SUDDIKSHANA KANNADA NEWS/ DAVANAGERE/ DATE:27_07_2025
ದಾವಣಗೆರೆ: ಇಲ್ಲಿನ ನಿಜಲಿಂಗಪ್ಪ ಬಡಾವಣೆ 1ನೇ ಮುಖ್ಯರಸ್ತೆಯ ಶೆಡ್ ಒಂದರಲ್ಲಿ ಅಕ್ರಮವಾಗಿ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಪಡಿತರ ಚೀಟಿದಾರರಿಗೆ ನೀಡಲಾದ ಅಕ್ಕಿ ಸಂಗ್ರಹಿಸಲಾಗಿದೆ ಎಂದು ಸಾರ್ವಜನಿಕರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಆಹಾರ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ಅಕ್ಕಿ ಮತ್ತು ರಾಗಿಯನ್ನು ವಶಪಡಿಸಿಕೊಂಡಿದ್ಧಾರೆ.
READ ALSO THIS STORY: ತುಂಗಭದ್ರ ನದಿಯಲ್ಲಿ 1.12 ಲಕ್ಷ ಕ್ಯೂಸೆಕ್ಸ್ ನೀರು: ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ ನದಿ, ಹೆಲ್ಪ್ ಲೈನ್ ನಂಬರ್ ಇಲ್ಲಿದೆ ನೋಡಿ!
ದಾವಣಗೆರೆ ನಗರ ಆಹಾರ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಎನ್.ವಿಶ್ವನಾಥಗೌಡ, ಆಹಾರ ನಿರೀಕ್ಷಕ ಟಿ.ಮಂಜುನಾಥ, ಜೆ.ನಾಗೇಂದ್ರ ಇವರ ತಂಡವು ಬಡಾವಣೆ ಠಾಣೆ ಪೋಲೀಸರೊಂದಿಗೆ ದಾಳಿ ಮಾಡಿ ಅಕ್ರಮ ಅಕ್ಕಿ ಹಾಗೂ ರಾಗಿ ದಾಸ್ತಾನು ಪತ್ತೆ ಮಾಡಿ ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ತನಿಖೆ ನಡೆಸುವಂತೆ ಆಹಾರ ನಿರೀಕ್ಷಕ ಟಿ.ಮಂಜುನಾಥ ಬಡಾವಣೆ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೋಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಶೆಡ್ ಗೋದಾಮಿನಿಂದ 89.77 ಕ್ವಿಂಟಾಲ್ ಅಕ್ಕಿ ಹಾಗೂ 6.80 ಕ್ವಿಂಟಾಲ್ ರಾಗಿ ವಶಪಡಿಸಿಕೊಳ್ಳಲಾಗಿದೆ ಎಂದು ಆಹಾರ ಇಲಾಖೆ ತಿಳಿಸಿದೆ.