ತಿರುವನಂತಪುರಂ: ಮುಸ್ಲಿಂ ಮಹಿಳೆಯರು ಸಾರ್ವಜನಿಕ ವೇದಿಕೆಗಳಿಗೆ ಬರಬಾರದು, ಅವರು ಮನೆಗಳಿಗಷ್ಟೇ ಸೀಮಿತವಾಗಿರಬೇಕು ಎಂಬ ಭಾರತದ ಗ್ರಾಂಡ್ ಮುಫ್ತಿ ಹಾಗೂ ಪ್ರಭಾವಿ ಮುಸ್ಲಿಂ ಧರ್ಮಗುರು ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರ ಹೇಳಿಕೆ ಕೇರಳದಲ್ಲಿ ರಾಜಕೀಯ ಮತ್ತು ಧಾರ್ಮಿಕ ವಲಯದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ.
ಕಾಂತಪುರಂ ಅವರ ಈ ಹೇಳಿಕೆಯನ್ನು ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಖಂಡಿಸಿದ್ದು, “ಇದು 21ನೇ ಶತಮಾನಕ್ಕೆ ಸೂಕ್ತವಲ್ಲದ 19ನೇ ಶತಮಾನದ ಹಿಂಜರಿತದ ಆಲೋಚನೆ” ಎಂದು ಟೀಕಿಸಿದ್ದಾರೆ. ಪ್ರವಾದಿ ಮೊಹಮ್ಮದರ ಪತ್ನಿಯರಾದ ಖದೀಜಾ (ವ್ಯಾಪಾರಸ್ಥೆ) ಹಾಗೂ ಆಯಿಷಾ (ಸೇನಾ ನಾಯಕಿ) ಅವರ ಐತಿಹಾಸಿಕ ಉದಾಹರಣೆಗಳನ್ನು ನೀಡಿದ ಮುಖ್ಯಮಂತ್ರಿಗಳು, ಇಸ್ಲಾಂ ಇತಿಹಾಸದಲ್ಲೂ ಮಹಿಳೆಯರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದಿದ್ದಾರೆ.
ಆದರೆ ಮುಖ್ಯಮಂತ್ರಿಗಳ ಈ ಹೇಳಿಕೆಗೆ ಕಾಂತಪುರಂ ಬಣದ ವಿದ್ವಾಂಸರು ಹಾಗೂ ಸಮಸ್ತ ಕೇರಳ ಜಮೀಇಯ್ಯತುಲ್ ಉಲಮಾ ಸಂಘಟನೆಯ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸತೀಶನ್ ಅವರನ್ನು ಭೇಟಿಯಾದ ಧಾರ್ಮಿಕ ನಿಯೋಗವು, ಅವರು ಇಸ್ಲಾಂ ಇತಿಹಾಸವನ್ನು ತಪ್ಪಾಗಿ ಅರ್ಥೈಸುತ್ತಿದ್ದಾರೆ ಎಂದು ಆರೋಪಿಸಿದೆ. ರಾಜ್ಯವನ್ನು ಆಳುವುದು ಮುಖ್ಯಮಂತ್ರಿಗಳ ಜವಾಬ್ದಾರಿಯೇ ಹೊರತು ಧರ್ಮಕ್ಕೆ ವ್ಯಾಖ್ಯಾನ ನೀಡುವುದಲ್ಲ ಎಂದು ಸುನ್ನಿ ವಿದ್ಯಾರ್ಥಿ ಒಕ್ಕೂಟ (SSF) ಕಿಡಿಕಾರಿದೆ.





Leave a comment