SUDDIKSHANA KANNADA NEWS/ DAVANAGERE/ DATE-15-05-2025
ಪಾಕಿಸ್ತಾನವು ತನ್ನೊಡಲಿನ ಭಯೋತ್ಪಾದನೆ ನಿಲ್ಲಸದ ಹೊರತು ಸಿಂಧೂನಲ ಜಲ ಒಪ್ಪಂದ ಸ್ಥಗಿತವಾಗಿರಲಿದೆ. ಯಾವುದೇ ಕಾರಣಕ್ಕೂ ವಾಪಸ್ ಪಡೆಯುವುದಿಲ್ಲ ಎಂದು ಭಾರತವು ಸ್ಪಷ್ಟ ಸಂದೇಶ ಕೊಟ್ಟಿದೆ. ಈ ಮೂಲಕ ಉಗ್ರರ ಕಾರಾಸ್ಥಾನ ಪಾಕಿಸ್ತಾನಕ್ಕೆ ಭಾರೀ ಮುಖಭಂಗ ಆಗಿದೆ.
ಪಾಕಿಸ್ತಾನ ಗಡಿಯಾಚೆಗಿನ ಭಯೋತ್ಪಾದನೆ ನಿಲ್ಲಿಸದಿದ್ದರೆ ಭಾರತದ ಸಂಹಾರ ಮುಂದುವರಿಯಲಿದೆ. ಯಾವುದೇ ಕಾರಣಕ್ಕೂ ಬಗ್ಗುವ ಪ್ರಶ್ನೆಯೇ ಇಲ್ಲ. ನೀರು ಕೊಡಿ ಎಂದು ಎಷ್ಟೇ ಅಂಗಲಾಚಿದರೂ ಹರಿಸಲು ಆಗದು ಎಂದು ತಿಳಿಸಿದೆ.
ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಸಿಂಧೂ ಜಲ ಒಪ್ಪಂದ ರದ್ದುಗೊಳಿಸಿರುವ ಕುರಿತಂತೆ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ. ಭಯೋತ್ಪಾದನೆ ಸಂಹಾರಕ್ಕೆ ಪಾಕ್ ಮುಂದಾಗಲೇಬೇಕು. ಆಮೇಲೆ ಏನಿದ್ದರೂ ಉಳಿದ ವಿಷಯಗಳ ಕುರಿತ ಚರ್ಚೆ ಎಂದಿದ್ದಾರೆ.
ನವದೆಹಲಿಯಲ್ಲಿ ಹೊಂಡುರಾಸ್ ರಾಯಭಾರ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಜೈಶಂಕರ್, ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ನಿಲುವು ಸ್ಪಷ್ಟವಾಗಿದೆ. ಪಾಕಿಸ್ತಾನದ ವಿರುದ್ಧದ ಪ್ರತೀಕಾರದ ಮಿಲಿಟರಿ ಕಾರ್ಯಾಚರಣೆಯಾದ ಆಪರೇಷನ್ ಸಿಂದೂರ್ ಸಮಯದಲ್ಲಿ ಭಾರತಕ್ಕೆ ಅಂತರರಾಷ್ಟ್ರೀಯ ಬೆಂಬಲ ಸಿಕ್ಕಿತು. ಇದು ಖುಷಿಯ ವಿಚಾರ ಎಂದು ತಿಳಿಸಿದ್ದಾರೆ.
“ನಮಗೆ ನಿಜವಾಗಿಯೂ ಅಂತರರಾಷ್ಟ್ರೀಯ ಬೆಂಬಲ ಸಿಕ್ಕಿತು. ಉಗ್ರರ ಸಂಹಾರಕ್ಕೆ ನಿರ್ಧರಿಸಿದ್ದ ವಿಚಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯದಂತೆ ತೆಗೆದುಕೊಂಡಿದ್ದಾಗಿದೆ. ಆಪರೇಷನ್ ಸಿಂದೂರ್ ಮೂಲಕ ಉಗ್ರಗಾಮಿಗಳ ಸೊಕ್ಕು ಅಡಗಿಸಿದ್ದೇವೆ ಎಂದು ಹೇಳಿದ್ದಾರೆ.
ಕಾಶ್ಮೀರ ಮತ್ತು ಪಾಕಿಸ್ತಾನಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಮೂರನೇ ವ್ಯಕ್ತಿಯ ಹಸ್ತಕ್ಷೇಪಕ್ಕೆ ಆಸ್ಪದ ಕೊಡಲ್ಲ. “ಪಾಕಿಸ್ತಾನದೊಂದಿಗಿನ ನಮ್ಮ ಸಂಬಂಧಗಳು ಮತ್ತು ವ್ಯವಹಾರಗಳು ಕಟ್ಟುನಿಟ್ಟಾಗಿ ದ್ವಿಪಕ್ಷೀಯವಾಗಿರುತ್ತವೆ. ಅದು ವರ್ಷಗಳ ರಾಷ್ಟ್ರೀಯ ಒಮ್ಮತವಾಗಿದೆ ಮತ್ತು ಅದರಲ್ಲಿ ಯಾವುದೇ ಬದಲಾವಣೆಯಿಲ್ಲ” ಎಂದು ಪ್ರತಿಪಾದಿಸಿದ್ದಾರೆ.