SUDDIKSHANA KANNADA NEWS/ DAVANAGERE/ DATE-19-06-2025
ಬೆಂಗಳೂರು: ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಬಹುಮನಿ ಸುಲ್ತಾನರ ಕಾಲದ ಆಳ್ವಿಕೆಯನ್ನು ಮರು ಸ್ಥಾಪಿಸಲು ಹೊರಟಂತಿದೆ. ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಧರ್ಮದ ಹೆಸರಿನಲ್ಲಿ ಮುಸ್ಲಿಂಮರಿಗೆ ಶಿಕ್ಷಣ, ಉದ್ಯೋಗ, ರಾಜಕೀಯ ಮೀಸಲಾತಿ ಕಲ್ಪಿಸಿ ನಂತರ ಸರ್ಕಾರಿ ಗುತ್ತಿಗೆ ಕಾಮಗಾರಿಗಳ ಹಂಚಿಕೆಯಲ್ಲಿಯೂ ಮೀಸಲಾತಿ ನಿಗದಿಪಡಿಸಲಾಗಿತ್ತು, ಇದೀಗ ವಸತಿ ಸೌಲಭ್ಯ ಕಲ್ಪಿಸುವುದರಲ್ಲಿಯೂ ಮೀಸಲಾತಿ ಹೆಚ್ಚಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಭುತ್ವದ ತತ್ವ-ಸರ್ವರಿಗೂ ಸಮಾನತೆ, ಸಂವಿಧಾನದ ಆಶಯ-ವರ್ಗ ತಾರತಮ್ಯಕ್ಕೆ ಅವಕಾಶ ನೀಡದಿರುವುದು, ಇವೆರಡನ್ನೂ ಗಾಳಿಗೆ ತೂರಿರುವ ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ವಿಪರೀತ ಎನ್ನುವಂತೆ ಮುಸ್ಲಿಂ ಸಮುದಾಯವನ್ನು ಓಲೈಸಲು ಟೊಂಕ ಕಟ್ಟಿ ನಿಂತಿದೆ ಎಂದು ಕಿಡಿಕಾರಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯರ ನೇತೃತ್ವದ ಕಾಂಗ್ರೆಸ್ ಸರ್ಕಾರ ಕರ್ನಾಟಕದ ಆರೂವರೆ ಕೋಟಿ ಕನ್ನಡಿಗರ ಸಮಗ್ರ ಕಲ್ಯಾಣವನ್ನು ಸಂಪೂರ್ಣ ಮರೆತಿದೆ, ಚುನಾವಣೆಯಲ್ಲಿ ಗೆದ್ದು ಬರುವಾಗ ‘ನಮ್ಮದು ಜಾತ್ಯಾತೀತ ತತ್ವ ಎಂದು
ಬೊಗಳೆ ಬಿಡುತ್ತಿದ್ದ ಕಾಂಗ್ರೆಸ್ಸಿಗರು “ನಮ್ಮದೇನಿದ್ದರೂ ಮುಸ್ಲಿಂ ಸಮುದಾಯದ ಉತ್ತೇಜನದ ಆಡಳಿತ” ಎನ್ನುವುದನ್ನೀಗ ಪ್ರತಿಬಿಂಬಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಸರ್ಕಾರ ಎಂದೂ ಇಂತಹ ತಾರತಮ್ಯಕ್ಕೆ ಅವಕಾಶ ಕೊಡಲಿಲ್ಲ, ಕರ್ನಾಟಕದಲ್ಲಿ ‘ಸರ್ವರಿಗೂ ಸಮಬಾಳು- ಸರ್ವರಿಗೂ ಸಮಪಾಲಿನ’ಆಡಳಿತ ನೀಡಿದೆ. ಕೇಂದ್ರದ ಹೆಮ್ಮೆಯ ನರೇಂದ್ರ ಮೋದಿ ಜೀ ಅವರ ಸರ್ಕಾರ ಇಂದಿಗೂ ಕೂಡ ವರ್ಗ ಬೇಧಕ್ಕೆ ಅವಕಾಶ ನೀಡದಂತೆ ಎಲ್ಲರನ್ನೂ ಒಳಗೊಂಡ ಯೋಜನೆಗಳನ್ನು ರೂಪಿಸಿದೆ, ಜಾರಿಗೊಳಿಸುತ್ತಿದೆ, ಆದರೆ ಕರ್ನಾಟಕದಲ್ಲಿ ಏಕೆ ಹೀಗೆ ?ಎಂದು ಜನ ಪ್ರಶ್ನಿಸುತ್ತಿದ್ದಾರೆ. ಇಂದು ಸಂಪುಟ ತೆಗೆದುಕೊಂಡಿರುವ ವಸತಿ ಯೋಜನೆಯಲ್ಲಿ ಮುಸ್ಲಿಂ ಮೀಸಲಾತಿಯ ಹೆಚ್ಚಳವನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದಿದ್ದಾರೆ.
ನಿರಂತರ ವೈಫಲ್ಯಗಳು, ಮೇಲಿಂದ ಮೇಲೆ ಹೊರ ಬರುತ್ತಿರುವ ಹಗರಣಗಳು, ಭ್ರಷ್ಟಾಚಾರಗಳು ಹಾಗೂ ಹೊಣೆಗೇಡಿತನದ ಆಡಳಿತದ ಪರಿಣಾಮ ಕ್ರಿಕೆಟ್ ಕಾಲ್ತುಳಿತದಲ್ಲಿ ಜನರು ಸಾವು,ನೋವು ಅನುಭವಿಸಿದ ರಾಜ್ಯ ಕಂಡ ಬಹುದೊಡ್ಡ ದುರಂತದ ಪ್ರಕರಣದಿಂದ ಜನರ ದೃಷ್ಟಿ ಬೇರೆಡೆ ಸೆಳೆಯಲು ಇಂತಹ ನಿರ್ಧಾರಗಳನ್ನು ಕಾಂಗ್ರೆಸ್ ಸರ್ಕಾರ ತೆಗೆದುಕೊಳ್ಳುತ್ತಿದೆ. ಇದನ್ನು ಸಹಿಸಿಕೊಂಡು ಕೂರುವ ಪ್ರಶ್ನೆಯೇ ಇಲ್ಲ, ಭಾರತೀಯ ಜನತಾ ಪಾರ್ಟಿಯು ಜನಾಕ್ರೋಶವನ್ನು ಬೆಂಬಲಿಸಿ ತನ್ನ
ಹೋರಾಟವನ್ನು ಮುಂದುವರಿಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.