SUDDIKSHANA KANNADA NEWS/ DAVANAGERE/ DATE:12-03-2025
ದಾವಣಗೆರೆ: ಜಿಲ್ಲೆಯಾದ್ಯಂತ ಮಾರ್ಚ್ 13 ಮತ್ತು ಕಾಮದಹನ ಮತ್ತು 14ರಂದು ಹೋಳಿ ಹಬ್ಬವನ್ನು ಆಚರಣೆ ಮಾಡುವುದಾಗಿ ತಿಳಿದು ಬಂದಿದ್ದು, ಸಾರ್ವಜನಿಕರು ಈ ಸಂದರ್ಭದಲ್ಲಿ ಸಡಗರ ಸಂಭ್ರಮದಿಂದ ಕಾಮದಹನ ಹಾಗೂ ಹೋಳಿ ಹಬ್ಬವನ್ನು ಆಚರಿಸಲು ಅಭ್ಯಂತರವಲ್ಲ. ಆದ್ರೆ, ದಾವಣಗೆರೆ ನಗರ ಸೇರಿದಂತೆ ಜಿಲ್ಲೆಯಾದ್ಯಾಂತ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಪೊಲೀಸ್ ಇಲಾಖೆಯು ಕಟ್ಟುನಿಟ್ಟಿನ ಸೂಚನೆ ನೀಡಿದೆ. ಇದನ್ನು ಪಾಲಿಸದಿದ್ದರೆ ಕ್ರಮ ಖಚಿತ ಎಂಬ ಎಚ್ಚರಿಕೆ ಕೊಟ್ಟಿದೆ.
ಯಾವುದೇ ವ್ಯಕ್ತಿಗಳ ಮೇಲೆ ಒತ್ತಾಯ ಪೂರ್ವಕವಾಗಿ ಬಣ್ಣ ಎರಚುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಪಿಯುಸಿ ಪರೀಕ್ಷೆಗಳು ಹಾಗೂ ಇತರೆ ಪರೀಕ್ಷೆಗಳು ನಡೆಯುತ್ತಿರುವುದರಿಂದ ಪರೀಕ್ಷೆಗೆ ಹಾಜರಾಗುವಂತಹ ವಿದ್ಯಾರ್ಥಿಗಳಿಗೆ ಯಾವುದೇ ಬಣ್ಣ ಎರಚಬಾರದು, ಯಾರಾದರೂ ಕಿಡಿಗೇಡಿತನಕ್ಕೆ ಮುಂದಾದಲ್ಲಿ ಕಠಿಣ ಕಾನೂನು ಕ್ರಮ ಖಚಿತ.
ಪೇಂಟ್, ವಾರ್ನಿಷ್, ಆಸಿಡ್, ಡಾಂಬರ್, ಗಾಣದ ಎಣ್ಣೆ, ಮೊಟ್ಟೆ ಹಾಗೂ ಯಾವುದೇ ಅಪಾಯಕಾರಿ ರಾಸಾಯನಿಕ ಮಿಶ್ರಣಗಳನ್ನು ಮೈಮೇಲೆ ಎರಚುವವರ ವಿರುದ್ಧ ಮತ್ತು ವಾಹನಗಳಲ್ಲಿ ಸಂಚರಿಸುವ ಪ್ರಯಾಣಿಕರ ಮತ್ತು ನೌಕರರು ಹಾಗೂ ಶಾಲಾ ವಿದ್ಯಾರ್ಥಿಗಳ ಮೇಲೆ ಬಣ್ಣ ಎರಚಬಾರದು. ಸಾರ್ವಜನಿಕ ನೀರು ಸರಬರಾಜು ಸ್ಥಳಗಳಲ್ಲಿ ಬಣ್ಣ ತೊಳೆದು ನೀರನ್ನು ಮಲೀನ ಮಾಡಬಾರದು.
ಹೋಳಿ ಹಬ್ಬದ ನೆಪದಲ್ಲಿ ಸಾರ್ವಜನಿಕರಿಂದ ಒತ್ತಾಯ ಪೂರ್ವಕವಾಗಿ ಹಣ ವಸೂಲಿ ಮಾಡುವಂತಿಲ್ಲ. ವಿಶೇಷವಾಗಿ ಮೆಡಿಕಲ್ ಮತ್ತು ಇಂಜಿನಿಯರ್ ವಿದ್ಯಾರ್ಥಿಗಳು ಒಂದು ವಿದ್ಯಾರ್ಥಿ ನಿಲಯದಿಂದ ಇನ್ನೊಂದು ವಿದ್ಯಾರ್ಥಿ ನಿಲಯಕ್ಕೆ ಹೋಗಿ ಬಣ್ಣ ಎರಚುವುದಾಗಲಿ ಅಥವಾ ಮಹಿಳಾ ವಿದ್ಯಾರ್ಥಿ ನಿಲಯಗಳ ಬಳಿ ತೆರಳಿ ಮಹಿಳಾ ವಿದ್ಯಾರ್ಥಿಗಳ ಮೇಲೆ ಬಣ್ಣ ಎರಚುವುದನ್ನು ನಿಷೇಧಿಸಿದ್ದು, ಯಾರಾದರೂ ಕಿಡಿಗೇಡಿತನಕ್ಕೆ ಮುಂದಾದರೆ ಸಹಿಸುವ ಪ್ರಶ್ನೆಯೇ ಇಲ್ಲ.
ಧ್ವನಿವರ್ಧಕ ಅಳವಡಿಕೆ ನಿಯಮವನ್ನು ಮತ್ತು ಅನುಮತಿಯನ್ನು ಸಂಬಂಧಪಟ್ಟ ಆಯೋಜಕರು ಕಟ್ಟುನಿಟ್ಟಾಗಿ ಪಾಲಿಸುವುದು. ಬಣ್ಣ ಎರಚುವ ನೆಪದಲ್ಲಿ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತನೆ ಮಾಡುವವರು, ಚುಡಾಯಿಸುವವರು ಕಂಡು ಬಂದಲ್ಲಿ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲಾಗುವುದು. ಮದ್ಯಪಾನ ಸೇವನೆ ಮಾಡಿ ಅತಿವೇಗ ಅಪಾಯಕಾರಿಯಾಗಿ ವಾಹನ ಚಾಲನೆ ಮಾಡಬಾರದು.
ಬಣ್ಣ ಹಚ್ಚುವ ಸಮಯದ ಕೊನೆಯ ಹಂತದಲ್ಲಿ ಕೆಲವು ಕಿಡಿಗೇಡಿಗಳು ಮೈ ಮೇಲಿನ ಬಟ್ಟೆಗಳನ್ನು ಹರಿದು ಸಾರ್ವಜನಿಕವಾಗಿ ಅಸಹ್ಯವಾಗುವ ರೀತಿಯಲ್ಲಿ ನೃತ್ಯ ಮಾಡುವಂತಿಲ್ಲ. ಧಾರ್ಮಿಕ ಕಟ್ಟಡಗಳಾದ ಚರ್ಚು, ಮಸೀದಿ, ದರ್ಗಾ ಮತ್ತು ದೇವಾಲಯಗಳಿಗೆ ಬಣ್ಣ ಎರಚವಂತಿಲ್ಲ. ದ್ವಿಚಕ್ರ ವಾಹನಗಳಲ್ಲಿ 3 ಜನರು ಸೇರಿ ಸವಾರಿ ಮಾಡಿಕೊಂಡು ಚಲಿಸುವುದಾಗಲೀ, ಬೈಕ್ ವೀಲಿಂಗ್ ಮಾಡುವುದಾಗಲೀ, ವಾಹನದ ಸೈಲೆನ್ಸ್ರ್ಗಳನ್ನು ತೆಗೆದು ಕರ್ಕಶವಾದ ಶಬ್ದವನ್ನು
ಉಂಟುಮಾಡುವ ಸೈಲೆನ್ಸ್ರ್ಗಳನ್ನು ಉಪಯೋಗಿಸುವುದು ಕಂಡುಬದಲ್ಲಿ ಅಂತಹ ವಾಹನಗಳನ್ನು ಸ್ವಾದೀನ ಪಡಿಸಿಕೊಳ್ಳಲಾಗುವುದು.
ದ್ವಿಚಕ್ರ ವಾಹನಗಳ ನಂಬರ್ ಪ್ಲೇಟ್ಗಳಿಗೆ ನಂಬರ್ ಕಾಣದಂತೆ ಬಟ್ಟೆ ಕಟ್ಟುವುದು ಹಾಗೂ ಬಣ್ಣ, ಗ್ರೀಸ್ ಹಚ್ಚಿಕೊಂಡು ಸಂಚರಿಸುವುದು ಅಪರಾಧವಾಗುತ್ತದೆ. ಅಂತಹ ವಾಹನಗಳು ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕಾಮದಹನ ಹಾಗೂ ಹೋಳಿ ಹಬ್ಬವನ್ನು ನಿಗಧಿತ ಸಮಯಕ್ಕೆ ಮುಕ್ತಾಯ ಮಾಡುವುದು.
ಹೋಳಿ ಹಬ್ಬದ ಸಂಬಂಧ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವಂತಹ ಪ್ರಚೋಧನಕಾರಿ ಪೋಸ್ಟರ್ ಗಳನ್ನು ಹಾಕುವುದಾಗಲೀ, ಸುಳ್ಳುಸುದ್ದಿ-ಪ್ರಚೋದನಕಾರಿ ಸಂದೇಶಗಳನ್ನು ಹರಿಬಿಡುವುದಾಗಲಿ ಹಾಗೂ ಯಾವುದೇ ಧರ್ಮದ ವಿರುದ್ದ, ವ್ಯಕ್ತಿಯ ವಿರುದ್ದಅವಹೇಳನಕಾರಿ ಪೋಸ್ಟರ್,ಸಂದೇಶಗಳನ್ನುಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದು, ರವಾನಿಸುವುದು ಕಂಡು ಬಂದಲ್ಲಿ ಅಂತವರ ವಿರುದ್ಧ ಕಟ್ಟು ನಿಟ್ಟಿನ ಕಾನೂನು ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಎಚ್ಚರಿಕೆ ನೀಡಿದ್ದಾರೆ.