ದಾವಣಗೆರೆ: ಭದ್ರಾ ಜಲಾಶಯದ ನೀರು ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಮತ್ತು ಬಿಜೆಪಿ ಶಾಸಕ ಬಿ.ಪಿ. ಹರೀಶ್ ವಿವಾದ ಈಗ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದೆ.
ರಾಷ್ಟ್ರೀಯ ಪ್ರಮುಖ ಸುದ್ದಿ ವಾಹಿನಿಗಳಲ್ಲಿ ಈ ಸುದ್ದಿ ಪ್ರಕಟಗೊಂಡಿದ್ದು, ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ಭದ್ರಾ ಜಲಾಶಯದಿಂದ ನೀರು ಬಿಡುಗಡೆ ಮಾಡುವ ವಿಚಾರವಾಗಿ ರೈತರೊಂದಿಗೆ ಮಾತನಾಡುವ ವೇಳೆ ರೈತರೊಬ್ಬರಿಗೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಹರಿಹರ ಬಿಜೆಪಿ ಶಾಸಕನ ಅಸಾಂವಿಧಾನಿಕ ಪದಗಳು ಹಾಗೂ ಬೂಟ್ ನಿಂದ ಹೊಡೆಯುವೆ ಎಂದಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಬಿ. ಪಿ. ಹರೀಶ್ ಅಪ್ಪನಿಗೆ ಹುಟ್ಟಿದ್ದರೆ ಬೂಟ್ ನಲ್ಲಿ ಹೊಡೆಯಲಿ ಎಂದು ಸವಾಲು ಹಾಕಿದ್ದರು. ಈ ವಿಚಾರ ರಾಜಕೀಯ ಬಿರುಗಾಳಿಗೆ ಕಾರಣವಾಗಿದೆ.
ಭದ್ರಾ ಜಲಾಶಯದಿಂದ ನೀರು ಹರಿಸುವಂತೆ ಒತ್ತಾಯಿಸಿ ಹರಿಹರ ಪ್ರದೇಶದ ರೈತರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಶಾಸಕ ಬಿ.ಪಿ. ಹರೀಶ್ ಅವರ ಸಲಹೆ ಮೇರೆಗೆ ತಾವು ಬಂದಿರುವುದಾಗಿ ರೈತರು ಸಚಿವರಿಗೆ ತಿಳಿಸಿದರು. ಇದರಿಂದ ಆಕ್ರೋಶಗೊಂಡ ಸಚಿವರು ಶಾಸಕರ ವಿರುದ್ಧ ಏಕವಚನ ಬಳಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ, ಶಾಸಕರನ್ನು ‘ಅಣ್ಣ’ ಎಂದು ಕರೆಯಬೇಡಿ ಎಂದು ಸಚಿವರು ರೈತರಿಗೆ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆಯ ಬಳಿಕ ತೀವ್ರವಾಗಿ ಪ್ರತಿಕ್ರಿಯಿಸಿರುವ ಶಾಸಕ ಬಿ.ಪಿ. ಹರೀಶ್, “ರೈತರ ಕಷ್ಟಗಳಿಗೆ ಸ್ಪಂದಿಸಬೇಕಾದ ಸಚಿವರು, ನನ್ನ ವಿರುದ್ಧ ಮತ್ತು ನನ್ನ ತಂದೆಯವರ ವಿರುದ್ಧ ಕೀಳುಮಟ್ಟದ ಭಾಷೆ ಬಳಸಿದ್ದಾರೆ. ಅಧಿಕಾರವಿದೆ ಎಂದು ಅಹಂಕಾರದಿಂದ ವರ್ತಿಸುತ್ತಿರುವ ಇವರಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ” ಎಂದು ಕಿಡಿಕಾರಿದ್ದಾರೆ.
ಮತ್ತೊಂದೆಡೆ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಕೂಡ ಸಚಿವರ ವರ್ತನೆಯನ್ನು ತೀವ್ರವಾಗಿ ಖಂಡಿಸಿದ್ದು, ಇದು ಕೇವಲ ಒಬ್ಬ ಶಾಸಕರಿಗೆ ಮಾಡಿದ ಅವಮಾನವಲ್ಲ, ಆ ಕ್ಷೇತ್ರದ ಸಮಸ್ತ ಜನತೆಗೆ ಮಾಡಿದ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಯ ಹಿನ್ನೆಲೆ ಏನು?
ಹರಿಹರ ಭಾಗಕ್ಕೆ ಭದ್ರಾ ಜಲಾಶಯದಿಂದ ನೀರು ಹರಿಸದಿರುವುದನ್ನು ಖಂಡಿಸಿ, ಸ್ಥಳೀಯ ರೈತರು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ಮುಂದಾಗಿದ್ದರು. ಈ ವೇಳೆ ರೈತರು, “ನಮಗೆ ನೀರು ಬೇಕಾದರೆ ಶಾಸಕ ಬಿ.ಪಿ. ಹರೀಶ್ ಅವರನ್ನು ಕೇಳಿ, ಸಚಿವರನ್ನು ಸಂಪರ್ಕಿಸಿ ಎಂದು ಅವರು ಹೇಳಿದ್ದಾರೆ” ಎಂದು ತಿಳಿಸಿದ್ದಾರೆ. ರೈತರ ಬಾಯಲ್ಲಿ ಶಾಸಕ ಹರೀಶಣ್ಣನ ಹೆಸರು ಕೇಳುತ್ತಿದ್ದಂತೆ ರೊಚ್ಚಿಗೆದ್ದ ಸಚಿವ ಮಲ್ಲಿಕಾರ್ಜುನ್, ಆಕ್ಷೇಪಾರ್ಹ ಹಾಗೂ ಅಸಂಸದೀಯ ಪದಗಳನ್ನು ಬಳಸಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಸಚಿವರು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಶಾಸಕ ಬಿ.ಪಿ. ಹರೀಶ್ ತಿರುಗೇಟು ಹಾಗೂ ಸವಾಲುಸಚಿವರ ಈ ವರ್ತನೆಗೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಶಾಸಕ ಬಿ.ಪಿ. ಹರೀಶ್, “ನನಗೆ ಬೂಟಿನಲ್ಲಿ ಹೊಡೆಯುತ್ತೇನೆ ಎಂದು ಸಚಿವರು ಬೆದರಿಕೆ ಹಾಕಿದ್ದಾರೆ. ಅವರ ಅಪ್ಪ ಹುಟ್ಟಿಬಂದರೂ ನಮ್ಮ ಕುಟುಂಬಕ್ಕಾಗಲಿ, ನನಗಾಗಲಿ ಏನೂ ಮಾಡಲು ಆಗುವುದಿಲ್ಲ” ಎಂದು ತಿರುಗೇಟು ನೀಡಿದ್ದಾರೆ.
ಸಚಿವರ ಭ್ರಷ್ಟಾಚಾರ ಮತ್ತು ದುಷ್ಟಶಕ್ತಿಗಳನ್ನು ಎದುರಿಸಲು ತಮಗೆ 43 ವರ್ಷಗಳ ರಾಜಕೀಯ ಅನುಭವವಿದೆ ಎಂದು ಹೇಳಿರುವ ಹರೀಶ್, “ಜನರಿಗೋಸ್ಕರ ಹೋರಾಟ ಮಾಡುವ ನಮ್ಮನ್ನು ಇಂತಹ ಗೊಡ್ಡು ಬೆದರಿಕೆಗಳಿಂದ ಮಟ್ಟಹಾಕಲು ಸಾಧ್ಯವಿಲ್ಲ” ಎಂದು ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ದಿವಂಗತ ಶಾಮನೂರು ಶಿವಶಂಕರಪ್ಪ ಹಾಗೂ ಸಚಿವರ ಕಾರ್ಯವೈಖರಿ ಮತ್ತು ಸಂಸ್ಕೃತಿಯ ಬಗ್ಗೆಯೂ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ರಾಜಕೀಯ ಕಿಡಿ ಹೊತ್ತಿಸಿದ್ದಾರೆ. ಒಟ್ಟಿನಲ್ಲಿ, ದಾವಣಗೆರೆ ಜಿಲ್ಲೆಯಲ್ಲಿ ಈ ಇಬ್ಬರು ನಾಯಕರ ನಡುವಿನ ಜಟಾಪಟಿ ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ತಲುಪಲಿದೆ ಎಂಬುದು ಕುತೂಹಲ ಮೂಡಿಸಿದೆ.
- Bhadra water dispute
- BJP vs Congress
- BP Harish
- DAVANAGERE NEWS
- Davanagere political clash
- Harihar MLA
- Karnataka minister controversy.
- Karnataka Politics
- Shamanur Shivashankarappa
- SS Mallikarjun
- ಎಸ್. ಎಸ್. ಮಲ್ಲಿಕಾರ್ಜುನ್
- ಕರ್ನಾಟಕ ರಾಜಕೀಯ
- ದಾವಣಗೆರೆ ರಾಜಕೀಯ ಜಗಳ
- ದಾವಣಗೆರೆ ಸುದ್ದಿ
- ಬಿ. ಪಿ. ಹರೀಶ್
- ಬಿಜೆಪಿ ವರ್ಸಸ್ ಕಾಂಗ್ರೆಸ್ ದಾವಣಗೆರೆ
- ಭದ್ರಾ ನೀರು ವಿವಾದ
- ರೈತರ ಪ್ರತಿಭಟನೆ
- ಶಾಮನೂರು ಶಿವಶಂಕರಪ್ಪ
- ಹರಿಹರ ಶಾಸಕ





Leave a comment