾಯ ಸಚಿವ ಕೃಷ್ಣ ಭೈರೇಗೌಡ, ವಸತಿ ಸಚಿವ ಜಮೀರ್ ಅಹಮದ್ ರವರು ಐಷಾರಾಮಿ ಜೆಟ್ ವಿಮಾನದಲ್ಲಿ ಪ್ರಯಾಣಿರುವುದು ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ಮನಸ್ಥಿತಿ ಹೊಂದಿರುವುದನ್ನು ತೋರಿಸುತ್ತದೆ. ದುರಾಂಹಕಾರಿ, ಅಧಿಕಾರದ ಅಮಲಿನಲ್ಲಿರುವ ಶಿವಾನಂದ ಪಾಟೀಲ್ರಂತಹ ಸಚಿವರು ನಾಟಕವಾಡಿ ಕಣ್ಣೀರು ಭರಿಸಿಕೊಳ್ಳಬಹುದು. ಆದರೆ ಹಗಲಿರುಳು ಕಷ್ಟಪಟ್ಟು ಬೆವರು ಸುರಿಸುವ ರೈತನ ಬೆವರು ಭರಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ಕಾಂಗ್ರೇಸ್ ಸರ್ಕಾರದ ಎಲ್ಲಾ ಸಚಿವರು ಅರಿಯಬೇಕು ಎಂದರು.
ಒಂದು ವಾರದೊಳಗೆ ಸಚಿವ ಶಿವಾನಂದ ಪಾಟೀಲ್ರನ್ನು ರಾಜ್ಯ ಸಚಿವ ಸಂಪುಟದಿಂದ ವಜಾಗೊಳಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ರೈತರು ತೀವ್ರ ಹೋರಾಟ ಮಾಡಲಾಗುವುದು. ಇದಲ್ಲದೇ ವಿಳಂಬ ಧೋರಣೆ ಬದಿಗಿರಿಸಿ, ಬರ ಪರಿಹಾರವನ್ನು ರೈತರ ಬ್ಯಾಂಕ್ ಖಾತೆಗಳಿಗೆ ತಕ್ಷಣ ಜಮಾ ಮಾಡಬೇಕು. ಕೃಷಿ ಸಚಿವ ಕೃಷ್ಣ ಭೈರೇಗೌಡ್ರ ಕಳೆದ ಒಂದು ತಿಂಗಳಿನಿಂದ ಫ್ರೂಟ್ ದತ್ತಾಂಶ ಎಂದು ಇಲ್ಲಸಲ್ಲದ ಹೇಳಿಕೆ ನೀಡುತ್ತಾ ಕಾಲಹರಣ ಮಾಡುತ್ತಿದ್ದಾರೆ. ಇದು ಸರ್ಕಾರದ ರೈತ ವಿರೋಧಿ ಧೋರಣೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗೋಷ್ಟಿಯಲ್ಲಿ ಬೆಳವನೂರು ನಾಗೇಶ್ವರರಾವ್, ಧನಂಜಯ ಕಡ್ಲೇಬಾಳು, ರಾಜಶೇಖರ ನಾಗಪ್ಪ, ಆರನೇಕಲ್ಲು ವಿಜಯಕುಮಾರ್, ವಾಸನ ಬಸವರಾಜಪ್ಪ, ಗೋಪನಾಳು ಕರಿಬಸಪ್ಪ, ಚಿಕ್ಕಬೂದಿಹಾಳು ಭಗತ್ ಸಿಂಗ್, ಮಳಲ್ಕರೆ ಎಂ.ಕಲ್ಲಪ್ಪ, ಕನಗೊಂಡನಹಳ್ಳಿ ನಿಂಗಪ್ಪ ಇತರರು ಉಪಸ್ಥಿತರಿದ್ದರು.