ಕೋಲ್ಕತ್ತಾ: ಮುಂಬರುವ ದುರ್ಗಾ ಪೂಜೆ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ಪೂಜಾ ಸಮಿತಿಗಳಿಗೆ ವಿಶ್ವ ಹಿಂದೂ ಪರಿಷತ್ (VHP) ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಪೂಜಾ ಪಂಡಾಲ್ಗಳ ಒಳಗೆ ಮತ್ತು ಸುತ್ತಮುತ್ತ ನಾನ್-ವೆಜ್ (ಮಾಂಸಾಹಾರ) ಆಹಾರ ಪದಾರ್ಥಗಳ ಮಾರಾಟ ಹಾಗೂ ಸೇವನೆಯನ್ನು ಸಂಪೂರ್ಣವಾಗಿ ತಡೆಯಬೇಕು ಎಂದು ಮನವಿ ಮಾಡಿದೆ.
ಬಂಗಾಳದಲ್ಲಿ ದುರ್ಗಾ ಪೂಜೆಯು ಕಟ್ಟುನಿಟ್ಟಾಗಿ ಸಸ್ಯಹಾರಿ ಸಂಪ್ರದಾಯವನ್ನು ಹೊಂದಿಲ್ಲ ಎಂಬುದು ತಮಗೆ ತಿಳಿದಿದೆ ಎಂದು ಸ್ಪಷ್ಟಪಡಿಸಿರುವ ವಿಎಚ್ಪಿ, ಈ ಕುರಿತು ಯಾವುದೇ ಸಂಪೂರ್ಣ ನಿಷೇಧವನ್ನು ಕೋರುತ್ತಿಲ್ಲ. ಆದರೆ, ತಾಯಿ ದೇವಿಯ ಮೂರ್ತಿಯ ಪಾವಿತ್ರ್ಯತೆ ಮತ್ತು ಸ್ವಚ್ಛತೆಯನ್ನು ಕಾಪಾಡುವುದು ಸನಾತನಿಗಳ ಕರ್ತವ್ಯ ಎಂದು ತಿಳಿಸಿದೆ. ಮಾಂಸಾಹಾರ ಮಾರಾಟ ಮಾಡುವುದಾದರೆ ಪಂಡಾಲ್ನಿಂದ ದೂರವಿರುವ ನಿಗದಿತ ಪ್ರದೇಶಗಳಲ್ಲಿ ಮಾತ್ರ ನಡೆಸಬೇಕು ಹಾಗೂ ಅದರ ತ್ಯಾಜ್ಯಗಳು ಪಂಡಾಲ್ ಆವರಣಕ್ಕೆ ಬರದಂತೆ ಎಚ್ಚರಿಕೆ ವಹಿಸಬೇಕು ಎಂದು ಒತ್ತಾಯಿಸಿದೆ.
ಪೂಜಾ ಸಮಿತಿಗಳು ದೇವಿಯ ಮೂರ್ತಿಯ ಪಾವಿತ್ರ್ಯತೆಯನ್ನು ಕಾಪಾಡಲು ವಿಫಲವಾದರೆ ತಮ್ಮ ಸಂಘಟನೆಯು ಮಧ್ಯಪ್ರವೇಶಿಸಬೇಕಾಗುತ್ತದೆ ಎಂದು ವಿಎಚ್ಪಿ ಎಚ್ಚರಿಕೆ ನೀಡಿದೆ. ಹಾಗೂ “ಧರ್ಮ ಯಾರದರೂ ಉತ್ಸವ ಎಲ್ಲರಿಗೂ” ಎಂಬ ವಾದವನ್ನು ತಳ್ಳಿಹಾಕಿ, ಹಿಂದೂ ಧಾರ್ಮಿಕ ಸಂಪ್ರದಾಯಗಳನ್ನು ಎತ್ತಿಹಿಡಿಯುವ ಜವಾಬ್ದಾರಿ ಕೇವಲ ಹಿಂದೂಗಳದ್ದಾಗಿದೆ ಎಂದು ಸ್ಪಷ್ಟಪಡಿಸಿದೆ.





Leave a comment