SUDDIKSHANA KANNADA NEWS/ DAVANAGERE/ DATE:03-11-2023
ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರದ ಈ ಐದು ತಿಂಗಳ ಆಡಳಿತದಲ್ಲಿ ನಡೆದಿದ್ದು ಐವತ್ತಕ್ಕೂ ಹೆಚ್ಚು ಒಳಜಗಳ, ಕುರ್ಚಿಗಾಗಿ ಕಿತ್ತಾಟ, ಕಲೆಕ್ಷನ್ಗಾಗಿ ಬಡಿದಾಟ, ಕಮಿಷನ್ಗಾಗಿ ಚೌಕಾಸಿ, ವರ್ಗಾವಣೆಗಾಗಿ ಕಿತ್ತಾಟ ಎಂದು ಬಿಜೆಪಿ ರಾಜ್ಯ ಘಟಕವು ಲೇವಡಿ ಮಾಡಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿಯು ಸ್ವಾಧೀನ ಕಳೆದುಕೊಂಡಿರುವ ಕಾಂಗ್ರೆಸ್ ಪಕ್ಷದ ಕಲೆಕ್ಷನ್ ಏಜೆಂಟರು ರಾಜ್ಯಕ್ಕೆ ಬಂದು ಎಷ್ಟೇ ತೇಪೆ ಹಚ್ಚಿದರೂ ಒಳಜಗಳ ಎಂಬ ಗಾಯ ಮಾತ್ರ ವಾಸಿಯಾಗುವ ಬದಲು ದಿನೇ ದಿನೇ ಉಲ್ಬಣವಾಗುತ್ತಿದೆ. ಅವರು ಬಂದದ್ದು ಒಳಜಗಳ ಶಮನಕ್ಕಿಂತ ಹೆಚ್ಚಾಗಿ #ATMSarkara ದ ಕಲೆಕ್ಷನ್ ಪಾಲು ಕೊಂಡೊಯ್ಯಲು ಎಂಬುದನ್ನು ಕಾಂಗ್ರೆಸ್ ಶಾಸಕರು ಮತ್ತು ಸಚಿವರ ಹೇಳಿಕೆಗಳೇ ಸ್ಪಷ್ಟಪಡಿಸುತ್ತಿವೆ ಎಂದು ಹೇಳಿದೆ.
ಮೊದಲು ಶಾಸಕ ಮತ್ತು ಸಚಿವರ ನಡುವಿದ್ದ ಜಗಳ ಈಗ ಸಿಎಂ ಕುರ್ಚಿವರೆಗೂ ಬಂದು ನಿಂತಿದೆ. ಸಿಎಂ ಸಿದ್ದರಾಮಯ್ಯ ಅವರ ನಾಯಕತ್ವವು ರಾಜ್ಯದ ಆರೂವರೆ ಕೋಟಿ ಕನ್ನಡಿಗರಿಗೆ ಮಾತ್ರವಲ್ಲದೇ ಶಾಸಕರಿಂದ ಹಿಡಿದು ಸಚಿವರವರೆಗೂ ಅತೃಪ್ತಿ ತಂದಿರುವುದು ಸುಳ್ಳಲ್ಲ. ಈ ಕಾರಣಕ್ಕಾಗಿ ಸಿಎಂ ಕುರ್ಚಿ ಅಲಂಕರಿಸಿದ ಐದು ತಿಂಗಳೊಳಗೆ ಸಿಎಂ ಸ್ಥಾನದಿಂದ ಸಿದ್ದರಾಮಯ್ಯರವರನ್ನು ಇಳಿಸಬೇಕು ಎಂಬ ಚರ್ಚೆಗಳು ಕಾಂಗ್ರೆಸ್ನ ಪಡಸಾಲೆಯಲ್ಲಿಯೇ ಕೇಳಿ ಬರುತ್ತಿರುವುದು ಇದಕ್ಕೆ ಸಾಕ್ಷಿ. ಬಹುಶಃ ಸಿಎಂ ಸ್ಥಾನ ಏರಿದ ಐದು ತಿಂಗಳೊಳಗೆ ಮುಖ್ಯಮಂತ್ರಿಯೊಬ್ಬರು ಜನರಿಂದ ಹಾಗೂ ಸರ್ವಪಕ್ಷೀಯ ಶಾಸಕರಿಂದ ಅವಿಶ್ವಾಸ ಎದುರಿಸುತ್ತಿರುವುದು ಕರ್ನಾಟಕದ ಇತಿಹಾಸದಲ್ಲಿ ಇದೇ ಮೊದಲು ಎಂದು ಹೇಳಿದೆ.
ಕಾಂಗ್ರೆಸ್ ಶಾಸಕರಿಂದ ವಿರೋಧ ವ್ಯಕ್ತವಾದ ತತ್ಕ್ಷಣವೇ ತಮ್ಮ ಆಪ್ತರಿಂದ ಸಿಎಂ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿಯಿಲ್ಲ ಎಂದೂ ಹೇಳಿಸಿದರೂ ಅದಕ್ಕೆ ವ್ಯಕ್ತವಾದ ಬೆಂಬಲ ಅಷ್ಟಕ್ಕಷ್ಟೇ. ಹೀಗಾಗಿ ಈಗ ತಾವೇ ಖುದ್ದು ಫೀಲ್ಡಿಗಿಳಿದು ಮುಂದಿನ ಐದು ವರ್ಷ ನಾನೇ ಸಿಎಂ ಎಂದು ಹೇಳಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯರವರೇ ಮುಂದಿನ ಐದು ವರ್ಷ ಮುಖ್ಯಮಂತ್ರಿಯಾಗಿರಲಿ ಎಂದು ಹೇಳಿದವರ ಸಂಖ್ಯೆ ಬೆರಳೆಣಿಕೆಯಷ್ಟು. ಅಲ್ಲಿಗೆ ಸಿದ್ದರಾಮಯ್ಯರವರು ಸಿಎಂ ಆಗಿ ಸಂಪೂರ್ಣ ನಪಾಸು ಎನ್ನುವುದಕ್ಕೆ ಯಾವುದೇ ಅಡ್ಡಿಯಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಸಿಎಂ ಸಿದ್ದರಾಮಯ್ಯರವರ ನಾಯಕತ್ವ ಬದಲಾವಣೆ ಅತೀ ಶೀಘ್ರದಲ್ಲಿ ಆಗಲಿದೆ ಎಂಬುದಕ್ಕೆ ಮತ್ತೊಂದು ಪೂರಕ ಅಂಶವೆಂದರೆ, #TrollMinister ಪ್ರಿಯಾಂಕ್ ಖರ್ಗೆ ಅವರು ಹೈಕಮಾಂಡ್ ಒಪ್ಪಿದರೆ, ಸಿಎಂ ಸ್ಥಾನ ಅಲಂಕರಿಸಲು
ಸಿದ್ದ ಎಂದು ಹೇಳಿರುವುದು. ಸಿಎಂ ಆಗಿ ಎಂದು ಯಾರೂ ಹೇಳದಿದ್ದರೂ ಪ್ರಿಯಾಂಕ್ ಖರ್ಗೆಯವರಿಗೆ ತಾನೇ ಸಿಎಂ ಆಗುವ ಬಯಕೆ. ಒಬ್ಬರಾದ ಮೇಲೊಬ್ಬರು ಈ ರೀತಿ ಬಯಕೆ ವ್ಯಕ್ತಪಡಿಸುತ್ತಿರುವುದಕ್ಕೆ ಕಾರಣ ಇನ್ನೇನಿಲ್ಲ, ಕರ್ನಾಟಕದ ಸಿಎಂ
ಕುರ್ಚಿ ಬದಲಾಯಿಸಲು ಹೈಕಮಾಂಡ್ ನಿರ್ಧಾರ ಮಾಡಿರುವುದರ ವಾಸನೆ ಕೆಲವರ ಮೂಗಿಗೆ ಬಡಿದಿದೆ ಎಂದು ತಿಳಿಸಿದೆ.
ರಾಜ್ಯದೆಲ್ಲೆಡೆ ಬರ, ಅರಾಜಕತೆ ತಾಂಡವವಾಡುತ್ತಿದೆ. ಕೂಲಿ ಕಾರ್ಮಿಕರು ಅನ್ಯ ರಾಜ್ಯಗಳಿಗೆ ಗುಳೆ ಹೋಗುತ್ತಿದ್ದಾರೆ. ಕುಡಿಯುವ ನೀರಿಗೂ ಸಹ ಅಭಾವ ಸೃಷ್ಟಿಯಾಗಿದೆ. ರಾಜ್ಯದಲ್ಲಿ ಒಂದೇ ಒಂದು ಪೈಸೆಯಷ್ಟೂ ಸಹ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ನಾನೇ ಸಿಎಂ ಎಂದು ಸಿದ್ದರಾಮಯ್ಯರವರು ಹೇಳಿದ್ದಕ್ಕಿಂತ ಜೋರಾಗಿ ಡಿ. ಕೆ. ಶಿವಕುಮಾರ್ ಅವರೇ ಮುಂದಿನ ಸಿಎಂ ಎಂದು ಅವರು ಬೇರೆಯವರಿಂದ ಹೇಳಿಸಿ ಶಕ್ತಿ ಪ್ರದರ್ಶನಕ್ಕೆ ಇಳಿದಿದ್ದಾರೆ. ಮಂತ್ರಿ ಮಂಡಲವಿಡೀ ಈ ಸರ್ಕಸ್ಸಿನಲ್ಲೇ ಭಾಗಿಯಾಗಿರುವುರಿಂದ ಕರ್ನಾಟಕದಲ್ಲಿ ಅಭಿವೃದ್ಧಿ ಒತ್ತಟ್ಟಿಗಿರಲಿ, ಆಡಳಿತ ವ್ಯವಸ್ಥೆಯೇ ಹಳ್ಳ ಹಿಡಿಯುತ್ತಿದೆ ಎಂದು ಆರೋಪಿಸಿದೆ.