SUDDIKSHANA KANNADA NEWS/ DAVANAGERE/ DATE:17-09-2023
ಕೊಲಂಬೊ:. ಕಳೆದ ಐದು ವರ್ಷಗಳಿಂದ ಎದುರಿಸುತ್ತಿದ್ದ ಪ್ರಶಸ್ತಿಯ ಬರ ನೀಗಿದೆ. ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಏಷ್ಯಾ ಕಪ್ (Asia Cup) ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಸೋಲಿಸುವ ಮೂಲಕ ಚಾಂಪಿಯನ್ ಆಗಿ ಭಾರತ ಹೊರ ಹೊಮ್ಮಿತು.
ಈ ಸುದ್ದಿಯನ್ನೂ ಓದಿ:
ಕೋಟ್ಯಂತರ ರೂ. ಒಡತಿ ಚೈತ್ರಾ ಕುಂದಾಪುರ (Kundapur) ಬಗ್ಗೆ ನಿಮಗೆಷ್ಟು ಗೊತ್ತು…? ಗೋವಿಂದ ಪೂಜಾರಿ ಹಿನ್ನೆಲೆ ಏನು..? ಕೇವಲ 9 ವರ್ಷಗಳಲ್ಲಿ ಬೆಳೆದಿದ್ದು, ಹಣ ಮಾಡಿದ್ದೇ ರೋಚಕ
ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಶ್ರೀಲಂಕಾ ಮೇಲೆಳದಂತೆ ಮಾಡಿತು. ಹತ್ತು ವಿಕೆಟ್ ಗಳ ಭರ್ಜರಿ ಜಯ ದಾಖಲಿಸುವ ಮೂಲಕ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಯಾವ ಹಂತದಲ್ಲಿಯೂ ಶ್ರೀಲಂಕಾ ತಂಡವು ಭಾರತಕ್ಕೆ ಸರಿಸಾಟಿಯಾಗಲೇ ಇಲ್ಲ. ಒನ್ ಸೈಡ್ ಮ್ಯಾಚ್ ಆಗಿದ್ದು, ಸಂಡೇ ಕ್ರಿಕೆಟ್ ಪ್ರಿಯರಿಗೆ ರಸದೌತಣ ಕೊಡಲಿಲ್ಲ. ಭಾರತ ತಂಡವು ಹತ್ತು ವಿಕೆಟ್ ಗಳ ಗೆಲುವು ದಾಖಲಿಸಿ, ತಾನು ಕ್ರಿಕೆಟ್ ನಲ್ಲಿ ಈಗಲೂ ಬಲಾಢ್ಯ ಎಂದು ಸಾಬೀತುಪಡಿಸಿತು. ವಿಶ್ವಕಪ್ ಗೂ ಮುನ್ನ ನಡೆದ ಈ ಟೂರ್ನಿಯಲ್ಲಿ ಭಾರತ ಗೆದ್ದು ಗೆಲುವಿನ ನಗೆ ಬೀರಿತು.
ಟಾಸ್ ಗೆದ್ದ ಶ್ರೀಲಂಕಾ ತಂಡವು ಬ್ಯಾಟಿಂಗ್ ಆಯ್ದುಕೊಂಡಿತು. ಕುಸಾಲ್ ಮೆಂಡಿಸ್ 17 ಹಾಗೂ ದುನಿತ್ ವೆಲ್ಲಲಗೆ 8 ರನ್ ಬಾರಿಸಿದ್ದು ಬಿಟ್ಟರೆ ಉಳಿದವರದ್ದು ಬಂದ ಪುಟ್ಟ ಹೋದ ಪುಟ್ಟ ಅಂತಿತ್ತು. ಬ್ಯಾಟಿಂಗ್ ನಲ್ಲಿ ತೀರಾ ಕಳಪೆ ಪ್ರದರ್ಶನ ನೀಡಿದ ಸಿಂಹಳೀಯರು ಕೇವಲ 50ರನ್ ಗೆ ಸರ್ವಪತನವಾಯಿತು.
ಏಳು ಓವರ್ ಎಸೆದ ಮೊಹಮ್ಮದ್ ಸಿರಾಜ್ ಅವರು ಕೇವಲ 21 ರನ್ ನೀಡಿ ಆರು ವಿಕೆಟ್ ಕಬಳಿಸುವ ಮೂಲಕ ಶ್ರೀಲಂಕಾ ಬ್ಯಾಟಿಂಗ್ ಸರ್ವಪತನಕ್ಕೆ ಕಾರಣರಾದರು.
ಒಂದೇ ಓವರ್ ನಲ್ಲಿ ನಾಲ್ಕು ವಿಕೆಟ್ ಪಡೆಯುವ ಮೂಲಕ ಸಿಂಹಳೀಯರ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಹಾರ್ದಿಕ್ ಪಾಂಡ್ಯ 2. 2 ಓವರ್ ಗಳಲ್ಲಿ ಕೇವಲ ಮೂರು ರನ್ ನೀಡಿ 3 ವಿಕೆಟ್ ಪಡೆದರೆ, ಜಸ್ಪಿತ್ ಬೂಮ್ರಾ ಐದು ಓವರ್ ಎಸೆದು 23 ರನ್ ನೀಡಿ 1 ವಿಕೆಟ್ ಕಬಳಿಸಿದರು. ಕೇವಲ 15.2 ಓವರ್ ಗಳಿಗೆ 50 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು.
ಸುಲಭ ಗುರಿ ಬೆನ್ನತ್ತಿದ ಭಾರತ ತಂಡವು ಶುಭಮನ್ ಗಿಲ್ 19 ಎಸೆತಗಳಲ್ಲಿ 27 ರನ್ ಹಾಗೂ ಇಶಾನ್ ಕಿಶಾನ್ 18 ಎಸೆತಗಳಲ್ಲಿ 23 ರನ್ ಗಳಿಸುವ ಮೂಲಕ ಕೇವಲ 6.1 ಓವರ್ ಗಳಲ್ಲಿ 51 ರನ್ ಗಳಿಸಿ ಹತ್ತು ವಿಕೆಟ್ ಗಳ ಭರ್ಜರಿ ಜಯ ಗಳಿಸಿತು. ಎರಡೂ ತಂಡಗಳು ಕೇವಲ 21 ಓವರ್ ಗಳಷ್ಟೇ ಪಂದ್ಯ ಮುಕ್ತಾಯ ಕಂಡಿತು.
ಪಂದ್ಯಾವಳಿಯಲ್ಲಿ ಭಾರತ ತಂಡವು ಬಾಂಗ್ಲಾದೇಶದ ವಿರುದ್ಧ ವಿರೋಚಿತ ಸೋಲು ಕಂಡಿದ್ದು ಬಿಟ್ಟರೆ, ಪಾಕ್ ವಿರುದ್ಧದ ಮೊದಲ ಪಂದ್ಯ ಮಳೆಯಿಂದ ಫಲಿತಾಂಶ ಬರಲಿಲ್ಲ. ಉಳಿದ ಪಂದ್ಯಗಳಲ್ಲಿ ಭರ್ಜರಿ ಜಯ ಗಳಿಸಿತ್ತು. ಚಾಂಪಿಯನ್ ಶಿಪ್ ನಲ್ಲಿ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತ ಐದು ವರ್ಷಗಳ ಬಳಿಕ ಪ್ರಶಸ್ತಿ ಗೆದ್ದು ಸಂಭ್ರಮದ ನಗೆ ಬೀರಿತು.
ಏಷ್ಯಾ ಕಪ್ (Asia Cup) ಗೆದ್ದು ಗೌರಿ ಗಣೇಶ ಹಬ್ಬಕ್ಕೆ ಟೀಂ ಇಂಡಿಯಾ ಆಟಗಾರರು ಕ್ರಿಕೆಟ್ ಪ್ರಿಯರಿಗೆ ಸಿಹಿದೂಟ ನೀಡಿದರು. ಯಾವುದೇ ಹಂತದಲ್ಲಿಯೂ ಪ್ರತಿರೋಧ ಒಡ್ಡದ ಶ್ರೀಲಂಕಾ ಸುಲಭ ತುತ್ತಾಯಿತು. ಆರು ವಿಕೆಟ್ ಪಡೆದು ಶ್ರೀಲಂಕಾ ಬ್ಯಾಟಿಂಗ್ ಮಗ್ಗಲು ಮುರಿದ ಮೊಹಮ್ಮದ್ ಸಿರಾಜ್ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.